ತುಮಕೂರು: ತುಮಕೂರು ವಿವಿಯಲ್ಲಿ ದೇಹಕ್ಕೆ ಹಾಗೂ ಮೆದುಳಿಗೆ ಎರಡಕ್ಕೂ ಪ್ರಸಾದದ ರೂಪದಲ್ಲಿ ಆಹಾರ ಹಾಗೂ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷರಾದ ಸ್ವಾಮೀ ಜಪಾನಂದ ಜೀ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಅನ್ನಪೂರ್ಣೇಶ್ವರಿ ಮಧ್ಯಾಹ್ನದ ಭೋಜನ ಯೋಜನೆ ಮೂರನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಮಾತನಾಡಿ, ಇನ್ನು ಮುಂದೆ ವಾರದಲ್ಲೊಂದು ದಿನ ಸಿಹಿತಿನಿಸು ಹಾಗೂ ಮಜ್ಜಿಗೆ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ವಿವಿಯ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಈ ಯೋಜನೆಯಿಂದ ನಮ್ಮ ವಿದ್ಯಾರ್ಥಿಗಳಲ್ಲಿ ಆರೋಗ್ಯ ಸುಧಾರಿಸಿದೆ. ಸುಸಂಸ್ಕೃತ ಪ್ರಜೆಯನ್ನು ರೂಪಿಸುವಲ್ಲಿ ನಮ್ಮ ಈ ಯೋಜನೆಯು ಮುಖ್ಯ ಪಾತ್ರ ವಹಿಸಿದೆ. ಇದರಿಂದಾಗಿ ಪ್ರವೇಶಾತಿ ಕೂಡ ಗಣನೀಯವಾಗಿ ಏರಿಕೆಯಾಗಿದೆ ಎಂದರು.
ವಿವಿಯ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ಅನ್ನಪೂರ್ಣೇಶ್ವರಿ ಯೋಜನೆಯು ಮೂರನೆಯ ವರ್ಷಕ್ಕೆ ಕಾಲಿಟ್ಟಿರುವುದು ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಯೋಜನೆಯನ್ನು ಜಾರಿಗೊಳಿಸುವ ಆಲೋಚನೆಯಿದೆ. ಈ ವರ್ಷ ಒಟ್ಟು 3,000 ವಿದ್ಯಾರ್ಥಿಗಳನ್ನು ತಲುಪುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಉದ್ಯಮಿಗಳಾದ ಡಾ. ಹೆಚ್. ಜಿ. ಚಂದ್ರಶೇಖರ್, ಡಾ.ಆರ್.ಎಲ್.ರಮೇಶ್ ಬಾಬು, ಶಿರಡಿ ಸಾಯಿಬಾಬಾ ಮಂದಿರದ ಅಧ್ಯಕ್ಷರಾದ ನಟರಾಜ್ ಶೆಟ್ಟಿ, ಘಟಕ ಕಾಲೇಜುಗಳ ಪ್ರಾಂಶುಪಾಲರಾದ ಪ್ರೊ.ಪ್ರಕಾಶ್ ಎಂ. ಶೇಟ್ ಮತ್ತು ಪ್ರೊ.ಬಿ.ಕರಿಯಣ್ಣ, ಮನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಪರಶುರಾಮ್ ಕೆ.ಜಿ. ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4