ಮಧುಗಿರಿ: ಪಟ್ಟಣದ 19 ವಾರ್ಡ್ ನಲ್ಲಿ ನಾಲ್ಕು ದಿನಗಳ ಮುಂಚೆ ಶಾಸಕ ಎಂ.ವಿ.ವೀರಭದ್ರಯ್ಯರವರು ಸುಮಾರು ಎಂಟು ಲಕ್ಷ ವೆಚ್ಚದ ಶುದ್ಧ ನೀರಿನ ಘಟಕವನ್ನು ಉದ್ಘಾಟಿಸಿದರು. ಆದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷದಿಂದ ಶುದ್ಧ ನೀರಿನ ಘಟಕವನ್ನು ಸರಿಯಾಗಿ ನೋಡಿಕೊಳ್ಳುವವರು ಯಾರು ಇಲ್ಲದ ಕಾರಣ ಸುತ್ತಮುತ್ತ ನಿಂತಿರುವ ಕೊಚ್ಚೆ ನೀರು ತೊಟ್ಟಿಗೆ ಬಂದು ಅದೇ ನೀರು ಶುದ್ದಿಯಾಗಿ ಬರುತ್ತಿದೆ.
ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಸಾರ್ವಜನಿಕರು ಯಾರು ಆ ನೀರನ್ನು ಕುಡಿಯುತ್ತಿಲ್ಲ. ಇದನ್ನು ಮನಗಂಡ ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಸ್ಥಳಕ್ಕೆ ಹೋಗಿ ಸ್ವತಃ ನೀರನ್ನು ಕುಡಿದು ಪರೀಕ್ಷಿಸಿದಾಗ ನೀರು ಅಶುದ್ದಿಯಾಗಿ ಬರುವುದು ಕಂಡುಬಂದಿದೆ.
ಈ ಬಗ್ಗೆ ಆಕ್ರೋಶಗೊಂಡ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ ಮಾಧ್ಯಮದೊಂದಿಗೆ ಮಾತನಾಡಿ, ಸುಮಾರು ಎಂಟು ಲಕ್ಷ ವೆಚ್ಚದ ಶುದ್ಧ ನೀರಿನ ಘಟಕ ಆರಂಭವಾಗಿದ್ದು, ಪುರಸಭೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅಶುದ್ಧ ನೀರು ಬರುತ್ತಿದೆ. ಸರಿಯಾದ ಕಾಮಗಾರಿ ಮಾಡದೆ, ನೆಲದಲ್ಲಿ ನೀರಿನ ಸಂಪು ನಿರ್ಮಿಸಲಾಗಿದ್ದು, ಅದರಲ್ಲಿ ಕಸಕಡ್ಡಿ ಕೊಳಚೆ ನೀರು ಎಲ್ಲ ಬರುವ ಕಾರಣ, ಅಶುದ್ಧ ನೀರು ಬರುತ್ತಿದೆ. ಅಶುದ್ಧ ನೀರು ಬರುವುದಕ್ಕೆ ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಇಂಜಿನಿಯರ್ ಗಳು ಕಾರಣವಾಗಿದ್ದು, ಇವರ ಮೇಲೆ ಶಾಸಕರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕ.ಜಾ.ವೇ ಉಪಾಧ್ಯಕ್ಷ ಪ್ರಸಾದ್, ಆಟೋ ಚಾಲಕರ ಘಟಕ ಅಧ್ಯಕ್ಷ ಹರೀಶ್, ನಗರ ಕಾರ್ಯದರ್ಶಿ ಪ್ರದೀಪ್ ಹಾಗೂ ರಾಜಣ್ಣ, ವಿಜಯಕುಮಾರ್ ಮತ್ತಿತರು ಹಾಜರಿದ್ದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz