ಪ್ರತಿ ವರ್ಷದಂದು ಮಂಡನೆಯಾಗಲಿರುವ ಬಜೆಟ್ ಗೆ ಜನ ಸಾಮಾನ್ಯರಿಂದ ಹಿಡಿದು ಬೃಹತ್ ಕೈಗಾರಿಕೋದ್ಯಮಿಗಳವರೆಗೆ ಎಲ್ಲರೂ ಕಾತುರದಿಂದ ಕಾಯ್ದು ಕುಳಿತಿರುತ್ತಾರೆ. ಬಜೆಟ್ ಆಧಾರದ ಮೇಲೆ ದೇಶದ, ರಾಜ್ಯದ, ಜಿಲ್ಲೆ, ತಾಲೂಕುಗಳ ಆಯವ್ಯಯ ನಿರ್ಧರಿತವಾಗುತ್ತದೆ ಅಷ್ಟೇ ಅಲ್ಲದೆ ಇದು ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನಲೆಯಲ್ಲಿ ಇಂದು ಸಿಎಂ ಬೊಮ್ಮಾಯಿ ಮಂಡಿಸುತ್ತಿರುವ ಬಜೆಟ್ ಮೇಲೆ ಸಹಜವಾಗಿ ಹೆಚ್ಚಿನ ನಿರೀಕ್ಷೆ ಇದೆ.
ಈ ಹಿನ್ನಲೆಯಲ್ಲಿ ಈಗ ನಾವು ಬಜೆಟ್ ಪರಿಕಲ್ಪನೆ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳಬೇಕಾಗಿದೆ.ಭಾರತದಲ್ಲಿ ಬಜೆಟ್ ಪರಿಕಲ್ಪನೆ ಬೆಳೆದು ಬಂದ ಬಗೆ..
ಪ್ರತಿ ವರ್ಷದ ಆಯವ್ಯಯದ ಲೆಕ್ಕವನ್ನು ಮಂಡಿಸಲಿರುವ ಬಜೆಟ್ ಭವಿಷ್ಯದ ಬೆಳವಣಿಗೆಗೆ ಸಂಬಂಧಿಸಿದಂತೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಇಂತಹ ಬಜೆಟ್ ಪರಿಕಲ್ಪನೆ ಭಾರತದಲ್ಲಿ ಮೊದಲ ಬಾರಿಗೆ ಈಸ್ಟ್ ಇಂಡಿಯಾ ಕಂಪನಿಯ ಸ್ಕಾಟಿಷ್ ಅರ್ಥಶಾಸ್ತ್ರಜ್ಞ ಮತ್ತು ರಾಜಕಾರಣಿ ಜೇಮ್ಸ್ ವಿಲ್ಸನ್ ಅದನ್ನು ಬ್ರಿಟಿಷ್ ರಾಣಿಗೆ ಏಪ್ರಿಲ್ 7, 1860 ರಂದು ಬಜೆಟ್ ಮಂಡಿಸುವ ಮೂಲಕ ಚಾಲನೆಗೆ ಬಂದಿತು. ಇದಾದ ನಂತರ ಸ್ವತಂತ್ರ ಭಾರತದ ಮೊದಲ ಬಜೆಟ್ ಅನ್ನು ನವೆಂಬರ್ 26, 1947 ರಂದು ಅಂದಿನ ಹಣಕಾಸು ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅವರು ಮಂಡಿಸಿದರು.ಕರ್ನಾಟಕದ ಬಜೆಟ್ ಇತಿಹಾಸ:
ಇನ್ನೂ ಕರ್ನಾಟಕದ ಬಜೆಟ್ (Karnataka budget) ಇತಿಹಾಸದ ಮೇಲೆ ಬೆಳಕು ಚೆಲ್ಲಿದಾಗ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯನವರು 1952-53 ರಲ್ಲಿ 21 ಕೋಟಿ ರೂಗಳ ಬಜೆಟ್ ನ್ನು ಮೊದಲ ಬಾರಿಗೆ ಮಂಡಿಸುತ್ತಾರೆ. ಇದಾದ ನಂತರ ಸಾಮಾನ್ಯವಾಗಿ ಹಣಕಾಸು ಸಚಿವ ಖಾತೆಯನ್ನು ಹೊಂದಿರುವ ಮಂತ್ರಿಗಳು ಬಜೆಟ್ ಮಂಡಿಸುತ್ತಾರೆ. ರಾಜ್ಯದಲ್ಲಿ ಅತಿ ಹೆಚ್ಚು ಬಜೆಟ್ ಮಂಡನೆ ಮಾಡಿದ ಕೀರ್ತಿಗೆ ಸಿದ್ಧರಾಮಯ್ಯ (Siddaramaiah) ಮತ್ತು ರಾಮಕೃಷ್ಣ ಹೆಗಡೆ ಅವರಿಗೆ ಸಲ್ಲುತ್ತದೆ.
1966-67 ರಿಂದ 1971-72 ರ ವರೆಗೆ ಮುಖ್ಯಮಂತ್ರಿ ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲ್ ಅವರ ಸಚಿವ ಸಂಪುಟದಲ್ಲಿ ಹಣಕಾಸು ಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ 6 ಬಜೆಟ್ ಮಂಡಿಸಿದ್ದರು.1983 ರಲ್ಲಿ ಮುಖ್ಯಮಂತ್ರಿ ಹುದ್ದೆಯೊಂದಿಗೆ ಹಣಕಾಸು ಖಾತೆಯನ್ನು ನಿರ್ವಹಿಸುವ ಮೂಲಕ ರಾಮಕೃಷ್ಣ ಹೆಗಡೆಯವರು ಒಟ್ಟು 13 ಬಾರಿ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇನ್ನೊಂದೆಡೆಗೆ ಉಪಮುಖ್ಯಮಂತ್ರಿ ಆಗಿದ್ದಾಗ ಹಣಕಾಸು ಖಾತೆಯನ್ನು ಸಹ ನಿರ್ವಹಿಸುತ್ತಿದ್ದ ಮಾಜಿ ಸಿಎಂ ಸಿದ್ಧರಾಮಯ್ಯನವರು ಸಹಿತ 13 ಬಾರಿ ಬಜೆಟ್ ಮಂಡಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.
ವರದಿ: ಆಂಟೋನಿ ಬೇಗೂರು