ತುಮಕೂರು: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ವತಿಯಿಂದ ಇಂದು ದೇಶಾದ್ಯಂತ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜ್ಗಾರ್ ಯೋಜನೆ’ (PM-VBRY) ಅಡಿಯಲ್ಲಿ ₹2,400 ಕೋಟಿಗೂ ಅಧಿಕ ಪ್ರೋತ್ಸಾಹಧನವನ್ನು ದೇಶದ 15 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ನೇರವಾಗಿ ವಿತರಿಸಿದರು.
ನವದೆಹಲಿಯ ವಿಜ್ಞಾನ ಭವನದಲ್ಲಿ ಮುಖ್ಯ ಕಾರ್ಯಕ್ರಮ ಜರುಗಿದರೆ, ದೇಶದ ವಿವಿಧ 200 ಸ್ಥಳಗಳಲ್ಲಿ ಪ್ರಾದೇಶಿಕ ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ಆಯೋಜಿಸಲಾಗಿತ್ತು. ಇದರ ಅಂಗವಾಗಿ ತುಮಕೂರಿನ ಸಿದ್ದಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (SIT) ಕಾಲೇಜಿನ ಬಿರ್ಲಾ ಸಭಾಂಗಣದಲ್ಲಿ ಪ್ರಾದೇಶಿಕ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.
37 ಯುವಕರಿಗೆ ಉದ್ಯೋಗ ಪತ್ರ ವಿತರಣೆ:
ತುಮಕೂರು ನಗರದ ಶಾಸಕರಾದ ಜಿ. ಬಿ. ಜ್ಯೋತಿ ಗಣೇಶ್ ಅವರು, ಈ ಪ್ರಾದೇಶಿಕ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಇಪಿಎಫ್ ಒ (EPFO) ಪ್ರಾದೇಶಿಕ ಕಚೇರಿಯ ಕಮಿಷನರ್-II ವಂಶಿ ಕೃಷ್ಣ ದಿಂಡಿ, ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಪಿ. ಆರ್. ಕುರಂದರವಾಡ ಹಾಗೂ ಎಸ್ ಐಟಿ ಪ್ರಾಂಶುಪಾಲರಾದ ಎಸ್. ವಿ.ದಿನೇಶ್ ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಒಟ್ಟು 380 ಜನರು ಭಾಗವಹಿಸಿದ್ದರು. ಇದರಲ್ಲಿ 300 ಫಲಾನುಭವಿಗಳು ಹಾಗೂ 50ಕ್ಕೂ ಹೆಚ್ಚು ಉದ್ಯೋಗದಾತರು (ಮಾಲೀಕರು) ಸೇರಿದ್ದರು. ಇದೇ ವೇದಿಕೆಯಲ್ಲಿ ವಿವಿಧ ಕಂಪನಿಗಳಿಂದ ಆಯ್ಕೆಯಾದ 37 ನೂತನ ಉದ್ಯೋಗಿಗಳಿಗೆ ಅಧಿಕೃತವಾಗಿ ನೇಮಕಾತಿ ಪತ್ರಗಳನ್ನು ವಿತರಿಸಲಾಯಿತು.
ಏನಿದು ಪಿಎಂ–ವಿಬಿಆರ್ ವೈ (PM-VBRY) ಯೋಜನೆ?
ಇದು ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಉದ್ಯೋಗ ಆಧಾರಿತ ಪ್ರೋತ್ಸಾಹಕ ಯೋಜನೆಯಾಗಿದೆ.
ಹೊಸ ಉದ್ಯೋಗಿಗಳಿಗೆ ನೆರವು: ಸಂಘಟಿತ ವಲಯಕ್ಕೆ ಮೊದಲ ಬಾರಿಗೆ ಪಾದಾರ್ಪಣೆ ಮಾಡುವ ಹೊಸ ಉದ್ಯೋಗಿಗಳಿಗೆ ಗರಿಷ್ಠ ₹15,000 ವರೆಗೆ ಒಂದು ತಿಂಗಳ ವೇತನವನ್ನು ಸರ್ಕಾರವೇ ನೀಡುತ್ತದೆ.
ಉದ್ಯೋಗದಾತರಿಗೆ ಪ್ರೋತ್ಸಾಹ: ಹೊಸದಾಗಿ ಉದ್ಯೋಗ ಸೃಷ್ಟಿಸುವ ಮಾಲೀಕರಿಗೆ 2 ವರ್ಷಗಳ ಅವಧಿಗೆ ಸರ್ಕಾರದಿಂದ ಆರ್ಥಿಕ ಪ್ರೋತ್ಸಾಹ ಸಿಗಲಿದೆ.
ಉತ್ಪಾದನಾ ವಲಯಕ್ಕೆ ವಿಶೇಷ ಆದ್ಯತೆ: ಮ್ಯಾನುಫ್ಯಾಕ್ಚರಿಂಗ್ (ಉತ್ಪಾದನಾ) ವಲಯದಲ್ಲಿ ಇನ್ನೂ ಹೆಚ್ಚಿನ ಉದ್ಯೋಗ ಸೃಷ್ಟಿಸಲು ಹೆಚ್ಚುವರಿ 2 ವರ್ಷಗಳ ಕಾಲ (ಒಟ್ಟು 4 ವರ್ಷ) ಈ ಬೆಂಬಲ ವಿಸ್ತರಿಸಲಾಗುತ್ತದೆ.
“ಯುವಶಕ್ತಿಯೇ ವಿಕಸಿತ ಭಾರತದ ಇಂಧನ”: ಪ್ರಧಾನಿ ನರೇಂದ್ರ ಮೋದಿ
ನವದೆಹಲಿಯಿಂದ ನೇರಪ್ರಸಾರದ ಮೂಲಕ ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ನಮ್ಮ ಯುವಶಕ್ತಿಯನ್ನು ಸಬಲೀಕರಣಗೊಳಿಸುವುದೇ ಈ ಯೋಜನೆಯ ಮುಖ್ಯ ಗುರಿ. ಎಂಎಸ್ಎಂಇ, ಕೃಷಿ ಹಾಗೂ ಡ್ರೋನ್ ಉತ್ಪಾದನೆಯಂತಹ ಆಧುನಿಕ ವಲಯಗಳಲ್ಲಿ ಯುವಕರ ನಾವೀನ್ಯತೆಯನ್ನು ಬಳಸಿಕೊಂಡು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಇದು ಸಹಕಾರಿಯಾಗಿದೆ. ಉದ್ಯೋಗ ಸೃಷ್ಟಿ ಈಗ ದೇಶದ ಮೊದಲ ಆದ್ಯತೆಯಾಗಿದೆ,” ಎಂದರು.
ಭಾರತದಲ್ಲಿ ನಿರುದ್ಯೋಗ ದರ ಇಳಿಕೆ: ಕೇಂದ್ರ ಸಚಿವ ಡಾ. ಮನ್ಸುಖ್ ಮಾಂಡವೀಯ
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವೀಯ ಅವರು ಮಾತನಾಡಿ, “ಕಳೆದ 10 ವರ್ಷಗಳಲ್ಲಿ ಭಾರತದ ಸಾಮಾಜಿಕ ಭದ್ರತೆಯ ವ್ಯಾಪ್ತಿಯು ಶೇ. 19 ರಿಂದ ಶೇ. 64.3 ಕ್ಕೆ ಏರಿಕೆಯಾಗಿದೆ ಎಂದು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ವರದಿ ಮಾಡಿದೆ. 2014 ರಿಂದ 2024 ರ ನಡುವೆ ದೇಶದಲ್ಲಿ ಸುಮಾರು 17 ಕೋಟಿ ಉದ್ಯೋಗಗಳು ಸೃಷ್ಟಿಯಾಗಿವೆ. ಪ್ರಸ್ತುತ ಭಾರತದ ನಿರುದ್ಯೋಗ ದರವು ಶೇ. 3.1 ಕ್ಕೆ ಕುಸಿದಿದ್ದು, ಇದು ಜಾಗತಿಕ ಸರಾಸರಿಗಿಂತ (ಶೇ. 4.8) ಗಣನೀಯವಾಗಿ ಕಡಿಮೆಯಾಗಿದೆ,” ಎಂದು ಅಂಕಿ-ಅಂಶಗಳನ್ನು ಹಂಚಿಕೊಂಡರು.
“ಸರ್ಕಾರದಿಂದ ಇಂತಹದೊಂದು ಆರ್ಥಿಕ ಪ್ರೋತ್ಸಾಹ ಸಿಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಕೆಲಸಕ್ಕೆ ಸೇರಿದ ಮೊದಲೇ ಇಷ್ಟು ಬೆಂಬಲ ಸಿಕ್ಕಿರುವುದು ತುಂಬಾ ಸಂತಸ ತಂದಿದೆ,” ಎಂದು ಹೊಸದಾಗಿ ಕೆಲಸಕ್ಕೆ ಸೇರಿದ ಯುವಕನೊಬ್ಬ ಸಂತಸ ಹಂಚಿಕೊಂಡರೆ, ಇತ್ತ ಉದ್ಯೋಗದಾತರೊಬ್ಬರು, “ಈ ಯೋಜನೆಯಿಂದ ನಮಗೆ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಮತ್ತು ನಮ್ಮ ವ್ಯವಹಾರವನ್ನು ವಿಸ್ತರಿಸಲು ದೊಡ್ಡ ಸಹಾಯವಾಗಿದೆ,” ಎಂದು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


