ತುಮಕೂರು: ನಗರ ಹೊರವಲಯದ ಅಮ್ಲಾಪುರದ ಮದರಸಾದಲ್ಲಿ ವ್ಯಾಸಂಗಕ್ಕೆ ಬಂದಿದ್ದ ಹೊರ ರಾಜ್ಯದ 24 ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳದೆ ದೈಹಿಕ ಹಿಂಸೆ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಬೆಂಗಳೂರಿನ ರೈಲ್ವೇ ಮಕ್ಕಳ ಸಹಾಯವಾಣಿ ಮೇಲ್ವಿಚಾರಕ ನಾಗಭೂಷಣ್ ಅವರು ಗ್ರಾಮಾಂತರ ಠಾಣೆಗೆ ಮೇ 10ರಂದು ನೀಡಿದ ದೂರಿನಲ್ಲಿ ಅಮ್ಲಾಪುರದ ಜಾಮಿಯಾ ಅರೇಬಿಯಾ ಹಸೀನಿಯಾ ಟ್ರಸ್ಟ್ ನಡೆಸುತ್ತಿದ್ದ ಮದರಸಾದಲ್ಲಿನ ಮಕ್ಕಳ ಹಿಂಸೆ ಪ್ರಕರಣ ಬಯಲಾಗಿದೆ. ಸದರಿ ಮದರಸಾದಿಂದ ಏ. 19ರಂದು ಓಡಿಬಂದಿದ್ದ 24 ಮಕ್ಕಳನ್ನು ಬೆಂಗಳೂರಿನ ಕೆಎಸ್ ಆರ್ ರೈಲು ನಿಲ್ದಾಣದಲ್ಲಿ ರೈಲ್ವೇ ರಕ್ಷಣಾ ದಳ ಸಿಬ್ಬಂದಿ ರಕ್ಷಿಸಿ ಪುನರ್ವಸತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ, ರೈಲ್ವೇ ಮಕ್ಕಳ ಸಹಾಯವಾಣಿ ಸಿಬ್ಬಂದಿ ವಶಕ್ಕೆ ನೀಡಿದ್ದರು.
ಬಳಿಕ ಏ. 23ರಂದು ಮಕ್ಕಳ ಕಲ್ಯಾಣ ಸಮಿತಿಯವರು ಮಕ್ಕಳನ್ನು ಆಪ್ತಸಮಾಲೋಚನೆಗೆ ಒಳಪಡಿಸಿದಾಗ ನಮಗೆ ಮದರಸಾದಲ್ಲಿ ಹುಳು ಇರುವ ಅನ್ನ ನೀಡುತ್ತಾರೆ. ಜೊತೆಗೆ ಮದರಸಾದಲ್ಲಿ ಗೋಡೆಕಟ್ಟುವ ಕಾಮಗಾರಿ ನಡೆಯುತ್ತಿದ್ದು, ಆ ಕೆಲಸವನ್ನು ನಮ್ಮಿಂದಲೇ ಮಾಡಿಸುತ್ತಾರೆ ಎಂದು ತಿಳಿಸಿದ್ದು, ಮಕ್ಕಳ ಹೇಳಿಕೆ ಆಧಾರದಲ್ಲಿ ಬೆಂಗಳೂರು ದಕ್ಷಿಣ ಮಕ್ಕಳ ಕಲ್ಯಾಣ ಸಮಿತಿ ಅವರು ರೈಲ್ವೇ ಮೇಲ್ವಿಚಾರಕರಿಗೆ ದೂರು ನೀಡಲು ಸೂಚಿಸಿದ್ದರು.
ಅದರಂತೆ ಮೇ 10ರಂದು ಮದರಸಾ ಶಿಕ್ಷಕ ಮೌಲಾಲಿ (44) ಈತನ ವಿರುದ್ಧ ದೂರು ನೀಡಿದ್ದು, ಬಾಲ ನ್ಯಾಯ ಆರೈಕೆ ರಕ್ಷಣೆ ತಿದ್ದುಪಡಿ ಕಾಯ್ದೆ, ಕಲಂ 146 (ಬಿಎನ್ಎಸ್), ಕಲಂ 3, 3ಎ, 14, 14(1) ಬಾಲ ಮತ್ತು ಹದಿಹರೆಯದ ಕಾಯ್ದೆ 1986 ಹಾಗೂ 2016 ರೀತ್ಯಾ ಪ್ರಕರಣ ದಾಖಲಾಗಿದೆ. ಓಡಿ ಬಂದಿದ್ದ ವಿದ್ಯಾರ್ಥಿಗಳೆಲ್ಲರೂ 9 ರಿಂದ 17 ವರ್ಷದ ಒಳಗಿನ ಬಿಹಾರ ಮೂಲದ ಮಕ್ಕಳಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


