ತುಮಕೂರು: ನಾನು ಜೈಲಿನಿಂದ ಹೊರಗೆ ಬಂದ ನಂತರ ಸರಕಾರ ಪತನ ಆಗಲಿದೆ ಎಂದು ವಕೀಲ ದೇವರಾಜೇಗೌಡ ನೀಡಿರುವ ಹೇಳಿಕೆಗೆ ಪತ್ರಿಕ್ರಿಯಿಸಿರುವ ಗೃಹ ಸಚಿವ ಜಿ.ಪರಮೇಶ್ವರ್, ಹಾಗಾದರೆ ದೇವರಾಜೇಗೌಡ ಜೈಲಿನಲ್ಲಿಯೇ ಇರಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ತುಮಕೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎಸ್ ಐಟಿಯವರು ವಕೀಲ ದೇವರಾಜೇಗೌಡ ಹೇಳಿಕೆ ಬಗ್ಗೆ “ಅದರ ಸಾಧಕ ಬಾಧಕ ಅರಿತು ಕ್ರಮ ತೆಗೆದುಕೊಳ್ಳುತ್ತಾರೆ” ಎಂದರು.
ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಕೊಲೆಗಳು ಎಷ್ಟು ಆಗಿವೆ ಎಂದು ಹೇಳುವುದಕ್ಕಿಂತ, ಮೊದಲು ಬಿಜೆಪಿ ಆಡಳಿತದ ಅವಧಿಯಲ್ಲಿ ಎಷ್ಟು ಕೊಲೆಗಳು ಆಗಿವೆ ಎಂಬುದನ್ನು ನೆನಪಿಸಿಕೊಳ್ಳಲಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದೆ. ಬಿಜೆಪಿಯವರಿಂದ ಹೇಳಿಸಿಕೊಂಡು ಕೇಳಿಸಿಕೊಂಡು ಕಾನೂನು ಸುವ್ಯವಸ್ಥೆ ಮಾಡುವ ಅಗತ್ಯವಿಲ್ಲ. ಇದಕ್ಕಾಗಿ ಏನು ಕ್ರಮ ಬೇಕಾದ್ರೂ ತೆಗೆದುಕೊಳ್ಳುತ್ತೇವೆ. ರಾಜ್ಯದಲ್ಲಿ ಬಿಜೆಪಿಯವರು ಶಾಂತಿ ಕದಡಲು ಯತ್ನಿಸಿದರೂ ಕೂಡ ಅದನ್ನು ನಿಯಂತ್ರಿಸುವ ಶಕ್ತಿ ಸರಕಾರಕ್ಕೆ ಇದೆ ಎಂದರು.
ಒಂದೊಂದು ಘಟನೆಗೂ ಒಂದೊಂದು ಕಾರಣವಿದೆ. ರಾಜ್ಯದಲ್ಲಿ ಶಾಂತಿಯನ್ನು ಕಾಪಾಡುತ್ತೇವೆ. ಕಾನೂನು ಸುವ್ಯವಸ್ಥೆ ಹಾಳು ಮಾಡಲು ಯತ್ನಿಸಿದರೂ ನಾವು ಬಿಡುವುದಿಲ್ಲ.
ತುಮಕೂರು ಜಿಲ್ಲೆಗೆ ಕುಡಿಯುವ ನೀರು ಯೋಜನೆಗೆ ಹೇಮಾವತಿ ನಾಲೆಯಿಂದ ೨೪ ಟಿಎಂಸಿ ನೀರನ್ನು ನಿಗದಿಪಡಿಸಲಾಗಿದೆ. ಆದರೆ ತುಮಕೂರಿಗೆ ೧೮ ಟಿಎಂಸಿ ಯಷ್ಟು ನೀರು ಸಿಗಲೇ ಇಲ್ಲ. ಗುಬ್ಬಿ ಮತ್ತು ತಿಪಟೂರು, ತುರುವೇಕೆರೆ ತಾಲೂಕಿಗೆ ಹಂಚಿಕೆ ಆಗಿರುವುದು ಹೇಮಾವತಿ ನೀರು ಆಗಿದೆ. ಈ ನಡುವೆ ಕುಣಿಗಲ್ ಕೆರೆಗೆ ನೀರು ಹೋಗಲೂ ಮಾಡಲಾಗಿದೆ. ಈ ನಡುವೆ ಗುಬ್ಬಿ ತಾಲೂಕಿನ ರಂಪುರ ಬಳಿಯಿಂದ ಮಾಗಡಿಗೆ ತೆಗೆದುಕೊಂಡು ಹೋಗುವ ಕುರಿತು ಸರಕಾರದ ಮುಂದೆ ಪ್ರಸ್ತಾವನೆಯೊಂದು ಬಂದಿತ್ತು. ಸರಕಾರ ಇದನ್ನು ಪರಿಗಣಿಸಿ ೧೦೦೦ ಕೋಟಿ ರೂ. ನಿಗಧಿಪಡಿಸಿ ಎಕ್ಸ್ ಪ್ರೆಸ್ ಕೆನಾಲ್ ಮಾಡಬಹುದು ಎಂದು ಅನುಮೋದನೆ ನೀಡಿದೆ. ಇದು ಸರಕಾರದ ತೀರ್ಮಾನವಾಗಿದೆ. ಅದರ ಕುರಿತು ಕೆಲಸ ಆರಂಭವಾಗಿದೆ. ಇದು ಜಿಲ್ಲೆಯ ಇಬ್ಬರು ಸಚಿವರ ನಿರ್ಧಾರವಲ್ಲ ಎಂದರು.
ಈ ನಡುವೆ ಸ್ಥಳೀಯರು ಯೋಜನೆ ಅನುಷ್ಟಾನದಿಂದ ತೊಂದರೆಯಾಗಲಿದೆ ಎಂದು ನನಗೆ ಮನವಿ ಪತ್ರ ನೀಡಿದ್ದಾರೆ. ಕೆ.ಎನ್. ರಾಜಣ್ಣ ಮತ್ತು ನಾನು ಕೂಡ ಕ್ಯಾಬಿನೆಟ್ ನಲ್ಲಿ ಈ ಕುರಿತು ಪ್ರಸ್ತಾಪಿಸಿ ಜಿಲ್ಲೆಗೆ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯಿಂದ ತೊಂದ್ರೆಯಾಗಲಿದೆ ಎಂದು ಹೇಳಿದ್ದೇವೆ. ಇದನ್ನು ವಿರೋಧಪಕ್ಷಗಳು ರಾಜಕೀಯಕರಣಗೊಳಿಸುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವರೊಂದಿಗೆ ಸಮಸ್ಯೆ ಚರ್ಚಿಸಲಿದ್ದೇವೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296