ಸರಗೂರು: ದಲಿತ ವರ್ಗದ ಅಭಿವೃದ್ಧಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರಂತೆ ಶ್ರಮಿಸಿದ ಡಾ.ಬಾಬು ಜಗಜೀವನ್ ರಾಮ್ ಅವರ ಜೀವನದ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಹಿಂದುಳಿದವರ ಏಳಿಗೆಗಾಗಿ ಶ್ರಮಿಸಬೇಕಾದ ಅಗತ್ಯವಿದೆ ಎಂದು ಎಸ್ಸಿ-ಎಸ್ಟಿ ಸಮಿತಿ ಸದಸ್ಯ ಹಾಗೂ ಮಾಧರ ಮಹಾಸಭಾ ತಾಲೂಕು ಅಧ್ಯಕ್ಷರಾದ ಕುರ್ಣೇಗಾಲ ಬೆಟ್ಟಸ್ವಾಮಿ ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ. ಬಾಬು ಜಗಜೀವನ್ ರಾಮ್ ಅವರ 40ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಹೋರಾಟಗಾರರು ಮತ್ತು ಉತ್ತಮ ಆಡಳಿತಗಾರರಾಗಿದ್ದ ಬಾಬು ಜಗಜೀವನ್ ರಾಮ್ ಅವರು ಜನಪ್ರಿಯವಾಗಿ ‘ಬಾಬೂಜಿ’ ಎಂದೇ ಕರೆಯಲ್ಪಡುತ್ತಿದ್ದರು. ಹಿಂದುಳಿದ ಸಮಾಜದವರಿಗೆ ಸಮಾನತೆ ಹಾಗೂ ಗೌರವಾನ್ವಿತ ಸ್ಥಾನಮಾನಗಳನ್ನು ಗಳಿಸಿಕೊಡುವುದಕ್ಕಾಗಿ ಅವರು ಸುಮಾರು ಐವತ್ತು ವರ್ಷಗಳ ಕಾಲ ವಿಶೇಷ ಪ್ರಯತ್ನ ಪಟ್ಟಿದ್ದರು. ಒಬ್ಬ ರಾಷ್ಟ್ರೀಯ ನಾಯಕರಾಗಿ, ಸಂಸತ್ ಪಟುವಾಗಿ, ಕೇಂದ್ರದ ಮಂತ್ರಿಯಾಗಿ ಹಾಗೂ ಹಿಂದುಳಿದ ಮತ್ತು ದಲಿತರ ಅಭಿವೃದ್ಧಿಯ ಹರಿಕಾರರಾಗಿ ಬಾಬೂಜಿಯವರ ರಾಜಕೀಯ ಸಾಮರ್ಥ್ಯ, ಆದರ್ಶ ಮತ್ತು ಅನನ್ಯ ಸ್ಪೂರ್ತಿ ಇಂದಿಗೂ ಅನುಕರಣೀಯವಾಗಿದೆ. ಅವರ ರಾಜಕೀಯ ನಾಯಕತ್ವವು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಷ್ಟೇ ಅಲ್ಲದೆ, ಆಧುನಿಕ ಪ್ರಜಾಪ್ರಭುತ್ವದ ನಿರ್ಮಾಣಕ್ಕೆ ಭದ್ರ ಬುನಾದಿ ಒದಗಿಸಿಕೊಟ್ಟಿತು ಎಂದು ಬೆಟ್ಟಸ್ವಾಮಿ ಅವರು ಸ್ಮರಿಸಿದರು.
ಬಾಬು ಜಗಜೀವನರಾಂ ವಿಚಾರ ವೇದಿಕೆ ಅಧ್ಯಕ್ಷರಾದ ಕೊತ್ತೇಗಾಲ ತಿಮ್ಮಯ್ಯ ಮಾತನಾಡಿ, “ಸಮಾಜದಲ್ಲಿರುವ ಎಲ್ಲಾ ಜಾತಿಯ ಬಡವರ ಉದ್ದಾರವಾಗುವವರೆಗೆ ದೇಶದ ನೈಜ ಅಭಿವೃದ್ಧಿ ಸಾಧ್ಯವಿಲ್ಲ. ದೇಶದ ರೈತರು ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವವರೆಗೆ ಕೃಷಿ ವಲಯದ ಪ್ರಗತಿಯಾಗುವುದಿಲ್ಲ ಎಂದು ಜಗಜೀವನ್ ರಾಮ್ ಅವರು ಸದಾ ಹೇಳುತ್ತಿದ್ದರು. ದೇಶದ ಕೃಷಿ ಸಚಿವರಾಗಿ ಅವರು ಮಾಡಿದ ಕಾರ್ಯಗಳು ಕೃಷಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಿದವು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಹಸಿಲ್ದಾರ್ ಮೋಹನಕುಮಾರಿ ಅವರು, “ಬಾಬು ಜಗಜೀವನ್ ರಾಮ್ ಅವರ ಆದರ್ಶಗಳು, ಭಾರತದ ಹಸಿರು ಕ್ರಾಂತಿಗೆ ಅವರು ನೀಡಿದ ಅಪ್ರತಿಮ ಕೊಡುಗೆ ಮತ್ತು ದಲಿತರ ಅಭಿವೃದ್ಧಿಗಾಗಿ ಅವರು ನಡೆಸಿದ ಹೋರಾಟಗಳ ಕುರಿತು ಇಂದಿನ ಯುವ ಪೀಳಿಗೆಗೆ ಉಪನ್ಯಾಸ ಹಾಗೂ ವಿಚಾರ ಸಂಕಿರಣಗಳ ಮೂಲಕ ಮಾಹಿತಿ ನೀಡಬೇಕಾದ ಅಗತ್ಯವಿದೆ” ಎಂದು ಪ್ರತಿಪಾದಿಸಿದರು.
ಬಾಬೂಜಿಯವರು ಕೃಷಿ ಸಚಿವರಾಗಿದ್ದ ಅವಧಿಯಲ್ಲಿ ರಾಸಾಯನಿಕ ಗೊಬ್ಬರ ಪದ್ಧತಿಯನ್ನು ಪರಿಚಯಿಸಿ, ಆಧುನಿಕ ಬೇಸಾಯಕ್ಕೆ ಒತ್ತು ನೀಡಲಾಯಿತು. ಇದರ ಫಲವಾಗಿ ದೇಶದಲ್ಲಿ ಆಹಾರದ ಉತ್ಪಾದನೆ ಗಣನೀಯವಾಗಿ ಹೆಚ್ಚಿತು. ಕೃಷಿ ಉತ್ಪನ್ನಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ, ವಿದೇಶಗಳಿಗೆ ರಫ್ತು ಮಾಡುವಷ್ಟರ ಮಟ್ಟಿಗೆ ದೇಶ ಸ್ವಾವಲಂಬನೆ ಸಾಧಿಸಲು ಅವರ ದೂರದೃಷ್ಟಿಯೇ ಕಾರಣ ಎಂದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚೈತ್ರ ಸ್ವಾಮಿ, ಪಪಂ ಸದಸ್ಯೆ ಸಣ್ಣತಾಯಮ್ಮ, ಇಓ ಪ್ರೇಮ್ ಕುಮಾರ್, ಪಪಂ ಮುಖ್ಯಾಧಿಕಾರಿ ಎಸ್.ಕೆ. ಸಂತೋಷ್ ಕುಮಾರ್, ಗಡಿ ಯಜಮಾನರಾದ ವೆಂಕಟೇಶ್, ಮುಖಂಡರಾದ ಹಂಚೀಪುರ ನಾಗರಾಜು, ಚಾಮಲಾಪುರ ಶಿವಲಿಂಗಯ್ಯ, ಮುಳ್ಳೂರು ಸಿದ್ದಪ್ಪ, ಹೆಜುರಯ್ಯ, ಸ್ವಾಮಿ, ಆಟೋ ರಮೇಶ್, ಅಪ್ಪಾಜಿ, ಜವರಪ್ಪ, ಮಹೇಶ್, ರಾಮಚಂದ್ರ, ಜಯರಾಮ್, ಆನಂದ್, ಕುರ್ಣೇಗಾಲ ಸಿದ್ದಯ್ಯ, ಕಸಾಪ ಪ್ರಧಾನ ಕಾರ್ಯದರ್ಶಿ ನಿಂಗರಾಜು, ಆರ್.ಐ. ರವಿಚಂದ್ರನ್, ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕರಾದ ಗುಣದಾರ್, ವಾರ್ಡನ್ ಜಗದೀಶ್, ಶಿರಸ್ತೇದಾರ್ ಮನೋಹರ್ ಸೇರಿದಂತೆ ಹಲವು ಪ್ರಮುಖರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಹಾದನೂರು ಚಂದ್ರ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


