ಬೆಂಗಳೂರು: ನಗರದಲ್ಲಿ ಇಬ್ಬರು ಮಹಿಳೆಯರ ಕೊಲೆಯಾಗಿದೆ. ಒಂದು ಪ್ರಕರಣದಲ್ಲಿ ತವರಿನಿಂದ ಹಣ, ಆಭರಣ ತರುವಂತೆ ಪತಿಯೇ ಪತ್ನಿಯನ್ನು ಕೊಲೆ ಮಾಡಿದರೆ, ಮತ್ತೊಂದು ಪ್ರಕರಣದಲ್ಲಿ ಮೊಬೈಲ್ನಲ್ಲಿ ಬೇರೆಯವರೊಂದಿಗೆ ಹೆಚ್ಚಾಗಿ ಮಾತನಾಡುತ್ತೀಯ ಎಂದು ಪತಿ ಜಗಳವಾಡಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಇದೀಗ ಇಬ್ಬರು ಆರೋಪಿಗಳು ಪೊಲೀಸರ ವಶದಲ್ಲಿದ್ದಾರೆ.
ಚಾಕುವಿನಿಂದ ಇರಿದು ಕೊಲೆ
ಯಾವಾಗಲೂ ಮೊಬೈಲ್ ನಲ್ಲಿ ಮಾತನಾಡುತ್ತೀಯ ಎಂದು ಪತ್ನಿ ಜತೆ ಜಗಳವಾಡಿದ ಪತಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ನೇಪಾಳ ಮೂಲದ ಕಮಲಾದೇವಿ (45) ಕೊಲೆಯಾದ ದುರ್ದೈವಿ. ಈಕೆ ಪತಿ ತೇಜ್ ಬಹದ್ದೂರ್ (52)ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ನೇಪಾಳ ಮೂಲದ ಈ ದಂಪತಿ 20 ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದು, ಮೊದಲು ಸಂಜಯನಗರದಲ್ಲಿ ವಾಸವಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ಮನೆ ಬದಲಿಸಿ ಬಿ.ಚನ್ನಸಂದ್ರದಲ್ಲಿ ವಾಸವಾಗಿದ್ದು, ಇವರಿಗೆ ಒಬ್ಬ ಮಗ ಹಾಗೂ ಮಗಳಿದ್ದು, ಮಗಳನ್ನು ಮದುವೆ ಮಾಡಿಕೊಡಲಾಗಿದೆ.
ಈ ಪ್ರದೇಶಕ್ಕೆ ಬಂದ ಕೆಲವೇ ದಿನಗಳಲ್ಲಿ ಪತ್ನಿ-ಮಗನನ್ನು ಬಿಟ್ಟು ತೇಜ್ ಬಹದ್ದೂರ್ ಬೇರೆ ಹೋಗಿದ್ದನು.
ಬಿ.ಚನ್ನಸಂದ್ರದಲ್ಲಿ ತಾಯಿ-ಮಗ ಇಬ್ಬರೇ ವಾಸವಾಗಿದ್ದರು. ಮಗ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ತೇಜ್ ಬಹದ್ದೂರ್ ವಾಪಸ್ ಮನೆಗೆ ಬಂದು ನಿಮ್ಮ ಜತೆಯಲ್ಲಿರುವುದಾಗಿ ಹೇಳಿದ್ದಾನೆ.
ಕಮಲಾದೇವಿ ಆಗಾಗ್ಗೆ ಬೇರೆಯವರೊಂದಿಗೆ ಮೊಬೈಲ್ ನಲ್ಲಿ ಮಾತನಾಡುವುದನ್ನು ಗಮನಿಸಿದ ಪತಿ ಈ ವಿಚಾರವಾಗಿ ಜಗಳವಾಡಿದ್ದಾನೆ. ನಿನ್ನೆ ಮಗ ಕೆಲಸಕ್ಕೆ ಹೋಗಿದ್ದಾಗ ಇದೇ ವಿಚಾರವಾಗಿ ದಂಪತಿ ನಡುವೆ ರಾತ್ರಿ 8:30ರ ಸುಮಾರಿನಲ್ಲಿ ಜಗಳವಾಗಿದೆ. ಆ ಸಂದರ್ಭದಲ್ಲಿ ತೇಜ್ ಬಹದ್ದೂರ್ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಪತ್ನಿ ಹೊಟ್ಟೆ ಹಾಗೂ ಕಿಬ್ಬೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದಾನೆ.
ಅಕ್ಕಪಕ್ಕದವರು ಇವರ ಮನೆಯಲ್ಲಿ ಕೂಗಾಟ, ಕಿರುಚಾಟ ಕೇಳಿ ಮನೆ ಬಳಿ ಬಂದು ನೋಡಿದಾಗ ಕಮಲಾದೇವಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.ಸ್ಥಳಕ್ಕೆ ಆಗಮಿಸಿದ ರಾಮಮೂರ್ತಿನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಶವವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿ ಆರೋಪಿ ತೇಜ್ ಬಹದ್ದೂರ್ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ವೇಲ್ ನಿಂದ ಉಸಿರು ನಿಲ್ಲಿಸಿದ :
ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿ, ಹೃದಯಾಘಾತವಾಗಿದೆ ಎಂದು ಬಿಂಬಿಸಿದ್ದ ಕಾರು ಚಾಲಕನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸುಂಕದಕಟ್ಟೆಯ ಮುನೇಶ್ವರನಗರ 7ನೇ ಕ್ರಾಸ್ ನಿವಾಸಿ ಸೌಮ್ಯಾ (25) ಕೊಲೆಯಾದ ನತದೃಷ್ಟೆ.
ಈಕೆಯ ಪತಿ ಯೋಗೇಶ್ (25) ಪೊಲೀಸರ ವಶದಲ್ಲಿರುವ ಆರೋಪಿ.ಮೂಲತಃ ನಾಗಮಂಗಲ ಸಮೀಪದ ಬೆಳ್ಳೂರು ಕ್ರಾಸ್ ನಿವಾಸಿ ಯೋಗೇಶ್ ಕಾರು ಚಾಲಕ ವೃತ್ತಿ ಮಾಡುತ್ತಿದ್ದು, ಮೂರು ವರ್ಷದ ಹಿಂದೆ ಮಂಚೇನಹಳ್ಳಿಯ ನಿವಾಸಿ ಸೌಮ್ಯಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದು, ಮುನೇಶ್ವರನಗರದಲ್ಲಿ ವಾಸವಾಗಿದ್ದರು.
ಈ ನಡುವೆ ಕೆಲವು ದಿನಗಳಿಂದ ದಂಪತಿ ನಡುವೆ ಜಗಳವಾಗುತ್ತಿತ್ತು. ತವರಿನಿಂದ ಹಣ, ಒಡವೆ ತರುವಂತೆ ಸೌಮ್ಯಾಳಿಗೆ ಪತಿ ಪೀಡಿಸುತ್ತಿದ್ದುದ್ದರಿಂದ ತವರು ಮನೆಯವರು ಎರಡು ಬಾರಿ ಹಣ ಕೊಟ್ಟಿದ್ದಾರೆ. ಆದರೂ ಸಹ ಪದೇ ಪದೇ ಹಣಕ್ಕಾಗಿ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದನು.
ತವರಿನಿಂದ 2 ಲಕ್ಷ ಹಣ ತರುವಂತೆ ಕಳೆದ ಮೂರು ದಿನಗಳಿಂದಲೂ ಸೌಮ್ಯಾ ಜೊತೆಯಲ್ಲಿ ಯೋಗೇಶ್ ಜಗಳವಾಡುತ್ತಿದ್ದನು. ನಿನ್ನೆ ಸಂಜೆ 5.30ರ ಸುಮಾರಿನಲ್ಲಿ ಮತ್ತೆ ಇದೇ ವಿಚಾರವಾಗಿ ಪತ್ನಿ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಒಂದು ಹಂತದಲ್ಲಿ ಕೈಗೆ ಸಿಕ್ಕಿದ ವೇಲ್ನಿಂದ ಸೌಮ್ಯಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ನಂತರ ಸೌಮ್ಯಾ ಪೋಷಕರಿಗೆ ಯೋಗೇಶ್ ದೂರವಾಣಿ ಕರೆ ಮಾಡಿ ನಿಮ್ಮ ಮಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆಂದು ತಿಳಿಸಿದ್ದಾನೆ. ಸೌಮ್ಯಾ ಪೋಷಕರು ಹಾಗೂ ಸಂಬಂಕರು ಮಗಳ ಮನೆ ಬಳಿ ಬಂದು ನೋಡಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬ್ಯಾಡರಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆ ವೇಳೆ ಸೌಮ್ಯಾ ತಾಯಿ ಮಗಳ ಸಾವಿನ ಬಗ್ಗೆ ಅನುಮಾನವಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಯೋಗೇಶನನ್ನು ವಿಚಾರಣೆ ಮಾಡಿದಾಗ ಸೌಮ್ಯಾಳನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.
ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿರುವ ಪೊಲೀಸರು, ಸೌಮ್ಯಾ ಅವರ ತಾಯಿ ಜಯಮ್ಮ ನೀಡಿರುವ ದೂರನ್ನು ದಾಖಲಿಸಿಕೊಂಡು ಆರೋಪಿ ಯೋಗೇಶನನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ: ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5