ತುಮಕೂರು: ನಗರದ ಹನುಮಂತಪುರದಲ್ಲಿ ಪೇಟೆ ಮಾತೆ ಕೊಲ್ಲಾಪುರದಮ್ಮ ಹಾಗೂ ಕರುಗಳಮ್ಮ ದೇವರ ಐದು ದಿನಗಳ ಜಾತ್ರಾಮಹೋತ್ಸವ ಏರ್ಪಾಡಾಗಿದೆ. ಆಗಸ್ಟ್ 3ರಂದು ಬೆಳಿಗ್ಗೆ 10.30ಕ್ಕೆ ಶ್ರೀರಾಮನಗರದ ಆದಿಸ್ಥಾನ ಮುದ್ರೆಗೋಣೇಮರದ ಪೂಜೆ, ಮಧ್ಯಾಹ್ನ 3 ಗಂಟೆಗೆ ಕೋಟೆ ಕೊಲ್ಲಾಪುರದಮ್ಮ ಹಾಗೂ ಕರುಗಳಮ್ಮ ದೇವಸ್ಥಾನದಿಂದ ದೇವರುಗಳನ್ನು ಮಂಗಳವಾದ್ಯ, ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಹನುಮಂತಪುರ ದೇವಸ್ಥಾನಕ್ಕೆ ಕರೆತರಲಾಗುವುದು.
ನಂತರ ನಡೆಯುವ ಸಮಾರಂಭದಲ್ಲಿ ತಿಪಟೂರು ತಾಲೂಕು ಆಳುಬುರುಕ್ಷೇತ್ರದ ಸೋಮಶೇಖರ ಸ್ವಾಮೀಜಿ ಸಾನಿಧ್ಯವಹಿಸುವರು. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಿದರೆ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಎಸ್.ಆರ್.ಶ್ರೀನಿವಾಸ್, ಪ್ರಜಾಪ್ರಗತಿ ಸಂಪಾದಕ ಡಾ.ಎಸ್, ನಾಗಣ್ಣ ಅತಿಥಿಗಳಾಗಿ ಭಾಗವಹಿಸುವರು.
ಆಗಸ್ಟ್ 4ರಂದು ಸಂಜೆ 5 ಗಂಟೆಗೆ ಆರತಿಅಗ್ನಿಕೊಂಡವನ್ನು ಕೇಂದ್ರ ಸಚಿವ ವಿ. ಸೋಮಣ್ಣ ಉದ್ಘಾಟಿಸುವರು. ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ಸುರೇಶ್ ಗೌಡ, ಮಾಜಿ ಶಾಸಕ ಹೆಚ್.ನಿಂಗಪ್ಪ ಭಾಗವಹಿಸುವರು. ಇದೇ ದಿನ ಸಂಜೆ 6 ಗಂಟೆಗೆ ಕಂಬದರಂಗಯ್ಯ ಮತ್ತು ತಂಡದವರಿಂದ ಸಂಗೀತ ಸಂಜೆ ಏರ್ಪಾಡಾಗಿದೆ. ಆ. 4ರಂದು ಸಂಜೆ 5 ಗಂಟೆಗೆ ದೇವರುಗಳಿಗೆ ಆರತಿ ಇದೆ. ಆಕರ್ಷಕವಾಗಿ ಆರತಿಯನ್ನು ಅಲಂಕರಿಸಿ ತರುವವರಿಗೆ ಬಹುಮಾನ ನೀಡಲಾಗುವುದು ಎಂದು ತಿಗಳ ಸಮಾಜದ ಹಿರಿಯರಾದ ಟಿ.ಎಲ್. ಕುಂಭಯ್ಯ ತಿಳಿಸಿದ್ದಾರೆ.
ಆ.5ರಂದು ಮಧ್ಯಾಹ್ನ 2 ಗಂಟೆಗೆ ಬಿ.ಎ. ಗುಡಿಪಾಳ್ಯದ ಬಯಲು ಆಂಜನೇಯ ಸ್ವಾಮಿದೇವಸ್ಥಾನದ ಬಳಿ ಶ್ರೀ ಬಯಲು ಆಂಜನೇಯ ಕಲಾ ಟ್ರಸ್ಟ್ ಕಲಾವಿದರಿಂದ ಕುರುಕ್ಷೇತ್ರ ನಾಟಕ ಹಾಗೂ 6ರಂದು ಇದೇ ಟ್ರಸ್ಟ್ನಿಂದ ಇದೇ ಜಾಗದಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಿದೆ.
ಆಗಸ್ಟ್ 7ರಂದು ಕೊಲ್ಲಾಪುರದಮ್ಮ, ಕರುಗಳಮ್ಮ ದೇವರಿಗೆ ಮಡಲಕ್ಕಿ ಪೂಜೆರಾತ್ರಿ 8 ಗಂಟೆಗೆ ಎಲ್ಲೇಕಲ್ಲಿನ ಬಳಿ ಅಮ್ಮನವರ ಪೂಜಾ ಕಾರ್ಯಕ್ರಮ ಹಾಗೂ ಶ್ರೀರಾಮನಗರ ದೇವಸ್ಥಾನದವರೆಗೆ ದೇವರ ಮೆರವಣಿಗೆ ಮೂಲಕ ಕರೆದೊಯ್ಯಲಾಗುವುದು ಎಂದು ಟಿ.ಎಲ್. ಕುಂಭಯ್ಯ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
