ತುಮಕೂರು: ಇಲ್ಲಿನ ಪಾಂಡುರಂಗನಗರ (ಎಮ್ಮೆಕೇರಿ) ದಲ್ಲಿರುವ ಕೋಟೆ ಶ್ರೀ ಗ್ರಾಮ ದೇವತೆ ಅಮ್ಮನವರ ಜಾತ್ರಾ ಮಹೋತ್ಸವವು ಆ.3 ರಿಂದ 6ರವರೆಗೆ ಜರುಗಲಿದೆ.
ಆ.3 ರಂದು ಸಂಜೆ ಚಿಕ್ಕಮ್ಮ ಮತ್ತು ಆರತಿಯ ನಡೆ ಮುಡಿಯ ಮೂಲಕ ಚಿಕ್ಕಪೇಟೆ ಶ್ರೀ ಗ್ರಾಮದೇವತೆ ದೇವಸ್ಥಾನದ ಬಳಿ ಜಾತ್ರಾ ಮಂಟಪಕ್ಕೆ ಆಗಮಿಸಿ ಗದ್ದುಗೆಯಾಗುವುದು, ಆ.4 ರಂದು ಬೆಳಿಗ್ಗೆ 8.30ಕ್ಕೆ ಪಾಂಡುರಂಗನಗರದ ಎಮ್ಮೆ ಕೇರಿಯಲ್ಲಿರುವ ಮೂಲ ಶ್ರೀ ಗ್ರಾಮ ದೇವತೆ ಅಮ್ಮನವರ ದೇವಸ್ಥಾನದಲ್ಲಿ ಅಮ್ಮನವರಿಗೆ ಪುಣ್ಯಾರ್ಚನೆ ಮತ್ತು ದೃಷ್ಟಿ ಪೂಜೆ, ಮಧ್ಯಾಹ್ನ 12ಕ್ಕೆ ಅಗ್ನಿವಂಶ ಕ್ಷತ್ರಿಯರಾದ ಟಿ.ಜಿ.ಹನುಮಂತರಾಜು ಅವರ ಮನೆಯಿಂದ ಶ್ರೀ ದೊಡ್ಡಮ್ಮ –ಕಳಸವು ನಡೆ ಮುಡಿಯ ಮೂಲಕ ಪಾಂಡುರಂಗ ನಗರದ ಎಮ್ಮೆ ಕೇರಿ ಶ್ರೀ ಗ್ರಾಮ ದೇವತೆ ಅಮ್ಮನವರ ದೇವಸ್ಥಾನಕ್ಕೆ ಆಗಮಿಸುವುದು.
ಮಧ್ಯಾಹ್ನ 1.30ಕ್ಕೆ ಮೆರವಣಿಗೆ ಕಾರ್ಯಕ್ರಮ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ಹಿರೇಮಠಾಧ್ಯಕ್ಷರಾದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ವಹಿಸುವರು. ಉದ್ಘಾಟನೆಯನ್ನು ಶಾಸಕ ಕೆ.ಎನ್.ರಾಜಣ್ಣ ಅವರು ನೆರವೇರಿಸುವರು.
ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ವಿ.ಪ. ಸದಸ್ಯರಾದ ಡಾ.ಎಂ.ಆರ್. ಹುಲಿನಾಯ್ಕರ್, ಪೊಲೀಸ್ ಉಪಾಧೀಕ್ಷಕ ಚಂದ್ರಶೇಖರ್, ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್, ಪ್ರಜಾಪ್ರಗತಿ ಸಂಪಾದಕ ಡಾ. ಎಸ್.ನಾಗಣ್ಣ, ಟೂಡಾ ಮಾಜಿ ಅಧ್ಯಕ್ಷರಾದ ಬಿ.ಎಸ್.ನಾಗೇಶ್ ಅವರುಗಳು ಆಗಮಿಸುವರು.
ಆ.5 ರಂದು ಶ್ರೀ ಗ್ರಾಮ ದೇವತೆ ಅಮ್ಮನವರಿಗೆ ಶ್ರೀ ರೇಣುಕಾಯಲ್ಲಮ್ಮನವರ ದೇವಸ್ಥಾನದಿಂದ ಟಿ.ಜಿ.ಗುಬ್ಬಣ್ಣನವರ ವಂಶಸ್ಥರಿಂದ ಕಳಸ ಆರತಿ ಮತ್ತು ಅರಸ್ ಕ್ಷತ್ರಿಯ ವಂಶಸ್ಥರಿಂದ ಆರತಿ ಮತ್ತು ಘಟ ಸೇವೆ.
ಆ.6 ರಂದು ರಾತ್ರಿ 8ಕ್ಕೆ ಅಮ್ಮನವರಿಗೆ ಮಹಾಮಂಗಳಾರತಿ ನಂತರ ಜಾತ್ರಾ ಮಂಟಪದಿಂದ ಅಮ್ಮನವರನ್ನು ಪ್ರಮುಖ ರಾಜಬೀದಿಯಲ್ಲಿ ಮೆರವಣಿಗೆ ಮೂಲಕ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಮುಖೇನ ಸಾಗಿ ಅಮಾನಿಕೆರೆಯಲ್ಲಿ ಸಾಗುವುದು. ಮುಕ್ತಾಯ ಸಮಾರಂಭದ ಉದ್ಘಾಟನೆಯನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಹಿಸುವರು. ಮುಖ್ಯ ಅತಿಥಿಗಳಾಗಿ ಬಿ.ಸುರೇಶ್ ಗೌಡ, ಎಸ್.ಶಿವಣ್ಣ, ಆರ್.ರಾಜೇಂದ್ರ, ಅವಿನಾಶ್, ಬಿ.ಎಸ್.ಮಂಜುನಾಥ್, ನಟರಾಜಶೆಟ್ಟರು, ಮಹೇಶ್ ಬಾಬು ಅವರುಗಳು ಆಗಮಿಸುವರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
