ಸಿರಾ: ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹಾಗೂ ಕೆಲವು ಮುಖ್ಯ ಔಷಧಿಗಳ ಕೊರತೆ ಇದ್ದು, ಸದರಿ ಸಮಸ್ಯೆಗಳನ್ನು ಈಡೇರಿಸಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.
ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆ ಆರಂಭಗೊಳ್ಳುತ್ತಿದ್ದಂತೆ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆಗಳ ಬಗ್ಗೆ ತಾಲೂಕು ವೈದ್ಯಾಧಿಕಾರಿ ಡಾ.ಸಿದ್ಧೇಶ್ ಹಾಗೂ ಆಡಳಿತ ವೈದ್ಯಾಧಿಕಾರಿ ಡಾ.ಬಾಬು ರಾಜೇಂದ್ರ ಪ್ರಸಾದ್ ಆಸ್ಪತ್ರೆಯ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು. ಡಾ.ಸಿದ್ಧೇಶ್ ಮಾತನಾಡಿ, ಸಾಮಾನ್ಯ ಔಷಧಿಗಳ ಕೊರತೆ ಇಲ್ಲವಾದರೂ ಕೆಲವು ಮುಖ್ಯ ಔಷಧಿಗಳ ಕೊರತೆ ಇದೆ ಎಂದರು.
ಡಾ.ಬಾಬು ರಾಜೇಂದ್ರ ಪ್ರಸಾದ್ ಮಾತನಾಡಿ, ಇಬ್ಬರು ತುರ್ತು ಚಿಕಿತ್ಸಾ ವೈದ್ಯರು, ಓರ್ವ ಸರ್ಜನ್, ಒಬ್ಬರು ಫಿಜಿಷಿಯನ್ ಸೇರಿದಂತೆ 4 ಮಂದಿ ಶುಶ್ರೂಷಾಧಿಕಾರಿಗಳ ಕೊರತೆ ಇದೆ. ಖಾಲಿ ಇರುವ ಈ ಸ್ಥಾನಗಳ ಭರ್ತಿಯಾದರೆ ಸಿಬ್ಬಂದಿ ಕೊರತೆ ನೀಗಿಸಬಹುದು ಎಂದರು.
ಕೂಡಲೇ ವೈದ್ಯರ ಕೊರತೆ ಹಾಗೂ ಔಷಧಿಗಳ ಕೊರತೆಯನ್ನು ನೀಗಿಸಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದು ಎಂದು ಜಯಚಂದ್ರ ಭರವಸೆ ನೀಡಿದರು.
ವಿಪ ಸದಸ್ಯ ಚಿದಾನಂದ್ ಎಂ ಗೌಡ ಮಾತನಾಡಿ, ರಾಜ್ಯದಲ್ಲಿ ಒಂದರಿಂದ ಹತ್ತನೇ ತರಗತಿವರೆಗೆ ಒಟ್ಟು 43,441 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅವರಲ್ಲಿ 16,708 ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಹಾಗೂ 26,733 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಗಳ ಗುಣಮಟ್ಟ, ಮೂಲಸೌಕರ್ಯ ಮತ್ತು ಕಲಿಕಾ ವಾತಾವರಣವನ್ನು ಇನ್ನಷ್ಟು ಉತ್ತಮಗೊಳಿಸಿದರೆ ಹೆಚ್ಚಿನ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳತ್ತ ಆಕರ್ಷಿತರಾಗಲಿದ್ದು, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿದೆ ಎಂದು ಹೇಳಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಾಗರಾಜು ಮಾತನಾಡಿ, ಮುಂಗಾರು ಚದುರಿದಂತೆ ಆಗಿದ್ದು ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೃಷಿ ಇಲಾಖೆಯೊಂದರಲ್ಲಿಯೇ ಪ್ರಸಕ್ತ ವರ್ಷ 116 ಲಕ್ಷ ರೂ. ಬೆಳೆ ವಿಮೆ ನೀಡಲಾಗಿದೆ ಎಂದರು.
ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾರೋಗೇರೆ ಮಹೇಶ್, ತಾಲೂಕು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ನಾಗರಾಜು ಆರ್., ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಶಶಿಧರ್ ಜಿ.ಆರ್., ತಾಪಂ ಇಒ ಹರೀಶ್, ತಹಸೀಲ್ದಾರ್ ಆನಂದ್ ಕುಮಾರ್, ನಗರಸಭೆ ಆಯುಕ್ತ ರುದ್ರೇಶ್, ಯೋಜನಾಧಿಕಾರಿ ರಂಗನಾಥ್ ಸೇರಿದಂತೆ ಅನೇಕ ಪ್ರಮುಖರು ಸಭೆಯಲ್ಲಿದ್ದರು.
ಕಳೆದ ಮೂರು ನಾಲ್ಕು ವರ್ಷಗಳಿಗಿಂತಲೂ ಹೆಚ್ಚಾಗಿ ಕಳೆದ ವರ್ಷದಿಂದ ಕೆಲವೆಡೆ ತಾಲೂಕಿನ ಸರ್ಕಾರಿ ಶಾಲೆಗಳ ಮಕ್ಕಳ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಪ್ರಮುಖ ಕಾರಣ ತಾಲೂಕಿನ ಸುಮಾರು 6 ಗ್ರಾಮಗಳ ಮುಖ್ಯ ಕೇಂದ್ರಗಳಲ್ಲಿ ನೂತನ ಸರ್ಕಾರಿ ಹೈಟೆಕ್ ಶಾಲಾ ಕಟ್ಟಡಗಳ ನಿರ್ಮಾಣ. ಸರ್ಕಾರಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳುವುದು ಶಿಕ್ಷಣ ಇಲಾಖೆಯ ಕರ್ತವ್ಯವಾಗಬೇಕು.
— ಚಿದಾನಂದ್ ಎಂ. ಗೌಡ, ವಿ.ಪ.ಸದಸ್ಯ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


