ತುಮಕೂರು: ನಗರದಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಗೂಳೂರು ಬಳಿ 106 ಎಕರೆ 23 ಗುಂಟೆ ವಿಸ್ತೀರ್ಣದ ಅಮೂಲ್ಯ ಸಾರ್ವಜನಿಕ ಆಸ್ತಿಯನ್ನು ಸರ್ಕಾರದ ಸ್ವಾಧೀನದಲ್ಲಿ ಉಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಮಹತ್ವದ ಆದೇಶದ ಮೂಲಕ ಕ್ರಮ ವಹಿಸಿದ್ದಾರೆ.
ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಕೊಂಡಾಪುರ ಗ್ರಾಮದ ಸರ್ವೆ ನಂ.3 ಹಾಗೂ ಕಲ್ಲುಮಠ ಗ್ರಾಮದ ಸರ್ವೆ ನಂ.13, 17 ಮತ್ತು 20ರ ಜಮೀನುಗಳಿಗೆ ಸಂಬಂಧಿಸಿದಂತೆ 1974ರಲ್ಲಿ ಭೂಸುಧಾರಣಾ ಕಾಯ್ದೆ, 1961ರ ಕಲಂ 48ಎ(1)ರ ಅಡಿಯಲ್ಲಿ ಗೇಣಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಇಂಡೆಕ್ಸ್ ಆಫ್ ಲ್ಯಾಂಡ್ ದಾಖಲೆಗಳ ಪ್ರಕಾರ ಈ ಜಮೀನುಗಳು ದೇವದಾಯ ಇನಾಂ ಜಮೀನುಗಳಾಗಿರುವುದರಿಂದ ಭೂಸುಧಾರಣಾ ಕಾಯ್ದೆ ಅನ್ವಯಿಸುವುದಿಲ್ಲ ಎಂದು ಹಿಂಬರಹ ನೀಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಹಂತಗಳಲ್ಲಿ ಮೇಲ್ಮನವಿ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳು ನಡೆದಿದ್ದು, ಅಂತಿಮವಾಗಿ ಕರ್ನಾಟಕ ಉಚ್ಛ ನ್ಯಾಯಾಲಯವು ದಿನಾಂಕ 02-06-1999ರಂದು ನೀಡಿದ ಆದೇಶದಲ್ಲಿ, ಸದರಿ ಜಮೀನುಗಳು ಮೈಸೂರು (ಧಾರ್ಮಿಕ ಮತ್ತು ದತ್ತಿ) ಇನಾಮುಗಳ ನಿರ್ಮೂಲನಾ ಕಾಯ್ದೆ, 1955ರ ವ್ಯಾಪ್ತಿಗೆ ಒಳಪಡುವ ಇನಾಂ ಜಮೀನುಗಳಾಗಿದ್ದು, ಅವುಗಳ ಕುರಿತ ಹಕ್ಕುದಾರಿಕೆ ಅರ್ಜಿಗಳನ್ನು ಪರಿಶೀಲಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಮಾತ್ರ ಇದೆ ಎಂದು ಸ್ಪಷ್ಟಪಡಿಸಿ, ಪ್ರಕರಣವನ್ನು ಮರುಪರಿಶೀಲನೆಗಾಗಿ ಜಿಲ್ಲಾಧಿಕಾರಿಗಳಿಗೆ ವರ್ಗಾಯಿಸಿತ್ತು.
ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಜಿಲ್ಲಾಧಿಕಾರಿಗಳು ಪ್ರಕರಣ ಸಂಖ್ಯೆ ಇಎನ್ ಎ(ಅ) 26/1999–2000ರಲ್ಲಿ ಸಮಗ್ರ ವಿಚಾರಣೆ ನಡೆಸಿದರು. ಪ್ರಕರಣದಲ್ಲಿದ್ದ ಹಲವಾರು ಮೂಲ ಅರ್ಜಿದಾರರು ಮೃತಪಟ್ಟಿದ್ದು, ಅವರ ವಾರಸುದಾರರು ತಮ್ಮ ಪೂರ್ವಜರು ಸದರಿ ಜಮೀನುಗಳಲ್ಲಿ ಯಾವುದೇ ಕಾಲದಲ್ಲೂ ಉಳುಮೆ ನಡೆಸಿಲ್ಲ, ಸ್ವಾಧೀನದಲ್ಲಿಯೂ ಇರಲಿಲ್ಲ ಹಾಗೂ ತಪ್ಪು ತಿಳುವಳಿಕೆಯಿಂದ ಗೇಣಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಲಿಖಿತವಾಗಿ ಒಪ್ಪಿಕೊಂಡು, ಅರ್ಜಿಗಳನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸಿದ್ದರು.
ತುಮಕೂರು ತಾಲ್ಲೂಕಿನ ಗೂಳೂರು ಹೋಬಳಿಯ ಕೊಂಡಾಪುರ ಹಾಗೂ ಕಲ್ಲುಮಠ ಗ್ರಾಮದಲ್ಲಿ ವಶಪಡಿಸಿಕೊಳ್ಳಲಾಗಿರುವ ಈ ಅಮೂಲ್ಯ ಸರ್ಕಾರಿ ಭೂಮಿಯನ್ನು ಸಾರ್ವಜನಿಕ ಹಿತಾಸಕ್ತಿಗೆ ಪೂರಕವಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಿ, ಮುಂದಿನ ಹಲವು ಪೀಳಿಗೆಗೆ ಶಾಶ್ವತ ಪ್ರಯೋಜನವನ್ನು ಒದಗಿಸಲು ಅನುಕೂಲವಾಗಿದೆ. ಈ ಭೂಮಿಯಲ್ಲಿ ಜಿಲ್ಲೆಯ ಅಭಿವೃದ್ಧಿ ಮತ್ತು ಜನಕಲ್ಯಾಣವನ್ನು ಪ್ರತಿಬಿಂಬಿಸುವ ಯೋಜನೆಗಳು ಸಾಕಾರಗೊಂಡಾಗ ಮಾತ್ರ ಸರ್ಕಾರದ ವಶಕ್ಕೆ ಭೂಮಿಯನ್ನು ಮರಳಿ ಪಡೆಯುವ ಈ ಕಾರ್ಯಾಚರಣೆಯ ನಿಜವಾದ ಉದ್ದೇಶ ಸಾರ್ಥಕವಾಗುತ್ತದೆ.
— ಶುಭ ಕಲ್ಯಾಣ್, ಜಿಲ್ಲಾಧಿಕಾರಿ
ಸಾರ್ವಜನಿಕ ಉದ್ದೇಶದ ಬಳಕೆಗೆ ಸಿಕ್ಕಿತು 106 ಎಕರೆ
ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಿನಂತಿರುವ ತುಮಕೂರು ಅತಿ ವೇಗವಾಗಿ ಬೆಳೆಯುತ್ತಿದ್ದು, ಹಣ ನೀಡಿದರೂ ಭೂಮಿ ಸಿಗದಿರುವ ಪರಿಸ್ಥಿತಿ ತುಮಕೂರು ಸುತ್ತಮುತ್ತ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಸುಮಾರು 500 ಕೋಟಿ ರೂ. ಮೌಲ್ಯದ 106 ಎಕರೆ ಸಾರ್ವಜನಿಕ ಆಸ್ತಿಯು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಪಾಲಾಗುವುದನ್ನು ತಪ್ಪಿಸಿ ಮುಂಬರುವ ಪೀಳಿಗೆಗೆ ಸಾರ್ವಜನಿಕ ಉದ್ದೇಶಗಳಿಗೆ ಬಳಕೆಯಾಗಲು ಅನುವಾಗುವಂತೆ ಕ್ರಮಕೈಗೊಳ್ಳುವ ಮೂಲಕ ತಮ್ಮ ವಿರುದ್ಧ ಇತ್ತೀಚೆಗೆ ಕೇಳಿಬರುತ್ತಿದ್ದ ನಕಾರಾತ್ಮಕ ಟೀಕೆಗಳಿಗೆ ಸಕಾರಾತ್ಮಕ ಕಾರ್ಯ ರೂಪದ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಮುಖಾಂಶಗಳು:
- ತುಮಕೂರು ತಾಲ್ಲೂಕು ಕೊಂಡಾಪುರ ಸ.ನಂ.3, ಕಲ್ಲುಮಠ ಸರ್ವೆ ನಂ.13,17,20ರ ಜಮೀನಿಗೆ ಸಂಬಂಧಿಸಿದಂತೆ 1974ರಲ್ಲಿ ಸಲ್ಲಿಕೆಯಾಗಿದ್ದ ಗೇಣಿ ಅರ್ಜಿಗಳು.
- ಇಂಡೆಕ್ಸ್ ಆಫ್ ಲ್ಯಾಂಡ್ ದಾಖಲೆ ಪ್ರಕಾರ ಈ ಸರ್ವೆನಂಬರ್ ಜಮೀನುಗಳು ದೇವದಾಯ ಇನಾಂ ಜಮೀನಾಗಿದ್ದು, ಗೇಣಿ ವಾರಸುದಾರಿಕೆ ನೀಡಲು ನಿರಾಕರಿಸಿ ಅರ್ಜಿದಾರರಿಗೆ ಹಿಂಬರಹ.
- ಹಿಂಬರಹ ಪ್ರಶ್ನಿಸಿ ವಿವಿಧ ಹಂತದಲ್ಲಿ ಅರ್ಜಿದಾರರಿಂದ ಮೇಲ್ಮನವಿ, ನ್ಯಾಯಾಂಗ ಹೋರಾಟ.
- 2-6-1999ರಲ್ಲಿ ಹೈಕೋರ್ಟ್ನಿಂದ ಡಿಸಿಗೆ ಪ್ರಕರಣ ವರ್ಗ. 1999-2000 ಇಸವಿಯಲ್ಲಿ ಸಮಗ್ರ ವಿಚಾರಣೆ ನಡೆದು ಅರ್ಜಿದಾರರಿಂದ ಗೇಣಿ ಅರ್ಜಿ ಹಿಂಪಡೆಯಲು ಸಹಮತ.
- ಅರ್ಜಿದಾರರೇ ಒಪ್ಪಿದರೂ 26 ವರ್ಷದಿಂದ ಇತ್ಯರ್ಥ ಬಾಕಿ. ವಿಚಾರಣೆಗೆ ಕೈಗೆತ್ತಿಕೊಂಡ ಡಿಸಿ ಶುಭಕಲ್ಯಾಣ್ ರಿಂದ 24–4–2026ರಂದು ಮಹತ್ವದ ಆದೇಶ ಪ್ರಕಟ. ಸದರಿ ಸ್ವತ್ತು ಗೂಳೂರು ಛತ್ರ/ ಮುಜಾಫರಖಾನ ನಿರ್ವಹಣೆಗೆ ಮೀಸಲು ಎಂದು ಘೋಷಣೆ.
- ಡಿಸಿ ಆದೇಶದನುಸಾರ ತಹಶೀಲ್ದಾರ್ ರಿಂದ ಪಹಣಿ ತಿದ್ದುಪಡಿ ಸೇರಿ ಅಗತ್ಯಕ್ರಮದ ಮೂಲಕ ಮರಳಿ ಸರ್ಕಾರದ ಸ್ವಾಧೀನಕ್ಕೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


