ರಾಜ್ಯದಲ್ಲಿ ಕೋಮು ಆಧಾರಿತ ವ್ಯಾಪಾರ ವಹಿವಾಟುಗಳಿಗೆ ಕಡಿವಾಣ ಹಾಕುತ್ತಿರುವವರು ತಾಕತ್ತಿದ್ದರೆ ಮೇಲ್ಮಟ್ಟದಲ್ಲಿ ಮುಸ್ಲಿಂ ರಾಷ್ಟ್ರಗಳ ಜೊತೆಗಿನ ವ್ಯಾಪಾರ ವಹಿವಾಟನ್ನು ನಿಲ್ಲಿಸಲಿ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದವರು ಕರ್ನಾಟಕದಂತಾಗ ಬೇಕು ಎಂದು ಕೊಳ್ಳುತ್ತಿದ್ದಾರೆ. ಆದರೆ ಇವರು ಉತ್ತರ ಪ್ರದೇಶದ ಮಾದರಿ ಮಾಡಲು ಹೊರಟಿದ್ದಾರೆ. ಅಲ್ಲಿ ಅಭಿವೃದ್ಧಿಯಾಗಿದ್ದರೆ ಉತ್ತರ ಪ್ರದೇಶದವರು ಇಲ್ಲಿ ಬಂದು ಯಾಕೆ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಎರಡು ವರ್ಷದಿಂದ ಬಂಡವಾಳ ಹರಿದು ಬರುತ್ತಿಲ್ಲ. ಹಿಜಾಬ್, ಹಿಂದೂ-ಮುಸ್ಲೀಂ, ಭಗವದ್ಗೀತೆ ಹೆಸರಿನಲ್ಲಿ ಸೌಹಾರ್ದತೆ ಕದಡಿದ್ದಾರೆ. ಹೀಗಾಗಿ ಬಂಡವಾಳ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ದೇಶದಲ್ಲಿ 8.5 ಲಕ್ಷ ಜನ ಭಾರತದಲ್ಲಿ ಒಳ್ಳೆಯ ವಾತಾವರಣ ಇಲ್ಲ ಎಂದು ನಮ್ಮ ದೇಶದ ನಾಗರಿಕತೆಯನ್ನೇ ತೊರೆದಿದ್ದಾರೆ.
ದೇಶ ಬಿಟ್ಟು ಬೇರೆ ದೇಶಗಳಿಗೆ ಹೋಗಿದ್ದಾರೆ. ಇವರು ಜಾತಿ, ಧರ್ಮದ ರಾಜಕಾರಣ ಮಾಡುತ್ತಿದ್ದಾರೆ. ಹಸಿವಿಗೆ ಯಾವ ಜಾತಿ, ಧರ್ಮ ಇದೆ ಎಂದು ಪ್ರಶ್ನಿಸಿದರು.ಇವರು ಕೆಳ ಹಂತದಲ್ಲಿ ಧರ್ಮಾಧಾರಿತ ವ್ಯಾಪಾರಗಳಿಗೆ ಕಡಿವಾಣ ಹಾಕುತ್ತಾರೆ. ತಾಕತ್ತಿದ್ದರೆ ಮೇಲ್ಮಟ್ಟದಲ್ಲೂ ನಿರ್ಬಂಧ ಜಾರಿ ಮಾಡಲಿ. ಇಸ್ಲಾಂ ರಾಷ್ಟ್ರಗಳ ಜೊತೆ ವ್ಯಾಪಾರ ಮಾಡುವುದಿಲ್ಲ ಎಂದು ಘೋಷಣೆ ಮಾಡಲಿ.
ಭಾರತ ದುಬೈ ಜೊತೆ 26.5 ಬಿಲಿಯನ್ ಡಾಲರ್, ಕತಾರ್ ಜೊತೆ 11.5 ಬಿಲಿಯನ್ ಡಾಲರ್, ಜೋರ್ಡಾನ್ ಜೊತೆ 1.7 ಬಿಲಿಯನ್ ಡಾಲರ್ ಹಾಗೂ ಮಲೆಶಿಯಾ ಸೇರಿ ಹಲವು ರಾಷ್ಟ್ರಗಳ ಜೊತೆ ವ್ಯಾಪಾರ ವಹಿವಾಟು ನಡೆಯುತ್ತಿದೆ. ಇವೆಲ್ಲವೂ ಏನು ಹಿಂದೂ ರಾಷ್ಟ್ರಗಳೇ? ಎಲ್ಲವೂ ಮುಸ್ಲಿಂ ರಾಷ್ಟ್ರಗಳು. ಇವುಗಳ ಜೊತೆ ವ್ಯಾಪಾರ ಮುಂದುವರೆಸುತ್ತಿರುವುದೇಕೆ ? ಪೆಟ್ರೋಲ್, ಡಿಸೇಲ್ ಎಲ್ಲಿಂದ ಆಮದು ಮಾಡಿಕೊಳ್ಳುತ್ತಿರಾ ಎಂದು ಪ್ರಶ್ನಿಸಿದರು.
ದೇಶದಲ್ಲಿ ಶೇ.60ಕ್ಕಿಂತ ಹೆಚ್ಚು ನಿರುದ್ಯೋಗ ಸೃಷ್ಟಿಸಿದ್ದಾರೆ. ಆದರೆ ಬಜೆಟ್ ನಲ್ಲಿ ಸ್ವರ್ಗವನ್ನೆ ಕೈಗಿಡುವಂತೆ ನಂಬಿಸಿದ್ದಾರೆ. ಸರ್ಕಾರದ ವಾರ್ಷಿಕ ಆರ್ಥಿಕ ವರದಿಯಲ್ಲಿ ಅಸಲು ಅಂಶಗಳು ತಿಳಿದು ಬರುತ್ತವೆ. ನವೋದ್ಯಮಕ್ಕೆ ಪೆÇ್ರೀತ್ಸಾಹ ಇಲ್ಲ, ಸಣ್ಣ ಕೈಗಾರಿಕೆ ಉದ್ಯೋಗ ಸೃಷ್ಟಿಯಾಗುತ್ತಿಲ್ಲ.ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲೇ ಹೆಚ್ಚು ನಿರುದ್ಯೋಗ ಇದೆ. ಇಲ್ಲಿ ಮಂಜೂರಾಗಿದ್ದು 6187 ಹುದ್ದೆಗಳು, ಭರ್ತಿಯಾಗಿರುವುದು 2544 ಹುದ್ದೆಗಳು ಮಾತ್ರ, ಖಾಲಿ ಇರುವುದು 3643 ಹುದ್ದೆಗಳು. ಉದ್ಯೋಗ ಇಲಾಖೆಯಲ್ಲಿ ಶೇ.50ರಷ್ಟು ಹುದ್ದೆಗಳು ಖಾಲಿ ಇವೆ. ಉದ್ಯೋಗ ಮೇಳ ನಡೆಸಿ ಸಾವಿರಾರು ಮಂದಿಗೆ ಕೆಲಸ ಕೊಡಿಸಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ.
ಕಲಬುರಗಿಯಲ್ಲೂ ಅದೇ ರೀತಿ ನಡೆದಿದೆ. ನಾನು ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಪಡೆದ ಅಕೃತ ಮಾಹಿತಿ ಪ್ರಕಾರ 2020-21ರಲ್ಲಿ ಉದ್ಯೋಗ ಮೇಳ ನಡೆದಿಲ್ಲ. 2021-22ರಲ್ಲಿ 54 ಉದ್ಯೋಗ ಮೇಳ ನಡೆಸಲಾಗಿದೆ. ಇದರಲ್ಲಿ 12822 ಮಂದಿ ಆಯ್ಕೆಯಾಗಿದ್ದಾರೆ.ಸಂಜೀವಿನಿ ಕರ್ನಾಟಕ ಯೋಜನೆಯಲ್ಲಿ ನಡೆದ 10 ಉದ್ಯೋಗ ಮೇಳದಲ್ಲಿ 6643 ಆಯ್ಕೆಯಾಗಿದ್ದಾರೆ. 19465 ಮಂದಿಗೆ ಉದ್ಯೋಗ ಆಹ್ವಾನ ಪತ್ರ ನೀಡಲಾಗಿದೆ. ಅವರಲ್ಲಿ 1883 ಮಂದಿಗೆ ಮಾತ್ರ ಉದ್ಯೋಗ ಸಿಕ್ಕಿದೆ. ಉಳಿದವರ ಬಗ್ಗೆ ಸರ್ಕಾರದಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಸರ್ಕಾರ ಉತ್ತರ ನೀಡಿದೆ ಎಂದರು.
ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಜರ್ಮನ್ ಸಂಸ್ಥೆಗಳಿಂದ ಮುಖ್ಯಮಂತ್ರಿ ಕರ್ನಾಟಕ ಕೌಶಲ್ಯ ತರಬೇತಿ ಯೋಜನೆಯಡಿ 3715 ತರಬೇತಿ ನೀಡಲಾಗಿದೆ. ಅವರಲ್ಲಿ 101 ಮಂದಿಗೆ ಮಾತ್ರ ಉದ್ಯೋಗ ಸಿಕ್ಕಿದೆ. ಇದನ್ನು ಅಚ್ಚೆ ದಿನ್ ಎಂದು ಹೇಳುತ್ತಾರಾ ಎಂದು ಕಿಡಿಕಾರಿದರು.ಈ ಸರ್ಕಾರಕ್ಕೆ 10 ಸಾವಿರಕ್ಕೆ ತರಬೇತಿ ಕೊಡಿಸುವ ಯೋಗ್ಯತೆ ಇಲ್ಲ. ಬಿಜೆಪಿ ಐಟಿ ಕೋಶ ನೋಡಿ ಬಿಜೆಪಿ ಶಾಸಕರು ಮಾತನಾಡ ಬಾರದು, ಸರ್ಕಾರದ ವರದಿ ನೋಡಿ ಖಚಿತವಾದ ಮಾಹಿತಿ ನೋಡಿ ಮಾತನಾಡಿ, ಇಲ್ಲವಾದರೆ ನಗೆ ಪಾಟಲಿಗೆ ಈಡಾಗುತ್ತಿರಾ ಎಂದು ತಿರುಗೇಟು ನೀಡಿದರು.ರಾಜ್ಯ ಸರ್ಕಾರ ನಡೆಯುತ್ತಿರುವುದೇ ಮೋದಿ ಸರ್ಕಾರದಿಂದ ಎಂದು ಬಿಂಬಿಸಲಾಗುತ್ತಿದೆ. ಮೋದಿ ಸರ್ಕಾರ ರಾಜ್ಯಕ್ಕಾಗಿ ಏನು ಮಾಡಿದೆ ಎಂದು ಪ್ರಶ್ನಿಸಿದ ಅವರು, ರಾಜ್ಯ ಸರ್ಕಾರ 6.6 ಕೋಟಿ ಖರ್ಚು ಮಾಡಿ ಅಬುದಾಬಿಗೆ ಒಬ್ಬ ಡಾಕ್ಟರ್, ಒಬ್ಬ ನರ್ಸ್, 16 ಮಂದಿ ಮನೆ ಕೆಲಸಕ್ಕೆ ಕಳುಹಿಸಲಾಗಿದೆ. ಜಗತ್ತಿನಲ್ಲಿ ಭಾರತದ ಮಾನವ ಸಂಪನ್ಮೂಲಕ್ಕೆ ಭಾರೀ ಬೇಡಿಕೆ ಇದೆ. ಇವರು ಆರುವರೆ ಸಾವಿರ ಕೋಟಿ ಖರ್ಚು ಮಾಡಿ 18 ಮಂದಿಯನ್ನು ಕಳುಹಿಸುವುದನ್ನು ಅಭಿವೃದ್ಧಿ ಎನ್ನಬೇಕಾ ಎಂದು ಪ್ರಶ್ನಿಸಿದರು.
2019ರಿಂದ 2021ರವರೆಗೆ 41 ಸಾವಿರ ಪುರುಷರು, 33243 ಮಹಿಳೆಯರು ಸೇರಿ 83190 ಮಂದಿ ಕೆಲಸ ಕಳೆದುಕೊಂದು ನಿರುದ್ಯೋಗಿಗಳಾಗಿದ್ದಾರೆ. ಕೃಷಿ ಬಳಿಕ ಗಾರ್ಮೆಂಟ್ಸ್ ಹೆಚ್ಚು ಉದ್ಯೋಗ ಸೃಷ್ಟಿಯ ಕ್ಷೇತ್ರವಾಗಿದೆ. ಕಳೆದ ಮೂರು ವರ್ಷದಲ್ಲಿ 180 ಗಾರ್ಮೆಂಟ್ಸ್ ಕಂಪೆನಿಗಳು ಮುಚ್ಚಿವೆ. ಅದರಿಂದ ಶೇ.66ರಷ್ಟು ಮಹಿಳೆಯರು ಕೆಲಸ ಕಳೆದು ಕೊಂಡಿದ್ದಾರೆ. ಖಾಸಗಿ ಸಂಸ್ಥೆಯ ವರದಿ ಪ್ರಕಾರ ಗಾರ್ಮೆಂಟ್ಸ್ನಲ್ಲಿ ನಾಲ್ಕು ಲಕ್ಷ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇಷ್ಟು ಅನಾಹುತವಾಗಿದ್ದರೂ ಮುಖ್ಯಮಂತ್ರಿಯವರು ಮಹಿಳಾ ದಿನಾಚರಣೆಯಲ್ಲಿ ಮಹಿಳಾ ಆಧಾರಿತ ಬಜೆಟ್ ಮಂಡಿಸಿ ಸಾಸಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಕೋವಿಡ್ನಿಂದ ಪ್ರವಾಸೋದ್ಯಮದಲ್ಲಿ 30ಲಕ್ಷ ಜನ ನಿರುದ್ಯೋಗಿಗಳಾಗಿದ್ದಾರೆ. 1250 ಕಾರ್ಖಾನೆಗಳು ಮುಚ್ಚಿವೆ. 1772 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲೇ ಅತಿ ಹೆಚ್ಚು ಉದ್ಯಮಿಗಳ ಆತ್ಮಹತ್ಯೆ ಮಾಡಿಕೊಂಡಿರುವುದು ಕರ್ನಾಟಕದಲ್ಲಿ. ರಾಷ್ಟ್ರಿಯ ಅಪರಾಧಗಳ ಮಾನಕ ಬ್ಯೂರೋ ಪ್ರಕಾರ ಶೇ.15ರಷ್ಟು ಆತ್ಮಹತ್ಯೆಗಳು ರಾಜ್ಯದಲ್ಲೇ ನಡೆದಿವೆ ಎಂದು ವಿವರಿಸಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಜೆಟ್ ಮಂಡಿಸಿದ್ದಾರೆ ಹಲವು ಯೋಜನೆಗಳನ್ನ ಘೋಷಿಸಿದ್ದಾರೆ. ಆದರೆ ಅನುಷ್ಠಾನದ ಬಗ್ಗೆ ಸ್ಪಷ್ಟ ಮಾಹಿತಿ ಕೊಟ್ಟಿಲ್ಲ. ಸರ್ವ ವ್ಯಾಪಿ, ಸರ್ವ ಸ್ಪರ್ಶಿ ಬಜೆಟ್ ಅಂದಿದ್ದಾರೆ. ಆದರೆ ಎಲ್ಲಿಯೂ ಸ್ಪಷ್ಟ ನಿಲುವು ತೆಗೆದುಕೊಂಡಿಲ್ಲ. ಉದ್ಯೋಗ ಸೃಷ್ಟಿ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಡಬಲ್ ಎಂಜಿನ್ ಸರ್ಕಾರದಲ್ಲಿ ಡಬಲ್ ದೋಖಾ ಆಗಿದೆ. ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಠಿಸುತ್ತೇವೆ ಎಂದಿದ್ದರು. ಆದರೆ ಅತಿ ಹೆಚ್ಚಿನ ಉದ್ಯೋಗ ಕೊರತೆಯಾಗಿದೆ. ಯುವಕರ ಜೀವನದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ ಪ್ರಿಯಾಂಕ್ ಖರ್ಗೆ, ಇವರು ನಮ್ಮ ಭಾಗದವರೆ. ಅವರನ್ನ ಅದೇನಂತ ಇವರನ್ನು ಮಿನಿಸ್ಟರ್ ಮಾಡಿದ್ದಾರೋ ಗೊತ್ತಿಲ್ಲ. ಈ ಕಡೆ ಕನ್ನಡವೂ ಬರಲ್ಲ, ಅತ್ತ ಹಿಂದಿಯೂ ಇಲ್ಲ. ಹೋಗ್ಲಿ ಇಂಗ್ಲೀಷ್ ಇದ್ಯಾ ಅದೂ ಬರಲ್ಲ. ಇವರಿಗೆ ಇಲಾಖೆ ಉದ್ಯೋಗದ ಬಗ್ಗೆ ಮಾಹಿತಿಯೇ ಇಲ್ಲ. ಕೇಳಿದರೆ ನಮ್ಮ ಇಲಾಖೆಗೆ ಬರುತ್ತಾ ಎಂದು ಕೇಳುತ್ತಾರೆ ಎಂದು ಅಸಮಧಾನ ವ್ಯಕ್ತ ಪಡಿಸಿದರು.
ಕೆಳ ವರ್ಗದ ಮಕ್ಕಳನ್ನು ಧರ್ಮದ ನಶೆಯಲ್ಲಿ ಹಾದಿ ತಪ್ಪಿಸಿ ನಿಮ್ಮ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ಕಳುಹಿಸುವುದನ್ನು ನಿಲ್ಲಿಸಿ. ನಿಮ್ಮ ಮಕ್ಕಳಿಗೂ ತಿಲಕ ಇಟ್ಟು ಧರ್ಮ ರಕ್ಷಣೆಗೆ ಬಿಡಿ ನೋಡೋಣ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5