ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿಯ ಸೀಗೆಹಳ್ಳಿ ಗ್ರಾಮದ ಸ. ನಂ.15/6 ರ 1ಎಕರೆ ವಿಸ್ತೀರ್ಣದ ರೈತ ವೆಂಕಟೇಶ್ ಎಂಬುವರ ಒಡೆತನಕ್ಕೆ ಸೇರಿದ ಜಮೀನಿಲ್ಲಿ ತುರುವೇಕೆರೆ ಅರಣ್ಯ ಇಲಾಖೆಯ ಸಿಬ್ಬಂದಿ ಅತಿಕ್ರಮ ಪ್ರವೇಶಿಸಿ ಫಸಲಿಗೆ ಬಂದ ಮರಗಳನ್ನು ಕಡಿದು ಹಾಕಿದ್ದು, ತಂತಿ ಕಂಬಗಳನ್ನು ನಾಶಮಾಡುವ ಮೂಲಕ ಅನ್ಯಾಯವೆಸಗಿದ್ದಾರೆ ಎಂದು ಮಗ್ಗದ ಪಾಳ್ಯ ಗ್ರಾಮದ ನೊಂದ ರೈತ ವೆಂಕಟೇಶ್ ಗಂಭೀರವಾಗಿ ಆರೋಪಿಸಿದ್ದಾರೆ.
ನಮ್ಮತುಮಕೂರು ಜೊತೆ ಅಳಲು ತೋಡಿಕೊಂಡ ರೈತ ವೆಂಕಟೇಶ್, ತುರುವೇಕೆರೆ ತಾಲೂಕಿನ ಗಡಿಭಾಗವಾದ ಸೀಗೆಹಳ್ಳಿ ಗ್ರಾಮದ ಸಮೀಪದಲ್ಲಿರುವ ಅರಣ್ಯ ಇಲಾಖೆಗೆ ಸಂಬಂಧಿಸಿದ, ಸ್ವತ್ತಿನ ಪಕ್ಕದಲ್ಲಿಯೇ ನಮ್ಮ ಒಡೆತನದ ಜಮೀನಿದ್ದು, ಅರಣ್ಯ ಇಲಾಖೆಗೆ ಸಂಬಂಧಿಸಿದ ಜಮೀನಿಗೆ ಈಗಾಗಲೇ ಗಡಿ ಕಲ್ಲನ್ನು ನೆಟ್ಟಿದ್ದಾರೆ. ಹೀಗಿರುವಾಗ ಮೇ 3 ರಂದು ಮಧ್ಯಾಹ್ನ 3ರ ಸಮಯದಲ್ಲಿ ತುರುವೇಕೆರೆಯ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಇನ್ನಿತರರು ಟ್ರಂಚ್ ಹೊಡೆಯುವ ನೆಪದಲ್ಲಿ, ಉದ್ದೇಶಪೂರ್ವಕವಾಗಿ ನಮ್ಮ ಜಮೀನಿನ ಒಡೆತನದಲ್ಲಿದ್ದಂತಹ ಫಸಲಿಗೆ ಬಂದಂತಹ ಸುಮಾರು 15 ತೆಂಗಿನಗಿಡ, 50 ಬಾಳೆಗಿಡ, 40 ಅಡಿಕೆ ಸಸಿಗಳನ್ನು ಕಿತ್ತು ಹಾಕಿ, ಹನಿ ನೀರಾವರಿಗೆ ಜೋಡಿಸಿದ್ದ ಮೈನ್ ಪೈಪ್ ಗಳನ್ನು ಹಾಳು ಮಾಡಿ, ತಂತಿ ಕಂಬ ಹಾಕಲು ಇಟ್ಟಿದ್ದ ತಂತಿ ಕಂಬಗಳನ್ನು ಮುರಿದು ಹಾಕಿ, ಲಕ್ಷಾಂತರ ರೂ.ಗಳ ಬೆಳೆಯನ್ನು ಧ್ವಂಸಮಾಡಿ, ಕೃಷಿ ಉಪಕರಣಗಳನ್ನು ನಾಶಪಡಿಸಿ, ದೌರ್ಜನ್ಯವೆಸಗಿದ್ದಾರೆ.
ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಉಡಾಫೆಯ ಉತ್ತರವನ್ನು ನೀಡುತ್ತಿದ್ದಾರೆ. ಸ್ಥಳಕ್ಕೆ ಬರುವುದಾಗಿ ಹೇಳಿ ವಾರಗಳೇ ಆದರೂ ಯಾರು ಸಹ ಭೇಟಿ ನೀಡಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.
ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ ಮರಗಳನ್ನು ಕತ್ತರಿಸಿ ಹಾಕಿದ್ದಾರೆ. ನಮಗೆ ಅನ್ಯಾಯವಾಗಿದೆ. ನ್ಯಾಯ ಸಿಗದಿದ್ದರೆ ನ್ಯಾಯಕ್ಕಾಗಿ ತಾಲೂಕಿನ ರೈತ ಸಂಘಟನೆಗಳು ಮತ್ತು ವಿವಿಧ ಪರ ಸಂಘಟನೆಗಳ ಮೊರೆಹೋಗಿ ಶೀಘ್ರದಲ್ಲೆ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಧರಣಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ವರದಿ: ಸಚಿನ್ ಮಾಯಸಂದ್ರ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy