ಕೊರಟಗೆರೆ: ತಾಲ್ಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ಧರಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮಟೇನಹಳ್ಳಿ ಗ್ರಾಮವು ಕಂದಾಯ ಗ್ರಾಮಕ್ಕೆ ಒಳಪಟ್ಟಿದ್ದು, ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ಸುಮಾರು 25ಕ್ಕೂ ಹೆಚ್ಚು ಮನೆಗಳಿದ್ದು 150ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಗ್ರಾಮಕ್ಕೆ ರಸ್ತೆಯೇ ಇಲ್ಲ ಈ ಗ್ರಾಮದ ಮಧ್ಯೆ ಹರಿಯುವ ಹಳ್ಳ ರಸ್ತೆಯಾಗಿ ಮಾರ್ಪಟ್ಟಿದೆ. ಈ ಬಗ್ಗೆ ನಮ್ಮ ತುಮಕೂರು ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿ ಕೆಲವೇ ಗಂಟೆಗಳಲ್ಲಿ ತಹಶೀಲ್ದಾರ್ ನಹೀದಾ ಜಂ ಜಂ ಸಂದಿಸಿದ್ದಾರೆ.
ಕುಮಟೇನಹಳ್ಳಿಯಲ್ಲಿ ಸುಮಾರು 25ಕ್ಕೂ ಹೆಚ್ಚು ಮನೆಗಳಿದ್ದು ಸರಿ ಸುಮಾರು 120ಕ್ಕೂ ಹೆಚ್ಚು ಮತದಾರರಿದ್ದಾರೆ. ಸದರಿ ಗ್ರಾಮಕ್ಕೆ ನಕಾಶೆ ರಸ್ತೆ ಇದ್ದು ಇಲ್ಲದಂತೆ ಮಾಯವಾಗಿದೆ. ಸುಮಾರು ಏಳು ವರ್ಷಗಳಿಂದ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ. ಅದರಲ್ಲೂ ರಸ್ತೆ ಸಮಸ್ಯೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ರಸ್ತೆ ಇಲ್ಲದೆ ಜನರು ಹಳ್ಳವನ್ನೇ ರಸ್ತೆಯನ್ನಾಗಿ ಮಾಡಿಕೊಂಡು ಸಂಚರಿಸುವಂತಾಗಿದೆ.
ಬೆಂಡೋಣೆ ಗ್ರಾಮದಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ಕುಮಟೇನಹಳ್ಳಿ ಗ್ರಾಮದ ಮುಗ್ಧ ಜನರು ಹೊರ ಪ್ರಪಂಚಕ್ಕೆ ಕಾಲಿಡಲು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳ ಇಚ್ಛಾ ಶಕ್ತಿಯ ಕೊರತೆ ಇಲ್ಲಿ ಎದ್ದು ಕಾಣುತ್ತಿದೆ.
ನಕಾಶೆ ರಸ್ತೆ ತೆರವು ಮಾಡಿ ಸುಸಜ್ಜಿತವಾದ ರಸ್ತೆಯನ್ನು ನಿರ್ಮಿಸಲು ಮನವಿ ಸಲ್ಲಿಸಿ ಊರಿನ ಗ್ರಾಮಸ್ಥರು ಹೋರಾಟ ಮಾಡುತ್ತ ಬಂದಿದ್ದಾರೆ. ಈ ಬಗ್ಗೆ ನಮ್ಮ ತುಮಕೂರು ವಾಹಿನಿಯು ಇಲ್ಲಿನ ಜನರ ಕಷ್ಟಗಳ ಸವಿವರವಾದ ವರದಿ ಮಾಡಿದ ತಕ್ಷಣವೇ ತಹಶೀಲ್ದಾರ್ ಎಚ್ಚೆತ್ತು ಕೊಂಡು ನಕಾಶೆ ರಸ್ತೆ ತೆರವು ಕಾರ್ಯಾಚರಣೆ ಕ್ರಮ ಜರುಗಿಸಿದ್ದಾರೆ. ಆದರೆ, ಇನ್ನೂ ಕೂಡ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ನಿದ್ರೆಯಿಂದ ಎದ್ದಿಲ್ಲ. ಈ ಕುಗ್ರಾಮಕ್ಕೆ ಭೇಟಿ ನೀಡಿ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸಕ್ಕೆ ಮುಂದಾಗಬೇಕಿದೆ. ಈಗಾಗಲೇ ಈ ಭಾಗದ ಜನರು ಜನಪ್ರತಿನಿಧಿಗಳ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದು, ಮುಂದಿನ ಚುನಾವಣೆಗೆ ಮತ ಕೇಳಲು ಬನ್ನಿ ಆಗ ನಾವು ಮಾತನಾಡುತ್ತೇವೆ ಎಂಬ ಆಕ್ರೋಶದ ಮಾತುಗಳನ್ನಾಡಿದ್ದಾರೆ.
ಇನ್ನೂ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ತಹಶೀಲ್ದಾರ್ ನಹೀದಾ ಜಂ ಜಂ ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜನಪ್ರತಿನಿಧಿಗಳು ಒಬ್ಬ ಸರ್ಕಾರಿ ಅಧಿಕಾರಿಯ ಇಚ್ಛಾ ಶಕ್ತಿಯನ್ನು ನೋಡಿಯಾದದರೂ ಕಲಿಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರ್ ಭೇಟಿಯ ವೇಳೆ ಆರ್ ಐ ಅಮ್ಜದ್, ಗ್ರಾಮ ಸಹಾಯಕರು, ಊರಿನ ಗ್ರಾಮಸ್ಥರು ಸಾರ್ವಜನಿಕರು ಹಾಜರಿದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz