ಧಾರ್ಮಿಕ ಕೇಂದ್ರಗಳಲ್ಲಿ ಕೆಲವು ವರ್ಗದವರು ವ್ಯಾಪಾರ ಮಾಡಬಾರದು ಎಂಬ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿ ಬಿಜೆಪಿ ಮತ್ತು ಕಾಂಗ್ರೆಸ್ ಸದ್ಯಸರ ನಡುವೆ ಏರಿದ ಧ್ವನಿಯಲ್ಲಿ ವಾಗ್ವಾದ ನಡೆದ ಪ್ರಸಂಗ ಜರುಗಿತು. ಶೂನ್ಯವೇಳೆಯಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ವಿಷಯ ಪ್ರಸ್ತಾಪಿಸಿ, ಸಾಮರಸ್ಯ, ಸಹೋದರತ್ವ ಮೂಡಿಸಬೇಕೆ ಹೊರತು ಕದಡುವಂತಹ ಕೆಲಸವಾಗಬಾರದು. ಬೀದಿಬದಿ ವ್ಯಾಪಾರಸ್ಥರು ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ.ಅಂಥವರಿಗೆ ಧಾರ್ಮಿಕ ಕೇಂದ್ರಗಳಲ್ಲಿ ವ್ಯಾಪಾರ ಮಾಡಬಾರದು ಎಂಬ ನಿರ್ಬಂಧದ ಫಲಕ ಹಾಕಲಾಗಿದೆ ಎಂದು ಹೇಳಿದರು.
ಆ ಸಂದರ್ಭದಲ್ಲಿ ಖಾದರ್ ಅವರು ಬಳಸಿದ ಪದಕ್ಕೆ ಶಾಸಕ ಕೆ.ಜಿ.ಬೋಪಯ್ಯ ಆಕ್ಷೇಪ ವ್ಯಕ್ತಪಡಿಸಿದರು. ಆಗ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ, ಮಾತಿನ ಚಕಮಕಿ ನಡೆದು ಸದನದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.ಸಭಾಧ್ಯಕ್ಷ ವಿಶ್ವೇಶ್ವರ ಹೆಗ್ಡೆ ಕಾಗೇರಿ ಅವರು ಸಮಾಧಾನಪಡಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಆಡಳಿತ ಪಕ್ಷದ ರಘುಪತಿ ಭಟ್, ಸೋಮಶೇಖರ್, ಸಿದ್ದು ಸವದಿ, ರೇಣುಕಾಚಾರ್ಯ ಎದ್ದು ನಿಂತು ಮಾತನಾಡುತ್ತಿದ್ದರು. ಹಾಗೆಯೇ ಕಾಂಗ್ರೆಸ್ನ ಜಮೀರ್ ಅಹಮ್ಮದ್ ಖಾನ್, ಅಜಯ್ ಧರ್ಮಸಿಂಗ್, ರಿಜ್ವಾನ್ ಅರ್ಷದ್ ಮತ್ತಿತರರು ಮಾತನಾಡಲು ಮುಂದಾದಾಗ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು.ಕಾನೂನು ಸಚಿವ ಮಾಧುಸ್ವಾಮಿ ಅವರು, ಶಾಸಕ ರೇಣುಕಾಚಾರ್ಯ ಸೇರಿದಂತೆ ಆಡಳಿತ ಪಕ್ಷದ ಸದಸ್ಯರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.
ಯಾರೂ ಕೂಡ ಸದನಕ್ಕೆ ಅಡ್ಡಿಪಡಿಸದೆ ಸದನ ನಡೆಯಲು ಸಹಕಾರ ನೀಡಿ ಎಂದರು. ಯು.ಟಿ.ಖಾದರ್ ಮಾತನಾಡಿ, ಯಾವುದೇ ಜಾತಿ, ಧರ್ಮ ಹೆಸರು ಪ್ರಸ್ತಾಪಿಸಿಲ್ಲ.ಸಮಾಜದಲ್ಲಿ ಸಹೋದರತೆ ಅಗತ್ಯ. ಬೀದಿಬದಿ ವ್ಯಾಪಾರಸ್ಥರು ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ. ದುಡಿಯುವ ವರ್ಗ. ಧಾರ್ಮಿಕ ಸ್ಥಳಗಳಲ್ಲಿ ವ್ಯಾಪಾರ ಮಾಡಲು ಅವಕಾಶವಿದೆ. ಎಲ್ಲ ಜಾತಿ ಧರ್ಮದವರು ಒಂದೇ ತಾಯಿ ಮಕ್ಕಳಂತಿದ್ದಾರೆ. ಭಿತ್ತಿಪತ್ರ, ಬ್ಯಾನರ್ನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುತ್ತಾರೆ. ಇದರಿಂದ ಸಮಸ್ಯೆ ಸೃಷ್ಟಿಸುವ ಕೆಲಸವಾಗುತ್ತದೆ.
ಪೊಲೀಸರು ಮಾಡುವ ಕೆಲಸವನ್ನು ಮಾಡಿ ಅಂಥದ್ದನ್ನು ತೆಗೆಸಿದ್ದಾರೆ. ಸಮಾಜದಲ್ಲಿ ವೈಮನಸ್ಸು ಉಂಟು ಮಾಡಲು ಅವಕಾಶ ಕೊಡಬಾರದು. ಈ ರೀತಿ ಭಿತ್ತಿಪತ್ರ ಹಾಕಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಲಾಭಕ್ಕಾಗಿ ಸಾಮರಸ್ಯ ಹಾಳು ಮಾಡಿದರೆ ಮುಂದಿನ ಪೀಳಿಗೆಗೆ ದೊಡ್ಡ ದ್ರೋಹವಾಗಲಿದೆ. ಒಂದು ವರ್ಗದ ವ್ಯಾಪಾರಿಗಳು ಬರಬಾರ ದು ಎಂದರೆ ಸಮಾಜಕ್ಕೆಆಘಾತಕ್ಕಾಗಿ ಬಹಿಷ್ಕಾರ ಹಾಕುವ ಸಂಪ್ರದಾಯ ಸರಿಯಲ್ಲ ಎಂದು ಹೇಳಿದರು.ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ, 2002ರ ಧಾರ್ಮಿಕ ದತ್ತಿ ಕಾಯ್ದೆಯಲ್ಲಿ ಈ ಧಾರ್ಮಿಕ ಸಂಸ್ಥೆ ಆವರಣ, ಕಟ್ಟಡ ಸಮೀಪದಲ್ಲಿ ಹಿಂದೂಗಳು ಅಲ್ಲದವರಿಗೆ ಗುತ್ತಿಗೆ ಕೊಡಲು ಅವಕಾಶವಿಲ್ಲ. ಹೀಗಾಗಿ ಅಂತಹ ಫಲಕ ಹಾಕಿರಬಹುದು ಎಂದು ಕೆಲವರು ಹೇಳುತ್ತಾರೆ.
ಆದರೆ ಧಾರ್ಮಿಕ ಸ್ಥಳದ ಆವರಣದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಫಲಕ ಹಾಕಿ ಸಮಸ್ಯೆಯಾಗಿದ್ದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಧಾರ್ಮಿಕ ಸೌಹಾರ್ದತೆ, ಶಾಂತಿಗೆ ಭಂಗ ತರುವ ಕೆಲಸಗಳಿಗೆ ಸರ್ಕಾರ ಸಹಕಾರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆಗ ಈ ವಿಚಾರಕ್ಕೆ ತೆರೆಬಿದ್ದಿತು.
ವರದಿ ಆಂಟೋನಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB