ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ್, ಒಳ ಮೀಸಲಾತಿ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೇವೆ. ಹಿಂದಿನ ಸರ್ಕಾರದಲ್ಲಿ ಚಿತ್ರದುರ್ಗ ಸಮಾವೇಶ ಮಾಡಿ ನಿರ್ಣಯ ಮಾಡಲಾಗಿತ್ತು. ನ್ಯಾ ಸದಾಶಿವ ಆಯೋಗದ ವರದಿ ಬಗ್ಗೆ ನಿರ್ಣಯಕ್ಕೆ ತೀರ್ಮಾನ ಮಾಡಲಾಗಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ, ವರದಿ ತಿರಸ್ಕಾರ ಮಾಡಿದ್ದರು. ಕಾನೂನಾತ್ಮಕವಾಗಿ ಒಳ ಮೀಸಲಾತಿ ಕೊಡಬೇಕಾಗುತ್ತದೆ. ನಾವೇ ಸಂವಿಧಾನ ತಿದ್ದುಪಡಿ ತರಲು ಆಗಲ್ಲ. ಹೀಗಾಗಿ ಶಿಫಾರಸ್ಸು ಮಾಡುವ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
‘ಬಾಬ್ರಿ ಮಸೀದಿಯಂತೆ ಇತರೆ ಮಸೀದಿ ನಿರ್ನಾಮ ಮಾಡುತ್ತೇವೆ’ ಎಂಬ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಕಿಡಿಕಾರಿದ ಡಾ.ಜಿ.ಪರಮೇಶ್ವರ್, ಅನಂತ್ ಕುಮಾರ್ ಹೆಗಡೆ ಸಂಯಮದಿಂದ ವರ್ತಿಸಲಿ. ಪೊಲೀಸರು ಹೆಗಡೆಗೆ ಸಮಯ ನೀಡಿದ್ದಾರೆ. ಅದನ್ನ ಅರ್ಥ ಮಾಡಿಕೊಳ್ಳಬೇಕು. ಅನಂತ್ ಕುಮಾರ್ ಹೆಗಡೆ ಮಾತು ಮುಂದುವರೆಸಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.


