ಮಧುಗಿರಿ : ತಾಲ್ಲೂಕಿನ ಕೊಡಿಗೇನಹಳ್ಳಿ ಗ್ರಾಮದಲ್ಲಿ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ Indian Pangolin (ಚಿಪ್ಪು ಹಂದಿ) ಪ್ರತ್ಯಕ್ಷವಾಗಿದ್ದು, ಸ್ಥಳೀಯರಲ್ಲಿ ಕುತೂಹಲದ ಜೊತೆಗೆ ಆತಂಕವೂ ಮೂಡಿಸಿದೆ.
ದೇಹದ ತುಂಬಾ ಗಟ್ಟಿಯಾದ ಕೆರಾಟಿನ್ ಚಿಪ್ಪುಗಳಿಂದ ಆವೃತವಾಗಿರುವ ಈ ವಿಶಿಷ್ಟ ಪ್ರಾಣಿ ಗ್ರಾಮಸ್ಥರ ಗಮನ ಸೆಳೆದಿದ್ದು, ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಜನಜಂಗುಳಿ ಜಮಾಯಿಸಿತು. ಜನರ ಗದ್ದಲ ಮತ್ತು ಸದ್ದನ್ನು ಕೇಳಿದ ಪ್ಯಾಂಗೊಲಿನ್ ತನ್ನ ಸಹಜ ರಕ್ಷಣಾ ಕ್ರಮವಾಗಿ ಚೆಂಡಿನಂತೆ ಸುರುಳಿಯಾಗಿ ಸುತ್ತಿಕೊಂಡು ನಿಶ್ಚಲವಾಗಿ ಮಲಗಿರುವ ದೃಶ್ಯ ಕಂಡು ಬಂದಿತು.
ಸಾಮಾನ್ಯವಾಗಿ ಕರ್ನಾಟಕದ ಗಡಿ ಭಾಗಗಳಾದ ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಗೋವಾ ಗಡಿಭಾಗಗಳಲ್ಲಿ, ಜೊತೆಗೆ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಚಾಮರಾಜನಗರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಈ ಪ್ರಭೇದದ ಪ್ಯಾಂಗೊಲಿನ್ ಗಳು ಕಂಡು ಬರುತ್ತವೆ. ಆದರೆ ಕೊಡಿಗೇನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂತಹ ಪ್ರಾಣಿ ಈ ಹಿಂದೆ ಕಾಣಿಸಿಕೊಂಡಿರದ ಕಾರಣ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು.
ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಪ್ಯಾಂಗೊಲಿನ್ ಮನುಷ್ಯರಿಗೆ ಹಾನಿ ಉಂಟುಮಾಡದ, ಅತ್ಯಂತ ನಾಚಿಕೆ ಸ್ವಭಾವದ ಪ್ರಾಣಿಯಾಗಿದೆ. ಆದರೆ ಅದರ ಬಗ್ಗೆ ಅರಿವು ಇಲ್ಲದ ಕಾರಣ ಕೆಲವೆಡೆ ಅಪಾಯಕಾರಿ ಪ್ರಾಣಿ ಎಂದು ಭಾವಿಸಿ ಹೊಡೆದು ಕೊಲ್ಲುವುದು ಅಥವಾ ಸುಟ್ಟು ಹಾಕುವಂತಹ ದುರ್ಘಟನೆಗಳು ನಡೆದಿರುವುದು ವಿಷಾದನೀಯ.
ಚಿಪ್ಪು ಹಾಗೂ ಮಾಂಸಕ್ಕಾಗಿ ಈ ಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡಲಾಗುತ್ತಿದ್ದು, ಇದರ ಪರಿಣಾಮವಾಗಿ ಪ್ಯಾಂಗೊಲಿನ್ಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದೇ ಕಾರಣಕ್ಕೆ ಈ ಪ್ರಾಣಿಗೆ Wildlife Protection Act, 1972 ಅಡಿಯಲ್ಲಿ ಶೆಡ್ಯೂಲ್–1 ಪಟ್ಟಿಯಲ್ಲಿ ಸ್ಥಾನ ನೀಡಲಾಗಿದ್ದು, ಸಂಪೂರ್ಣ ಕಾನೂನು ರಕ್ಷಣೆ ಒದಗಿಸಲಾಗಿದೆ.
ವನ್ಯಜೀವಿ ತಜ್ಞರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಪ್ಯಾಂಗೊಲಿನ್ ಕಂಡು ಬಂದಲ್ಲಿ ಅದನ್ನು ಹಿಡಿಯಲು ಅಥವಾ ಕಿರುಕುಳ ನೀಡಲು ಯತ್ನಿಸದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಪರೂಪದ ಈ ಜೀವಿಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




