ಬೆಂಗಳೂರು: ತಂದೆ ಸಾವಿನ ಬಳಿಕ ಅವರ ಹೆಸರಿನಲ್ಲಿ ನಕಲಿ ವಿಲ್(ಉಯಿಲು ಪತ್ರ) ಸೃಷ್ಟಿಸಿ ಮಲತಾಯಿಗೆ ಸೇರಬೇಕಿದ್ದ 50 ಕೋಟಿ ಮೌಲ್ಯದ ಆಸ್ತಿಯನ್ನ ಮಕ್ಕಳಿಬ್ಬರು ಕಬಳಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬೋಜಮ್ಮ (67) ಎಂಬುವರು ಕೊಟ್ಟ ದೂರಿನ ಮೇರೆಗೆ ಹಲಸೂರು ಗೇಟ್ ಪೊಲೀಸರು ಮಕ್ಕಳಿಬ್ಬರನ್ನು ಬಂಧಿಸಿದ್ದಾರೆ.
ಚೆನ್ನಪ್ಪ ಅವರಿಗೆ ಲಕ್ಷ್ಮಮ್ಮ ಮತ್ತು ಬೋಜಮ್ಮ ಪತ್ನಿಯರು. ಮೊದಲ ಪತ್ನಿಗೆ ಸುರೇಶ್, ಮಹೇಶ್ ಸೇರಿ ಮೂವರು ಮಕ್ಕಳು. ಬೋಜಮ್ಮಗೆ ಒಬ್ಬ ಪುತ್ರನಿದ್ದಾನೆ. 2014ರ ಜೂನ್ನಲ್ಲಿ ಚೆನ್ನಪ್ಪ ಮೊಮ್ಮಕ್ಕಳಿಗೆ ವಿಲ್ ಮಾಡಿದ್ದರು. ಈ ಪ್ರಕಾರ ಲಕ್ಷ್ಮಮ ಫೈನಾನ್ಸ್ ಸಂಸ್ಥೆ ಬೋಜಮ್ಮಗೆ ಸೇರಬೇಕಿತ್ತು. 2019ರಲ್ಲಿ ಚೆನ್ನಪ್ಪ ಮೃತಪಟ್ಟರು. ಇದಾದ ಮೇಲೆ ಆರೋಪಿಗಳು, 2016ನೇ ಸಾಲಿನಲ್ಲಿ ಚೆನ್ನಪ್ಪ ವಿಲ್ ಮಾಡಿದ್ದಾರೆ ಎಂದು ಒಂದೊಂದಾಗಿ ಗಾಂಧಿನಗರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಡೆತತ್ನೋಟ್ ಸಲ್ಲಿಸಿ ಐದು ದೃಢೀಕೃತ ವಿಲ್ ಪಡೆದಿದ್ದಾರೆ. ಇದರ ಆಧಾರದ ಮೇಲೆ ಲಕ್ಷ್ಮಮ್ಮರ ಫೈನಾನ್ಸ್ ಸಂಸ್ಥೆಯನ್ನು ಸುರೇಶ್ ಮತ್ತು ಮಹೇಶ್ ತಮ್ಮ ಹೆಸರಿಗೆ ಅಧಿಕಾರವನ್ನು ವರ್ಗಾವಣೆ ಮಾಡಿಸಿಕೊಂಡು 50 ಕೋಟಿ ರೂ. ಆಸ್ತಿಯನ್ನು ಕಬಳಿಸಿದ್ದರು.
ಕೆಲವೇ ದಿನಕ್ಕೆ ಬೋಜಮ್ಮಗೆ ಈ ವಿಷಯ ತಿಳಿದು, ಫೈನಾನ್ಸ್ ಸಂಸ್ಥೆಯ ಅಧಿಕಾರ ಹಸ್ತಾಂತರದ ಬಗ್ಗೆ ದಾಖಲೆ ಪರಿಶೀಲನೆ ನಡೆಸಿದಾಗ ಗಾಂಧಿನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪಡೆದ ವಿಲ್ ಪ್ರತಿ ಲಭ್ಯವಾಗಿದೆ. ಇದೇ ವಿಲ್ ಪ್ರತಿಯನ್ನು ವಕೀಲರ ಮೂಲಕ ಪಡೆದ ಬೋಜಮ್ಮ ಪರಿಶೀಲನೆ ನಡೆಸಿದಾಗ ಅದು ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಹಲಸೂರು ಗೇಟ್ ಠಾಣೆಗೆ ಬೋಜಮ್ಮ ದೂರು ನೀಡಿದ್ದರು.
ಬೇರೆಯವರ ವಿಲ್ ನಕಲಿ ಮಾಡಿದ ಭೂಪರು: ಅಮೆರಿಕದಲ್ಲಿ ನೆಲೆಸಿರುವ ಮೈಸೂರು ಮೂಲದ ಎಂ.ಆರ್. ಜಯರಾಮ್ ಎಂಬುವರು, 2016-17ರಲ್ಲಿ ಇಂಗ್ಲಿಷ್ನಲ್ಲಿ ವಿಲ್ ಮಾಡಿದ್ದು, ಬುಕ್ ನಂಬರ್ 162/16-17ರಲ್ಲಿ ನೀಡಲಾಗಿದೆ. ಇದೇ ವಿಲ್ ಪಡೆದ ಆರೋಪಿಗಳು, ಇಂಗ್ಲಿಷ್ ನಲ್ಲಿ ಇದ್ದ ವಿಷಯವನ್ನು ನಾಶ ಮಾಡಿ ಬದಲಿಗೆ ತಮಗೆ ಬೇಕಾದ ರೀತಿಯಲ್ಲಿ ಕನ್ನಡದಲ್ಲಿ ಟೈಪ್ ಮಾಡಿಕೊಂಡಿದ್ದಾರೆ. ಚೆನ್ನಪ್ಪ ಫೋಟೋ ಮತ್ತು ಬೆರಳಚ್ಚು ಅಂಟಿಸಿದ್ದು, ಉಳಿದಂತೆ ಬುಕ್ ನಂಬರ್, ಸಿಡಿ ನಂಬರ್ ಮತ್ತು ಸಾಕ್ಷಿದಾರರು, ಜಯರಾಮ್ ಪಾವತಿಸಿದ್ದ ನೋಂದಣಿ ಶುಲ್ಕ ಚಲನ್ ನಂಬರ್ ಎಲ್ಲವೂ ಒಂದೇ ಆಗಿದೆ. ಕೇವಲ ಒಳಗಿದ್ದ ವಿಷಯವನ್ನು ಮಾತ್ರ ಬದಲು ಮಾಡಿಕೊಂಡಿದ್ದಾರೆ.
ಸಬ್ ರಿಜಿಸ್ಟ್ರಾರ್, ಸಿಬ್ಬಂದಿ ಕೈವಾಡ ಇಲ್ಲವೇ?: ವಿಲ್ ಗೌಪ್ಯ ಮಾಹಿತಿ ಆಗಿದೆ. ವಿಲ್ ಬರೆದ ವ್ಯಕ್ತಿ ಸತ್ತ ಮೇಲೆ ಅದನ್ನು ಬಹಿರಂಗ ಮಾಡಬೇಕು. ಡೆತ್ನೋಟ್ ಕೊಟ್ಟಾಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪ್ರತಿ ಪಡೆಯಬೇಕು. ಅಮೆರಿಕದಲ್ಲಿ ಜೀವಂತವಾಗಿರುವ ಜಯರಾಮ್ ವಿಲ್ ಬಹಿರಂಗ ಮಾಡಿದವರು ಯಾರು? ಆರೋಪಿಗಳು, ಮಾಹಿತಿ ಹಕ್ಕು ಕಾಯ್ದೆಯಡಿ ಗಾಂಧಿನಗರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಅರ್ಜಿ ಸಲ್ಲಿಸಿ 800 ರೂ. ಶುಲ್ಕ ಪಾವತಿಸಿದ್ದಾರೆ.
ಅಲ್ಲಿನ ಅಧಿಕಾರಿ, ಸಿಬ್ಬಂದಿ ದೃಢೀಕೃತ 5 ವಿಲ್ ಪ್ರತಿ ಕೊಟ್ಟಿದ್ದಾರೆ. ಅಂದರೆ, ಕಚೇರಿ ಒಳಗೆಯೇ ಕರಾಮತ್ತು ನಡೆದಿರುವ ಶಂಕೆ ವ್ಯಕ್ತವಾಗಿದೆ. ಮತ್ತೊಂದು ಮಾಹಿತಿ ಪ್ರಕಾರ ವಿಕಾಸಸೌಧದಲ್ಲಿರುವ ರಾಜ್ಯ ಮಟ್ಟದ ಕಾವೇರಿ ಸರ್ವರ್, ಕೊಡಿಗೇಹಳ್ಳಿಯಲ್ಲಿರುವ ಜಿಲ್ಲಾ ಸರ್ವರ್ನಲ್ಲಿ ಅಸಲಿ(ಜಯರಾಮ್ ವಿಲ್) ಪ್ರತಿಯೇ ಇದೆ. ಆದರೆ, ಗಾಂಧಿನಗರದಲ್ಲಿ ಮಾತ್ರ ನಕಲಿ ವಿಲ್ ಕೊಡುತ್ತಿದ್ದು, ಇದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಸುರೇಶ್ ಕುಮಾರ್, ಮಹೇಶ್ ಕುಮಾರ್ ಮತ್ತು ಗಾಂಧಿನಗರ ಉಪ ನೋಂದಣಾಧಿಕಾರಿ ಕಚೇರಿ ಅಧಿಕಾರಿ, ಸಿಬ್ಬಂದಿ ಸೇರಿ 11 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪ್ರಾಥಮಿಕ ತನಿಖೆ ವೇಳೆ ನಕಲಿ ವಿಲ್ ಸೃಷ್ಟಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮಕ್ಕಳಾದ ಸುರೇಶ್ ಮತ್ತು ಮಹೇಶ್ ಎಂಬುವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದ್ಯ ಆರೋಪಿಗಳು ಜಾಮೀನು ಪಡೆದಿದ್ದಾರೆ. ತಂದೆ ಹೆಸರಿನಲ್ಲಿ ನಕಲಿ ವಿಲ್ ಸೃಷ್ಟಿಸಿ ಆಸ್ತಿ ಕಬಳಿಸಿದ ಆರೋಪದ ಮೇಲೆ ಇಬ್ಬರು ಮಕ್ಕಳನ್ನು ಬಂಧಿಸಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿ ಅಧಿಕಾರಿ, ಸಿಬ್ಬಂದಿ ಪಾತ್ರದ ಬಗ್ಗೆ ತನಿಖೆ ಮುಂದುವರಿದೆ.
ವರದಿ: ಮುರುಳಿಧರನ್ ಆರ್., ಹಿರಿಯೂರು. ( ಚಿತ್ರದುರ್ಗ – ದಾವಣಗೆರೆ )
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy