ಕೊರಟಗೆರೆ: 250 ವರ್ಷಗಳ ಇತಿಹಾಸ ಇರುವ ಕೊರಟಗೆರೆಯ ಧರ್ಮಸಾಗರ ಕೆರೆಗೆ 426 ಎಕರೆ ಭೂ ವಿಸ್ತೀರ್ಣವಿದೆ. ಕೆರೆಯ ಪುನಶ್ಚೇತನ ಮತ್ತು ಅಭಿವೃದ್ದಿ ಮಾಡಬೇಕಾದ ಸಣ್ಣ ನೀರಾವರಿ ಇಲಾಖೆಯೇ ಕೊರಟಗೆರೆಯಲ್ಲಿ ಇಲ್ಲ, ಸ್ಥಳೀಯ ಕ್ಯಾಮೇನಹಳ್ಳಿ ಗ್ರಾಪಂಗೆ ಕೆರೆಯ ರಕ್ಷಣೆ ಮತ್ತು ಅಭಿವೃದ್ದಿಯ ಕಾಳಜಿಯು ಇಲ್ಲದೇ ಭೂಗಳ್ಳರ ಹಾವಳಿಗೆ ಕೆರೆಯು ಬಲಿಯಾಗಿ ಅಂತರ್ಜಲ ಮಟ್ಟವು ಮತ್ತೇ ಪಾತಾಳಕ್ಕೆ ಕುಸಿದಿದೆ.
ಜಯಮಂಗಲಿ ನದಿಪಾತ್ರದ ತೀತಾ ಜಲಾಶಯವು ಕಳೆದ ವರ್ಷ ಕೋಡಿಬಿದ್ದು ಧರ್ಮಸಾಗರ ಕೆರೆಯು ತುಂಬಿದ ವರ್ಷವೇ ಖಾಲಿಯಾಗಿದೆ. ಕೆರೆಯ ಹಿಂಭಾಗದ 95 ಗ್ರಾಮದ ಅಂತರ್ಜಲ ಮಟ್ಟ ಸುಧಾರಣೆಗೆ ಮತ್ತೆ ಪೆಟ್ಟುಬಿದ್ದಿದೆ. ತೀತಾ ಜಲಾಶಯದ ಬಲದಂಡೆ ನಾಲೆಯಿಂದ ವೆಂಕಟಾಪುರ, ಕಂಬದಹಳ್ಳಿ, ಕೋಡ್ಲಹಳ್ಳಿ ಮಾರ್ಗದ ಕಾಲುವೆಗೆ ಕಲ್ಲು-ಮಣ್ಣು ಹಾಕಿ ಮುಚ್ಚಿರುವ ಹಿನ್ನಲೆ ನೂರಾರು ರೈತರಿಗೆ ಸಂಕಷ್ಟ. ಮೀನುಗಾರಿಕೆ ಇಲಾಖೆಯು ಲಾಭಕ್ಕೆ ಮಾತ್ರ ಸೀಮಿತವಾಗಿದ್ದು ಕೆರೆಯ ಪುನಶ್ಚೇತನ ಮತ್ತು ಅಭಿವೃದ್ದಿಗೆ ಸರಕಾರ ಪ್ರಮುಖ ಆದ್ಯತೆ ನೀಡಬೇಕಿದೆ.
138 ಎಕರೆಯ ದಾಖಲೆಯೇ ಇಲ್ಲ:
ಧರ್ಮಸಾಗರ ಕೆರೆಯು ಮಾಳೇನಹಳ್ಳಿ ಸರ್ವೆ.15ರಲ್ಲಿ 31 ಎಕರೆ, ಟಿ.ವೆಂಕಟಾಪುರ ಸರ್ವೆ ನಂ.25 ರಲ್ಲಿ 108 ಎಕರೆ, ಕೆ.ಜಿ. ಕಂಬದಹಳ್ಳಿ ಸರ್ವೆ ನಂ.6ರಲ್ಲಿ 29 ಎಕರೆ, ತುಂಬುಗಾನಹಳ್ಳಿ ಸರ್ವೆ ನಂ.13ರಲ್ಲಿ 89 ಎಕರೆ, ಚಿಕ್ಕಾವಳ್ಳಿ ಸರ್ವೆ ನಂ.84ರಲ್ಲಿ 28 ಎಕರೆ ಸೇರಿ 6 ಗ್ರಾಮದ 288 ಎಕರೆಯ ದಾಖಲೆ ಕಂದಾಯ ಬಳಿಯಿದೆ. ಧರ್ಮಸಾಗರ ಕೆರೆಯ ಇನ್ನೂಳಿದ 138 ಎಕರೆ ಭೂ ವಿಸ್ತೀರ್ಣದ ದಾಖಲೆಯು ಕಂದಾಯ, ಗ್ರಾ.ಪಂ., ಹೇಮಾವತಿ ಮತ್ತು ಸಣ್ಣ ನೀರಾವರಿ ಇಲಾಖೆಯ ಬಳಿಯು ಲಭ್ಯವಿಲ್ಲ.
ಅನುದಾನ ಬರುತ್ತೆ ಅಭಿವೃದ್ದಿ ಆಗಿಲ್ಲ:
ಜಯಮಂಗಲಿ ನದಿ ಪಾತ್ರದ ಧರ್ಮಸಾಗರ ಕೆರೆಯು ತುಂಬಿ ಹರಿದರೇ 95 ಗ್ರಾಮದ ರೈತರಿಗೆ ಅಂತರ್ಜಲದ ವರದಾನವಾಗಲಿದೆ. ಸಣ್ಣ ನೀರಾವರಿ ಮತ್ತು ಕ್ಯಾಮೇನಹಳ್ಳಿ ಗ್ರಾಪಂಯಿಂದ ಕೆರೆಯ ಅಭಿವೃದ್ದಿ ಶೂನ್ಯ. ಸರಕಾರದಿಂದ ಪ್ರತಿವರ್ಷವು ಅನುದಾನ ಬರುತ್ತೇ ಅಷ್ಟೇ, ಆದರೇ ಕಾಮಗಾರಿ ಆಗೋದೇ ಗೊತ್ತಾಗಲ್ಲ. ಇನ್ನೂ ನರೇಗಾ ಕಾಮಗಾರಿಯು ಗ್ರಾಪಂ ಸದಸ್ಯರ ಅನುಕೂಲಕ್ಕೆ ತಕ್ಕಂತೆ ಮಾಡ್ತಾರೇ. 250 ಎಕರೇ ವಿಸ್ತೀರ್ಣದಲ್ಲಿ ಸೀಮೆಜಾಲಿಯ ಮರಗಳು ಬಿಟ್ಟರೇ ಅಭಿವೃದ್ದಿಯು ಶೂನ್ಯವಾಗಿದೆ.
ಭೂಗಳ್ಳರ ಹಾವಳಿಗೆ ಗಿಡಗಳ ನಾಶ:
ಪರಿಸರ ಮತ್ತು ಅಂತರ್ಜಲ ರಕ್ಷಣೆಗಾಗಿ ಸಾಮಾಜಿಕ ವಲಯ ಅರಣ್ಯದಿಂದ ಕಳೆದ 10 ವರ್ಷಗಳಿಂದ ಸಂರಕ್ಷಣೆ ಮಾಡಿದ್ದ 1500 ಕ್ಕೂ ಹೆಚ್ಚು ಹರ್ಕ್ಯೂಲೇಸ್, ಸೀಮೆತುಂಗಡಿ, ಹೊಂಗೆ ಮರಗಳು ಭೂಗಳ್ಳರ ಹಾವಳಿಯಿಂದ ರಾತ್ರೋರಾತ್ರಿ ಕರಗಿವೆ. ಲಕ್ಷಾಂತರ ರೂ ಬೆಲೆಬಾಳುವ ಮರಗಿಡ ನಾಶ ಆಗಿರುವ ಮಾಹಿತಿಯೇ ಗ್ರಾಪಂ ಮತ್ತು ಅರಣ್ಯ ಇಲಾಖೆಗೂ ಗೋತ್ತಿಲ್ಲ. ಬೆಂಗಳೂರಿನ ಭೂಗಳ್ಳರಿಗೆ ಅಧಿಕಾರಿ ವರ್ಗದ ಮೌನದ ಶ್ರೀರಕ್ಷೆಯು ಅರಣ್ಯ ನಾಶಕ್ಕೆ ಬಲನೀಡಿದೆ.
ಸರ್ವೆಗೆ ತಹಶೀಲ್ದಾರ್ ಖಡಕ್ ಆದೇಶ:
ರೈತಸಂಘ ಕಳೆದ 10 ವರ್ಷದಿಂದ ಧರ್ಮಸಾಗರ ಕೆರೆಯ ಸರ್ವೆಗೆ ಮನವಿ ಮಾಡಿದ್ರು ಪ್ರಯೋಜನಾ ಆಗಿರಲಿಲ್ಲ. ರೈತಸಂಘದ ದೂರಿನ ಅನ್ವಯ ಕೊರಟಗೆರೆ ತಹಶೀಲ್ದಾರ್ ಮಂಜುನಾಥ ಕೆ., ರೈತರ ಜೊತೆಗೂಡಿ ಕೆರೆಯ ನಾಲ್ಕುದಿಕ್ಕಿನ ಮಾಹಿತಿ ಕಲೆಹಾಕಿದ್ದಾರೆ. ಕೆರೆಯ ಭೂಮಿ ಯಾರೇ ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೇ ತೆರವು ಮಾಡಿಸ್ತೇನೆ. ಕಂದಾಯ ಮತ್ತು ಸರ್ವೆ ಇಲಾಖೆ ಜಂಟಿಯಾಗಿ ಸರ್ವೆ ನಡೆಸುವಂತೆ ಕೆರೆಯಲ್ಲಿಯೇ ಅಧಿಕಾರಿಗಳಿಗೆ ಖಡಕ್ ಆದೇಶ ಮಾಡಿರುವ ಘಟನೆ ನಡೆದಿದೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ


