ಸರಗೂರು: ಕಾನೂನು ವ್ಯವಸ್ಥೆ ಕಾಪಾಡಬೇಕಾದ ಶಾಸಕರೇ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿ, ತಾಲೂಕಿನ ಬಿ. ಮಟಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರ್ನಾಟಕ ಪಬ್ಲಿಕ್ ಶಾಲೆ (KPS) ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲು ಸಿಡಿಸಿ (CDC) ಹಾಗೂ ಎಸ್ ಡಿಎಂಸಿ (SDMC) ಸದಸ್ಯರು ಮತ್ತು ಪೋಷಕರು ತೀರ್ಮಾನಿಸಿದ್ದಾರೆ.
ಬಿ. ಮಟಕೆರೆ ವ್ಯಾಪ್ತಿಯಲ್ಲಿ ಹೆಚ್ಚಾಗಿ ಹಳ್ಳಿಗಳು ಹಾಗೂ ಗಿರಿಜನ ಹಾಡಿಗಳಿದ್ದು, ಇಲ್ಲಿನ ನೂರಾರು ಬಡ ಮಕ್ಕಳು ಈ ಕೆಪಿಎಸ್ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಬರುತ್ತಿದ್ದಾರೆ. ಶಾಲೆ ಪ್ರಾರಂಭವಾಗಿ 8 ವರ್ಷ ಕಳೆದಿದೆ. ಸರ್ಕಾರದ ಸುತ್ತೋಲೆಯ ಪ್ರಕಾರ, ಕರ್ನಾಟಕ ಪಬ್ಲಿಕ್ ಶಾಲೆಗೆ ಆಯಾ ಕ್ಷೇತ್ರದ ಶಾಸಕರೇ ಅಧ್ಯಕ್ಷರಾಗಿರಬೇಕು ಎಂಬ ನಿಯಮವಿದೆ.
ಆದರೆ, ಸ್ಥಳೀಯ ಶಾಸಕರು, ಕೆಲವು ಕಾಂಗ್ರೆಸ್ ಮುಖಂಡರು ಹಾಗೂ ಶಾಲೆಯ ಪ್ರಿನ್ಸಿಪಾಲ್ ಸಂತೋಷ್ ಚಕ್ಕೋಡಿ ಮತ್ತು ಉಪ ಪ್ರಿನ್ಸಿಪಾಲ್ ಮಾರುತಿ ಗೌಡ ಅವರುಗಳು ಸರ್ಕಾರದ ಸುತ್ತೋಲೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದ್ದಾರೆ. ರಾಜಕೀಯ ಪ್ರಭಾವ ಬಳಸಿ ಶಾಸಕರ ಅನುಪಸ್ಥಿತಿಯಲ್ಲಿ ‘ಮಾದಪ್ಪ’ ಎಂಬುವವರನ್ನು ಅಧ್ಯಕ್ಷರನ್ನಾಗಿ ಪತ್ರದ ಮೂಲಕ ಆಯ್ಕೆ ಮಾಡಿರುವುದು ಪೋಷಕರು ಮತ್ತು ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದೆ.
ಕಳೆದ ವರ್ಷ ನಡೆದ ಸಭೆಯಲ್ಲಿ ಸಿಡಿಸಿ ಮತ್ತು ಎಸ್ಡಿಎಂಸಿ ಸದಸ್ಯರು ಹಾಗೂ ಪೋಷಕರು ಸೇರಿ ಈ ರಾಜಕೀಯ ನೇಮಕಾತಿಯನ್ನು ಕಡ್ಡಾಯವಾಗಿ ತಿರಸ್ಕರಿಸಿದ್ದರು. “ಸರ್ಕಾರದ ನಿಯಮದಂತೆ ಶಾಸಕರೇ ಅಧ್ಯಕ್ಷರಾಗಿರಲಿ, ಇಲ್ಲವಾದರೆ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರಿಗೇ ಅಧ್ಯಕ್ಷ ಸ್ಥಾನ ನೀಡಬೇಕು” ಎಂದು ಪಟ್ಟು ಹಿಡಿದಿದ್ದರು.
ಇದಾದ ಬಳಿಕ, ಶಾಸಕ ಅನಿಲ್ ಚಿಕ್ಕಮಾದು ಅವರು ಕಳೆದ ಮಾರ್ಚ್ 5 ರಂದು ಶಾಲೆಗೆ ಭೇಟಿ ನೀಡಿ, “ಸರ್ಕಾರದ ಸುತ್ತೋಲೆಯಂತೆ ನಾನೇ ಅಧ್ಯಕ್ಷನಾಗಿ ಮುಂದುವರೆಯುತ್ತೇನೆ, ನೀವು ಉಪಾಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಿ” ಎಂದು ಪತ್ರ ನೀಡಿದ್ದರು.
ಮತ್ತೆ ನಿಯಮ ಉಲ್ಲಂಘಿಸಿದ ಶಾಸಕರು?
ಆದರೆ, ಶಾಸಕರು ತಮ್ಮ ಮಾತಿಗೆ ತಪ್ಪಿ ಜುಲೈ 1 ರಂದು ಮತ್ತೊಂದು ಪತ್ರದ ಮೂಲಕ ‘ಬಡಗ ಮಾದಪ್ಪ’ ಅವರನ್ನೇ ಅಧ್ಯಕ್ಷರಾಗಿ ಮುಂದುವರೆಯುವಂತೆ ಶಾಲೆಗೆ ಶಿಫಾರಸು ಮಾಡಿದ್ದಾರೆ. ಇದು ಸರ್ಕಾರದ ಸುತ್ತೋಲೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಶಾಲಾ ಆಡಳಿತದಲ್ಲಿ ರಾಜಕೀಯ ಬೆರೆಸಲಾಗುತ್ತಿದೆ ಎಂದು ಸಿಡಿಸಿ ಸದಸ್ಯ ಕೂಡಗಿ ಗೋವಿಂದರಾಜು ತೀವ್ರ ಆಸಮಾಧಾನ ವ್ಯಕ್ತಪಡಿಸಿದ್ದಾರೆ.
ಜುಲೈ 6ರ ಸಭೆಯಲ್ಲಿ ಪ್ರತಿಭಟನೆಯ ತೀರ್ಮಾನ:
ಶಾಸಕರ ಮತ್ತು ಶಾಲಾ ಆಡಳಿತ ಮಂಡಳಿಯ ಈ ಧೋರಣೆಯನ್ನು ಖಂಡಿಸಿ ಜುಲೈ 6 ರಂದು ಎಸ್ಡಿಎಂಸಿ ಮತ್ತು ಸಿಡಿಸಿ ಸದಸ್ಯರು, ಪೋಷಕರು ಹಾಗೂ ಮಕ್ಕಳು ತುರ್ತು ಸಭೆ ನಡೆಸಿದ್ದಾರೆ. ಶಾಸಕರ ವಿರುದ್ಧ ಕರ್ನಾಟಕ ಪಬ್ಲಿಕ್ ಶಾಲೆಯ ಮುಂಭಾಗ ಬೃಹತ್ ಪ್ರತಿಭಟನೆ ನಡೆಸಲು ದಿನಾಂಕವನ್ನು ನಿಗದಿಪಡಿಸಿ, ಹೋರಾಟ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಈ ಪ್ರಮುಖ ಸಭೆಯಲ್ಲಿ ಸಿಡಿಸಿ ಹಾಗೂ ಎಸ್ ಡಿಎಂಸಿ ಸದಸ್ಯರುಗಳಾದ ಚಂದುಸಾರಿಪ್, ಕೂಡಗಿ ಗೋವಿಂದರಾಜು, ನವೀನ ದೇವಲಾಪುರ, ಪ್ರಸನ್ನ ಬಡಗ ಸೇರಿದಂತೆ ಹಲವರು ಹಾಜರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


