ಶಿರಾ: ರಸಗೊಬ್ಬರ ಮಾರಾಟದ ಎಫ್ ಎಫ್ ಎಸ್ ಮೊಬೈಲ್ ಆಪ್ ನ ಕುಂದುಕೊರತೆಗಳನ್ನು ಈ ಕೂಡಲೇ ಕೇಂದ್ರ ಸರ್ಕಾರ ಪರಿಹರಿಸುವುದರ ಜೊತೆಗೆ ಈ ಹಳೆಯ ರಸಗೊಬ್ಬರದ ಪಿಓಎಸ್ ಮಾರಾಟ ವ್ಯವಸ್ಥೆಯನ್ನೂ ಮುಂದುವರೆಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಜಿಲ್ಲಾ ಕೃಷಿ ಪರಿಕರ ಮಾರಾಟಗಾರರ ಸಂಘ ಮನವಿ ಸಲ್ಲಿಸಿತು.
ಸಂಘದ ಜಿಲ್ಲಾಧ್ಯಕ್ಷ ಬರಗೂರು ಶಿವಕುಮಾರ್ ಸೇರಿದಂತೆ ಸಂಘದ ಎಲ್ಲಾ ಪದಾಧಿಕಾರಿಗಳು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಬರಗೂರು ಶಿವಕುಮಾರ್ ಮಾತನಾಡಿ, ಹೊಸದಾಗಿ ಪಿಓಎಸ್ ಮಿಷನ್ ಗೆ ಅಳವಡಿಸಿರುವ ಎಫ್ಎಫ್ಎಸ್ ಮೊಬೈಲ್ ಆಪ್ ಮಾಹಿತಿಯು ಎಲ್ಲಾ ರೈತರಿಗೂ ಸಮರ್ಪಕವಾಗಿ ತಿಳಿದಿಲ್ಲ, ಬಹುತೇಕ ರೈತರ ಬಳಿ ಅದರ ಅರಿವು ಮೂಡಲೂ ಆಂಡ್ರಾಯ್ಡ್ ಮೊಬೈಲ್ ಕೂಡಾ ಇರುವುದಿಲ್ಲ. ಈ ಕಾರಣದಿಂದ ರೈತರ ಆಧಾರ್ ಕಾರ್ಡ್, ದೂರವಾಣಿ ಸಂಖ್ಯೆ ಬರೆದುಕೊಂಡು ರಸ ಗೊಬ್ಬರ ನೀಡುವ ಪರಿಸ್ಥಿತಿ ಬಂದಿದೆ ಎಂದು ಅವರು ತಿಳಿಸಿದರು.
ಮುಂಗಾರು ಹಂಗಾಮು ಆರಂಭಗೊಂಡಿದ್ದು ರಸಗೊಬ್ಬರದ ಅವಶ್ಯಕತೆ ರೈತರಿಗೆ ತುಂಬಾ ಇದೆ. ಈ ಕಾರಣದಿಂದ ಎಫ್ಎಫ್ಎಸ್ ಮೊಬೈಲ್ ಆಪ್ನ ಜೊತೆಗೆ ಹಳೆಯ ಪಿಓಎಸ್ ಮಾರಾಟ ವ್ಯವಸ್ಥೆಯನ್ನೂ ಮುಂದುವರೆಸುವುದು ಅಗತ್ಯ. 3-ಎನ್ಪಿಕೆ ಮಿಶ್ರಣ ರಸಗೊಬ್ಬರಗಳ ಪೂರ್ಣ ಶ್ರೇಣಿಗಳು ಹೊಸ ಎಫ್ಎಫ್ಎಸ್ ಮೊಬೈಲ್ ಆಪ್ನಲ್ಲಿ ಲಭ್ಯವಿರುವುದಿಲ್ಲ. ರೈತರು ತಾವು ಉಪಯೋಗಿಸುವ ಗೊಬ್ಬರಗಳನ್ನು ಪಡೆಯಲಾಗುತ್ತಿಲ್ಲ. ಈ ಮೂಲ ಸಮಸ್ಯೆಗಳನ್ನು ಪರಿಹರಿಸುವಂತೆ ಬರಗೂರು ಶಿವಕುಮಾರ್ ಕೇಂದ್ರ ಸರ್ಕಾರವನ್ನು ಮನವಿ ಮಾಡಿದರು.
ಸಂಘದ ಕಾರ್ಯದರ್ಶಿ ಗಿರಿರಾಜ್, ಆನಂದ್, ಪ್ರಕಾಶ್ ಕೆ, ಸಹಕಾರ್ಯದರ್ಶಿ ಚಂದುಬಾಬು, ಖಜಾಂಚಿ ಸಿದ್ದಗಂಗಪ್ಪ, ಸಿದ್ದಪ್ಪ ಜೈರಾಜ್, ಸಿಇಓ ದೇವರಾಜ್ ಸೇರಿದಂತೆ ಸಂಘದ ಎಲ್ಲಾ ನಿರ್ದೇಶಕರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


