ಕುಣಿಗಲ್: ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಯ ಅಟ್ಟಹಾಸ ಮುಂದುವರಿದಿದ್ದು, ಸಾಲಗಾರರ ಕಿರುಕುಳ ಹಾಗೂ ಮಾನ ಹರಾಜು ಹಾಕುವ ಬೆದರಿಕೆಗೆ ಮನನೊಂದು ಹರಿಕಥೆ ದಾಸರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ದೊಡ್ಡಮಳವಾಡಿ ಗೊಲ್ಲರಹಟ್ಟಿ ಗ್ರಾಮದಲ್ಲಿ ಶನಿವಾರ (ಜೂನ್ 20) ನಡೆದಿದೆ.
ದೊಡ್ಡಮಳವಾಡಿ ಗ್ರಾಮದ ನಿವಾಸಿ ಚಿಕ್ಕಣ್ಣ (40) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಮೃತ ಚಿಕ್ಕಣ್ಣ ಅವರು ಹರಿಕಥೆ ದಾಸರಾಗಿ ಗುರುತಿಸಿಕೊಂಡಿದ್ದರು.
ಮೃತ ಚಿಕ್ಕಣ್ಣ ಅವರು ಭಕ್ತರಹಳ್ಳಿ ಪ್ರೌಢಶಾಲೆಯ ಎಸ್ ಡಿಎಂಸಿ ಅಧ್ಯಕ್ಷೆ ಮಮತಾ ಹಾಗೂ ಕುರುಡಿಹಳ್ಳಿ ಗ್ರಾಮದ ಜಯರತ್ನಮ್ಮ ಎಂಬುವವರಿಂದ ಶೇ. 10 ರ ಬಡ್ಡಿ ದರದಲ್ಲಿ ಸಾಲ ಪಡೆದಿದ್ದರು. ಸಾಲ ನೀಡುವಾಗ ಆರೋಪಿಗಳು ಭದ್ರತೆಗಾಗಿ ಬ್ಯಾಂಕ್ ಚೆಕ್ ಗಳನ್ನು ಪಡೆದುಕೊಂಡಿದ್ದರು. ಆದರೆ, ಸಾಲ ನೀಡಿದ ಕೆಲ ದಿನಗಳ ಬಳಿಕ ಮಮತಾ ಮತ್ತು ಜಯರತ್ನಮ್ಮ ಅವರು, “ನಮಗೆ ಶೇ. 30 ರಷ್ಟು ಬಡ್ಡಿ ನೀಡಬೇಕು, ಇಲ್ಲದಿದ್ದರೆ ತಕ್ಷಣ ಅಸಲು ಹಣ ವಾಪಸ್ ಕೊಡಬೇಕು” ಎಂದು ಚಿಕ್ಕಣ್ಣ ಅವರಿಗೆ ತೀವ್ರ ಒತ್ತಾಯ ಹಾಗೂ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದರು ಎನ್ನಲಾಗಿದೆ.
“ಅಸಲು ಹಣ ಅಥವಾ ಶೇ. 30 ರಷ್ಟು ಬಡ್ಡಿ ನೀಡದಿದ್ದರೆ, ನಿನ್ನ ಊರಿನಲ್ಲಿ ಗಲಾಟೆ ಮಾಡಿ ಮಾನ ಮರ್ಯಾದೆ ಹರಾಜು ಹಾಕುತ್ತೇವೆ. ನೀನು ನೀಡಿರುವ ಖಾಲಿ ಚೆಕ್ ಗಳ ಮೇಲೆ ಹೆಚ್ಚಿನ ಮೊತ್ತ ಬರೆದು ಕೋರ್ಟ್ನಲ್ಲಿ ಕೇಸ್ ಹಾಕಿ ನಿನ್ನನ್ನು ಬೀದಿಗೆ ತರುತ್ತೇವೆ. ನೀನೇನಾದರೂ ಮಾಡಿಕೊಂಡು ಸಾಯಿ” ಎಂದು ಆರೋಪಿಗಳು ಬೆದರಿಕೆ ಹಾಕಿದ್ದರು ಎಂದು ಚಿಕ್ಕಣ್ಣ ಅವರ ಸಹೋದರ ಶಿವಣ್ಣ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಧೈರ್ಯ ತುಂಬಿದ್ದ ಸಹೋದರ, ಅಷ್ಟರಲ್ಲೇ ದುರಂತ:
ಆರೋಪಿಗಳ ಬೆದರಿಕೆಯಿಂದ ಭಯಭೀತರಾಗಿದ್ದ ಚಿಕ್ಕಣ್ಣ, “ನನ್ನ ಬಳಿ ಸದ್ಯಕ್ಕೆ ಅಷ್ಟೊಂದು ಹಣವಿಲ್ಲ, ಅಷ್ಟು ದೊಡ್ಡ ಮೊತ್ತದ ಬಡ್ಡಿ ಕಟ್ಟಲು ಸಾಧ್ಯವಿಲ್ಲ” ಎಂದು ಅಳಲು ತೋಡಿಕೊಂಡಿದ್ದರು. ಆದರೂ ಕರಗದ ಆರೋಪಿಗಳು “ಏನಾದರೂ ಮಾಡಿಕೊಂಡು ಸಾಯಿ, ನಮಗೆ ಹಣ ಬೇಕು” ಎಂದು ಧಮಕಿ ಹಾಕಿದ್ದರು. ಈ ವಿಷಯವನ್ನು ಚಿಕ್ಕಣ್ಣ ತನ್ನ ಅಣ್ಣ ಶಿವಣ್ಣನಿಗೆ ತಿಳಿಸಿದ್ದರು. ಶಿವಣ್ಣ ಅವರು, “ಭಯಪಡಬೇಡ, ಈ ಬಗ್ಗೆ ಊರಿನ ಪ್ರಮುಖರನ್ನು ಸೇರಿಸಿ ಪಂಚಾಯಿತಿ ಮಾಡಿ ಮಾತನಾಡೋಣ” ಎಂದು ತಮ್ಮನಿಗೆ ಧೈರ್ಯ ತುಂಬಿದ್ದರು. ಶನಿವಾರ ಶಿವಣ್ಣ ಅವರು ತಮ್ಮನನ್ನು ನೋಡಲು ಅವರ ಮನೆಗೆ ಹೋದಾಗ, ಚಿಕ್ಕಣ್ಣ ಅದಾಗಲೇ ಅಡಿಕೆ ಪಟ್ಟಿ ತಟ್ಟಿ ತಯಾರಿಸುವ ಶೆಡ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸಾಯುವ ಮುನ್ನ ವಾಟ್ಸ್ ಆಪ್ನಲ್ಲಿ ಬಂದ ಡೆತ್ ನೋಟ್ ಸಂದೇಶ:
ಚಿಕ್ಕಣ್ಣ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಮ್ಮ ಮೊಬೈಲ್ ನಿಂದ ವಾಟ್ಸ್ ಆಪ್ ನಲ್ಲಿ ಟೆಕ್ಸ್ಟ್ ಮೆಸೇಜ್ ಕಳುಹಿಸಿದ್ದು, ಅದರಲ್ಲಿ ತಮ್ಮ ಸಾವಿಗೆ ಕಾರಣರಾದವರ ಹೆಸರನ್ನು ಬಿಚ್ಚಿಟ್ಟಿದ್ದಾರೆ:
ಆರೋಪಿ 1 (ಮಮತಾ): “ನನ್ನ ಸಾವಿಗೆ ಭಕ್ತರಹಳ್ಳಿ ಸ್ಕೂಲ್ ಎಸ್ ಡಿಎಂಸಿ ಅಧ್ಯಕ್ಷೆ ಮಮತಕ್ಕ ಅವರೇ ಕಾರಣ. ಅವರು ನನಗೆ 3 ಲಕ್ಷ ರೂ. ದುಡ್ಡು ಕೊಟ್ಟು ಶೇ. 10 ರಷ್ಟು ಬಡ್ಡಿ ಕೇಳಿದ್ದರು. ನಾನು ಅವರಿಗೆ ಭದ್ರತೆಗೆ ಚೆಕ್ ಕೊಟ್ಟಿದ್ದೆ. ಎರಡು ತಿಂಗಳ ನಂತರ ಶೇ. 30 ರಷ್ಟು ಬಡ್ಡಿ ನೀಡುವಂತೆ ಒತ್ತಾಯಿಸಿದರು. ನಾನು ಕಳೆದ ಒಂದೂವರೆ ವರ್ಷದಿಂದ ತಿಂಗಳಿಗೆ 90 ಸಾವಿರ ರೂ. ನಂತೆ ಬಡ್ಡಿ ಕಟ್ಟುತ್ತಾ ಬಂದಿದ್ದೇನೆ. ಈಗ ಚೆಕ್ ವಾಪಸ್ ಕೇಳಿದರೆ 10 ಲಕ್ಷ ರೂ. ಗೆ ಕೇಸ್ ಹಾಕುವುದಾಗಿ ಹೆದರಿಸುತ್ತಿದ್ದಾರೆ. ನನ್ನ ಇಡೀ ಸಂಪಾದನೆಯನ್ನು ಇವರಿಗೇ ಕೊಟ್ಟಿದ್ದೇನೆ.”
ಆರೋಪಿ 2 (ಜಯರತ್ನಮ್ಮ): “ಇನ್ನೊಬ್ಬ ಆರೋಪಿ ಕುರುಡಿಹಳ್ಳಿಯ ಜಯರತ್ನಮ್ಮ ನನ್ನ ಕಾರಿನ ದಾಖಲೆಗಳು ಹಾಗೂ ಬ್ಯಾಂಕ್ ಚೆಕ್ ಪಡೆದು 2 ಲಕ್ಷ ರೂ. ಸಾಲ ನೀಡಿದ್ದರು. 15 ದಿನಕ್ಕೆ 20 ಸಾವಿರ ರೂ. ಬಡ್ಡಿಯಂತೆ ಮೂರು ವರ್ಷಗಳಿಂದ ದುಡ್ಡು ಕೊಟ್ಟರೂ ಇನ್ನು ಸಾಲ ತೀರಿಲ್ಲ ಎನ್ನುತ್ತಿದ್ದಾರೆ. ನನ್ನ ಕಾರಿನ ಒರಿಜಿನಲ್ ದಾಖಲೆಗಳು ಅವರ ಬಳಿಯೇ ಇವೆ. ನನ್ನ ಸಾವಿಗೆ ಇವರಿಬ್ಬರೇ ಕಾರಣ.”
ಪ್ರಕರಣ ದಾಖಲು:
ಮೃತರ ಸಹೋದರ ಶಿವಣ್ಣ ನೀಡಿದ ದೂರಿನ ಅನ್ವಯ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಮೀಟರ್ ಬಡ್ಡಿ ಕಾಯ್ದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. ಘಟನೆಯ ಬೆನ್ನಲ್ಲೇ ಆರೋಪಿಗಳಾದ ಮಮತಾ ಹಾಗೂ ಜಯರತ್ನಮ್ಮ ತಲೆಮರೆಸಿಕೊಂಡಿದ್ದು, ಪೊಲೀಸರು ಅವರ ಪತ್ತೆಗಾಗಿ ಜಾಲ ಬೀಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


