ಮಧುಗಿರಿ: ಕಳೆದ ಐದು ವರ್ಷಗಳಲ್ಲಿ ಕಾಲೇಜಿನಲ್ಲಿ ನಡೆದ ಚಟುವಟಿಕೆಗಳನ್ನಾಧರಿಸಿ ನ್ಯಾಕ್ ಮಾನ್ಯತೆಯನ್ನು ನವೀಕರಿಸಲು ನ್ಯಾಕ್ ಮಾನ್ಯತಾ ತಂಡ ಕಾಲೇಜಿಗೆ ಭೇಟಿ ನೀಡಿ, ಶಿಕ್ಷಣಕ್ಕೆ ಪೂರಕವಾದ ಎಲ್ಲ ಅಂಶಗಳು, ಸೌಲಭ್ಯಗಳನ್ನು ಪರಿಶೀಲಿಸಿದ್ದು, ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 2.94 ಅಂಕಗಳಿಸಿ “ಬಿ ಪ್ಲಸ್ ಪ್ಲಸ್” (++) ಶ್ರೇಣಿಯನ್ನು ನೀಡಿದ್ದು, ಈ ಶ್ರೇಣಿ ಪಡೆದ ಜಿಲ್ಲೆಯ ಮತ್ತು ತುಮಕೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಏಕೈಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಾಗಿದೆ ಎಂದು ಪ್ರಾಂಶುಪಾಲರಾದ ಪ್ರೊ.ಡಿ.ಎಸ್.ಮುನೀಂದ್ರಕುಮಾರ್ ತಿಳಿಸಿದ್ದಾರೆ.
ನ್ಯಾಕ್ ಮಾನ್ಯತೆಯ ಪ್ರಮಾಣ ಪತ್ರ ಮತ್ತು ಗ್ರೇಡ್ ಪ್ರಮಾಣಪತ್ರವನ್ನು ಸ್ವೀಕರಿಸಿದ ಪ್ರಯುಕ್ತ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಧ್ಯಾಪಕರನ್ನುದ್ದೇಶಿಸಿ ಮಾತನಾಡಿ, ನ್ಯಾಕ್ ಪೀರ್ ಟೀಮ್ ಅಕ್ಟೋಬರ್ 28 ಮತ್ತು 29 ರಂದು ಭೇಟಿ ನೀಡಿತ್ತು. ಆನ್ಲೈನ್ ಮೂಲಕ ಸಲ್ಲಿಕೆಯಾದ ದಾಖಲೆಗಳನ್ನು ಪರಿಶೀಲಿಸಿ, ಶಾಸಕರು ಮತ್ತು ಕಾಲೇಜು ಅಭಿವೃದ್ದಿ ಸಮಿತಿ ಸಭೆ ನಡೆಸಿ, ವಿದ್ಯಾರ್ಥಿಗಳು, ಪೋಷಕರು, ಹಳೆ ವಿದ್ಯಾರ್ಥಿಗಳು, ವಿಭಾಗದ ಮುಖ್ಯಸ್ಥರು, ಅಧ್ಯಾಪಕರು, ಕಛೇರಿಯ ಎಲ್ಲ ವಿವರಗಳನ್ನು ಪರಿಶೀಲಿಸಿ ಪ್ರಗತಿಯನ್ನು ದಾಖಲಿಸಿ ಉನ್ನತ ಶ್ರೇಣಿಯನ್ನು ನೀಡಿದ್ದು, ನ್ಯಾಕ್ ಮೌಲ್ಯಮಾಪನವು ಕಠಿಣವಾಗಿದ್ದು, ಇದರಲ್ಲಿ ಉತ್ತಮ ಶ್ರೇಣಿ ಪಡೆಯಲು ಅಧ್ಯಾಪಕರು, ವಿದ್ಯಾರ್ಥಿಗಳು, ಶಾಸಕರು, ಕಾಲೇಜು ಅಭಿವೃದ್ದಿ ಸಮಿತಿಯ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ನ್ಯಾಕ್ ಮಾನ್ಯತೆ ಪರಿಶೀಲನೆ ತಂಡದಲ್ಲಿ ಪ್ರೊ.ಮಣಿಮಾಲ ದಾಸ್, ವಿಶ್ರಾಂತ ಕುಲಪತಿಗಳು, ಪಶ್ಚಿಮ ಬಂಗಾಳ, ಕೊಲ್ಲಾಪುರ ವಿಶ್ವವಿದ್ಯಾನಿಲದಿಂದ ಪ್ರೊ.ಜಗನ್ ಕರಾಡೆ ಮತ್ತು ಚೆನ್ನೈನ ಕ್ವೀನ್ಸ್ ಮೇರಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲರಾದ ಡಾ. ಆರ್. ಅಕ್ತರ್ ಬೇಗಂ ರವರ ತಂಡ ಪರಿಶೀಲನೆ ನಡೆಸಿದ್ದರು ಎಂದರು.
ನ್ಯಾಕ್ ಸಂಚಾಲಕರಾದ ಡಾ.ಅಶೋಕ್ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಕಾಲೇಜು ವಿವಿಧ ರಂಗಗಳಲ್ಲಿ ಅಭಿವೃದ್ದಿಯನ್ನು ಸಾಧಿಸಿದ್ದು, ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಸ್ಪಂದಿಸಿದೆ. ವಿವಿಧ ವಿಷಯಗಳಲ್ಲಿ ಹೆಚ್ಚುವರಿ ಕೋರ್ಸ್ಗಳನ್ನು ನಡೆಸಿದ್ದು, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪರಿಹಾರಾತ್ಮಕ ಬೋಧನಾ ತರಗತಿಗಳನ್ನು ನಡೆಸಲಾಗಿತ್ತು. ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಕಮ್ಮಟಗಳನ್ನು ನಡೆಸಲಾಗಿತ್ತು. ಸ್ನಾತಕೋತ್ತರ ತರಗತಿಗಳನ್ನು ಪ್ರಾರಂಭಿಸಲಾಗಿದೆ. ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಕಾಲೇಜು ಆವರಣದಲ್ಲಿ ಗಿಡಮರಗಳನ್ನು ನೆಟ್ಟು ಪೋಷಿಸಿ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಸೃಷ್ಟಿ ಮಾಡಿದ್ದು, ಈ ಎಲ್ಲ ಅಂಶಗಳನ್ನು ಮಾನದಂಡವನ್ನಾಗಿ ಪರಿಗಣಿಸಿದ ನ್ಯಾಕ್ ಸಮಿತಿ ಉತ್ತಮ ಅಂಕ ನೀಡಿದ್ದು ಸಂತಸ ತಂದಿದೆ ಎಂದರು.
ಐ.ಟಿ.ಸಂಚಾಲಕರಾದ ಡಾ.ಗಿರಿಜ ಡಿ.ಕೆ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಕಾಲೇಜಿನಲ್ಲಿ ಕಲಿಕಾ ವಾತಾವರಣ ಇಮ್ಮಡಿಗೊಂಡಿದ್ದು, ವಿವಿಧ ಸಂಘ ಸಂಸ್ಥೆಗಳು, ಖಾಸಗಿ ಸಂಸ್ಥೆಗಳೊಂದಿಗೆ ಶೈಕ್ಷಣಿಕ ಒಡಂಬಡಿಕೆಗಳನ್ನು ಮಾಡಿಕೊಂಡು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತವರಣವನ್ನು ಸೃಷ್ಟಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಾಧ್ಯವಾಯಿತು. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು, ರಾಂಕ್ ವಿಜೇತರಾಗಿರುತ್ತಾರೆ. ನುರಿತ ಅಧ್ಯಾಪಕ ವರ್ಗ, ಉತ್ತಮ ಗ್ರಂಥಾಲಯ, ಪ್ರಯೋಗಾಲಯಗಳು ವಿದ್ಯಾರ್ಥಿಗಳಿಗೆ ಲಭ್ಯವಿದ್ದು, ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆದು, ಗುಣಮಟ್ಟದ ಫಲಿತಾಂಶ ಪಡೆಯಲು ಸಾಧ್ಯವಾಯಿತು ಎಂದರು.
ಸಾಂಸ್ಕೃತಿಕ ಸಂಚಾಲಕರಾದ ಕೆ.ದಿವಾಕರ್ ಕಾರ್ಯಕ್ರಮ ನಿರೂಪಿಸಿದರು. ಕೆ.ಟಿ.ಸ್ವಾಮಿ ಸ್ವಾಗತಿಸಿ, ಡಾ.ವಿಜಯಲಕ್ಷ್ಮಿ ಎನ್. ವಂದಿಸಿದರು.
ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಮಾನ್ಯತಾ ಪ್ರಮಾಣ ಪತ್ರವನ್ನು ಅಧ್ಯಾಪಕರೊಂದಿಗೆ ಪ್ರಾಂಶುಪಾಲರಾದ ಪ್ರೊ.ಡಿ.ಎಸ್.ಮುನೀಂದ್ರಕುಮಾರ್ ಪ್ರದರ್ಶಿಸಿದರು.
ವರದಿ: ಅಬಿದ್ ಮಧುಗಿರಿ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz