ತುಮಕೂರು: ಮದ್ಯಪಾನ ಬಿಟ್ಟು ತಮ್ಮ ಕುಟುಂಬದ ಸದಸ್ಯರೊಂದಿಗೆ ಹೊಸ ಜೀವನ ಪ್ರಾರಂಭಿಸಿ, ಡಾ.ಡಿ.ವಿರೇಂದ್ರ ಹೆಗ್ಗಡೆರವರು ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡು ಮದ್ಯ ಸೇವಿಸಿ ತಮ್ಮ ಜೀವನವನ್ನು ಹಾಳುಮಾಡಿಕೊಂಡ ಜನರನ್ನು ಒಂದೆಡೆ ಸೇರಿಸಿ 8 ದಿನಗಳ ಕಾಲ ಸಾರ್ವಜನಿಕರು, ದಾನಿಗಳ ಸಹಕಾರದೊಂದಿಗೆ ಶಿಬಿರ ಏರ್ಪಡಿಸಿ ಕುಡಿತವನ್ನು ಬಿಡಿಸಿ ಲಕ್ಷಾಂತರ ಜನರಿಗೆ ಉತ್ತಮ ಜೀವನವನ್ನು ಕಟ್ಟಿಕೊಟ್ಟವರು.
ಜೀವನದಲ್ಲಿ ಆರೋಗ್ಯವೇ ಭಾಗ್ಯ, ಎಲ್ಲರೂ ಸೇವಾ ಕಾರ್ಯಗಳನ್ನು ಸದಾ ಮಾಡುತ್ತಿರಿ, ಈ ಶಿಬಿರದಿಂದ ಮಾನಸಿಕವಾಗಿ ಪರಿವರ್ತನೆ ಆಗಿದ್ದೀರಿ, ಈ ದೇಶಕ್ಕೆ ಆಸ್ತಿಯಾಗಿ ಉತ್ತಮ ಜೀವನವನ್ನು ನಡೆಸಿ ತಂದೆ ತಾಯಿಗೆ ಉತ್ತಮ ಮಗನಾಗಿ, ಹೆಂಡತಿಗೆ ಒಳ್ಳೆಯ ಜವಾಬ್ದಾರಿ ಗಂಡನಾಗಿ, ತಂದೆಯಾಗಿ ತಮ್ಮ ಮಕ್ಕಳೊಂದಿಗೆ ಜೀವನ ನಡೆಸಿ ಎಂದು ಹಿರೇಮಠದ ಡಾ.ಶ್ರೀ ಶ್ರೀ ಶಿವನಾಂದಶಿವಾಚಾರ್ಯಸ್ವಾಮೀಜಿಗಳು ಆಶೀರ್ವದಿಸಿದರು.
ಭೀಮಸಂದ್ರ ಗಣಪತಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ೧೮೩೩ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವಾರಾಧ್ಯರವರು ಎಲ್ಲರೂ ಜೀವನದಲ್ಲಿ ಮದ್ಯಪಾನ ಬಿಟ್ಟು ಹೊಸ ಜೀವನ ಕಟ್ಟಿಕೊಳ್ಳಿ, ಆರ್ಥಿಕ ಸಾಮಾಜಿಕ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಮುಂದಿನ ಜೀವನ ನಡೆಸಿ ಎಂದು ಕಿವಿಮಾತು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಪ್ರಾದೇಶಿಕ ನಿರ್ದೇಶಕರಾದ ಎಂ.ಶೀನಪ್ಪ, ನವರು ಪೂಜ್ಯ ವೀರೇಂದ್ರ ಹೆಗ್ಗಡೆರವರ ದೂರದೃಷ್ಠಿತ್ವದಿಂದ ಸಮಾಜದಲ್ಲಿ ಹಲವಾರು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿವೆ. ಮದ್ಯವರ್ಜನ ಶಿಬಿರದಿಂದ ಇಲ್ಲಿವರೆವಿಗೂ ೧.೩ಲಕ್ಷ ಜನ ಕುಡಿತ ಬಿಟ್ಟು ಉತ್ತಮ ದಾರಿಯಲ್ಲಿ ಸಾಗುತ್ತಿದ್ದಾರೆ. ಸ್ವಾಭಿಮಾನದಿಂದ ಬದುಕಿ ತೋರಿಸಿ, ನೀವೆಲ್ಲರೂ ಸಮಾಜದ ಮುಖ್ಯ ವಾಹಿನಿಗೆ ಬರಬೇಕು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖಾಂತರ ಸಾರ್ವಜನಿಕರಿಗೆ ಸರ್ಕಾರದ ಎಲ್ಲ ಯೋಜನೆಗಳನ್ನು ತಲುಪಿಸುತ್ತಿದ್ದೇವೆ, ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಸುಜ್ಞಾನ ನಿಧಿಯಿಂದ ತಲಾ ೧ ಸಾವಿರ ವಿದ್ಯಾರ್ಥಿವೇತನ ನೀಡುತ್ತಿದ್ದೇವೆ. ನೂರಾರು ಯೋಜನೆಯ ಮೂಲಕ ರಾಜ್ಯದ ಎಲ್ಲ ಜನರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಕಳಕಳಿ ಇಟ್ಟುಕೊಂಡು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸೇವೆ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಮಾತನಾಡುತ್ತಾ, ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಜನರಿಗೆ ಅಭಯದಾನ, ಶಿಕ್ಷಣ ದಾನ, ಅನ್ನದಾನ, ಔಷಧ ದಾನ ಹೀಗೆ ನಾನಾ ದಾನಗಳನ್ನು ನೀಡುತ್ತಾ ಬರುತ್ತಿದ್ದಾರೆ, 8 ದಿನಗಳ ಕಾಲ ನಡೆದ ಈ ಶಿಬಿರದಲ್ಲಿ ಶಿಬಿರಾರ್ಥಿಯಾಗಿ ಪಾಲ್ಗೊಂಡ ಗಂಡನನ್ನು ಇಂದು ಹೆಂಡತಿಗೆ ಒಪ್ಪಿಸುತ್ತಿದ್ದೇವೆ, ಅನ್ಯೋನ್ಯವಾಗಿ ಮುಂದಿನ ಜೀವನ ನಡೆಸಿ ಎಂದು ದಂಪತಿಗಳಿಗೆ ತಿಳಿಸಿದರು.
ವೇದಿಕೆಯಲ್ಲಿ ಮುರಳೀಧರ ಹಾಲಪ್ಪ, ಅಮರನಾಥಶೆಟ್ಟಿ, ಈಶ್ವರಯ್ಯ, ಉಪ್ಪಾರಹಳ್ಳಿ ಕುಮಾರ್, ಗಣೇಶ್ ಪ್ರಸಾದ್, ತಿಮ್ಮಯ್ಯ ನಾಯಕ್ ಮುಂತಾದವರು ಉಪಸ್ಥಿತರಿದ್ದರು. ತಾಲ್ಲೂಕು ಯೋಜನಾಧಿಕಾರಿ ಪಿ.ಬಿ.ಸಂದೇಶ್ ರವರು ಸ್ವಾಗತಿಸಿ,ಹೇಮಂತ್ ಕುಮಾರ್ ವಂದಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296