ಮಧುಗಿರಿ: ಪಟ್ಟಣದ ಪಾವಗಡ ಸರ್ಕಲ್ ಬಳಿ ಇರುವ ಅಂಬೇಡ್ಕರ್ ಪುತ್ಥಳಿಯ ಆವರಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಇವರ ಸಹಕಾರದೊಂದಿಗೆ ಹೊರಗುತ್ತಿಗೆ ಕಾರ್ಮಿಕರು ಬೃಹತ್ ಅಮರಣಾಂತಿಕ ಹೋರಾಟ ಆರಂಭಿಸಿದ್ದಾರೆ.
ತಾಲೂಕಿನ ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಮುರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಅಲ್ಪಸಂಖ್ಯಾತರ ಇಲಾಖೆ ವಿದ್ಯಾರ್ಥಿ ನಿಲಯಗಳ ಹೊರಗುತ್ತಿಗೆ ಕಾರ್ಮಿಕರಿಂದ ಬೃಹತ್ ಅಮರಣಾಂತಿಕ ಹೋರಾಟ ನಡೆಯತಿದೆ.
ಹೋರಾಟವನ್ನುದ್ದೇಶಿಸಿ ಮಾತನಾಡಿದ ಡಾ. ದೊಡ್ಡೇರಿ ಕಣಿಮಯ್ಯ, ವಿವಿಧ ಇಲಾಖೆಗಳ ಒಳಗೊಂಡ ಡಾಟಾ ಎಂಟ್ರಿ ಆಪರೇಟರ್, ಚಾಲಕರು, ಸಹಾಯಕರು ಸೇರಿದಂತೆ ‘ಸಿ’ ಮತ್ತು ‘ಡಿ’ ವೃಂದದ ಹುದ್ದೆಗಳಿಗೆ ಏಜೆನ್ಸಿಗಳ ಮೂಲಕ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುತ್ತಿವೆ. ಆದರೆ, ಈ ಇಲಾಖೆಗಳು ನೌಕರರನ್ನು ಜೀತದಾಳುಗಳಂತೆ ದುಡಿಸಿಕೊಂಡರೆ, ಸರ್ಕಾರ ನಿಗದಿಪಡಿಸಿದ ಕನಿಷ್ಠ ವೇತನ ನೀಡದೆ, ಏಜೆನ್ಸಿಗಳು ಶೋಷಿಸುತ್ತಿವೆ ಎಂದು ಆರೋಪಿಸಿದರು.
ಹೊರ ಗುತ್ತಿಗೆ ನೌಕರರಿಗೂ ಸರ್ಕಾರಿ ಖಜಾನೆ ಮೂಲಕ ವೇತನ ಪಾವತಿಸಲು ಖಜಾನೆ ಮತ್ತು ಆರ್ಥಿಕ ಇಲಾಖೆ ಕ್ರಮ ತೆಗೆದುಕೊಳ್ಳಬೇಕು. ನೌಕರರ ವೇತನ ಪಾವತಿ ಬಗ್ಗೆ ರ್ಯಾಂಡಮ್ ಆಗಿ ಪರಿಶೀಲಿಸಬೇಕು. ರಾಜ್ಯ ಸರ್ಕಾರವು ಕೂಡಲೇ ಒಂದು ಸಮಿತಿ ರಚಿಸಿ ಕನಿಷ್ಠ ವೇತನ ನೀಡದ ಏಜೆನ್ಸಿಗಳ ವಿರುದ್ಧ ಕ್ಲೈಮ್ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಉದ್ಯೋಗದಾತರು ಮತ್ತು ಏಜೆನ್ಸಿಗಳು ಒಡಂಬಡಿಕೆ ಮಾಡಿಕೊಳ್ಳಬೇಕು. ಅದನ್ನು ಉಲ್ಲಂಘಿಸಿದ ಏಜೆನ್ಸಿಗಳನ್ನು ತೆಗೆದು ಹಾಕಬೇಕು. ರಾಜ್ಯ ಸರ್ಕಾರ ಅಗತ್ಯ ಕ್ರಮ ವಹಿಸಿ ಹೊರ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸದಿದ್ದರೆ, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ. ಮುಂದಿನ ದಿನಗಳಲ್ಲಿ ಈ ಹೋರಾಟದ ಭಾಗವಾಗಿ ಮಧುಗಿರಿಯಿಂದ ವಿಧಾನಸೌಧಕ್ಕೆ ಚಲೋ ಎಂಬ ಕಾಲ್ನಡಿಗೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz