ಪ್ರಕಾಶ್ ರಾಜ್. ಈ ಒಂದು ಹೆಸರು ಬಹಳಷ್ಟು ವಿವಾದಗಳಿಗೆ ಕಾರಣವಾಗಿದ್ದು ಇದೀಗ ಮತ್ತೊಮ್ಮೆ ಟ್ರೋಲ್ ಆಗುವ ಮೂಲಕ ಮುನ್ನೆಲೆಗೆ ಬಂದಿದೆ. ಉಡುಪಿಯ ಕಾಪು ಮಾರಿಗುಡಿ ದೇವಾಲಯಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಶ್ರೀದೇವಿಯಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು.
ನಂತರ ಭರದಿಂದ ಸಾಗುತ್ತಿರುವ ಕಾಮಗಾರಿ ವೀಕ್ಷಿಸಿದ ನಟ ಪ್ರಕಾಶ್ ರೈ ಅವರು ಇಳಕಲ್ಲಿನ ಕಲಾತ್ಮಕ ಶೈಲಿಯ ಕೆತ್ತನೆಗಳ ಬಗ್ಗೆ ಮಾಹಿತಿ ಪಡೆದರು. ಈ ಬೆನ್ನಲ್ಲೇ ಪ್ರಕಾಶ್ ರಾಜ್ ಟೀಕೆಗೆ ಗುರಿಯಾಗುತ್ತಿದ್ದಾರೆ. ʻʻಹಿಂದೂ ದೇವತೆಗಳಿಗೆ ಮರ್ಯಾದೆ ಕೊಡದವನು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇಕೆ? ಆಡಳಿತ ಮಂಡಳಿ ದೇವಾಲಯದ ಒಳಗೆ ಬಿಟ್ಟಿದ್ದು ತಪ್ಪು. ಮೊದಲು ಗೋ ಮೂತ್ರ ಹಾಕಿ ಸಿಂಪಡಿಸಿʼʼ ಎಂದು ಕಮೆಂಟ್ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಫೋಟೊಗಳು ವೈರಲ್ ಆಗುತ್ತಿದ್ದಂತೆ ʻʻಹಿಂದೂ ದೇವತೆಗಳಿಗೆ ಮರ್ಯಾದೆ ಕೊಡದವನು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇಕೆ? ಆಡಳಿತ ಮಂಡಳಿ ಒಳಕ್ಕೆ ಬಿಟ್ಟಿದ್ದು ತಪ್ಪು. ಗೋ ಮೂತ್ರ ಹಾಕಿ ಸಿಂಪಡಿಸಿʼʼಎಂದು ಕಮೆಂಟ್ ಮಾಡುತ್ತಿದ್ದಾರೆ. ಸನಾತನ ಧರ್ಮ ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿರುವುದಕ್ಕೆ ಪ್ರಕಾಶ್ ಈ ಹಿಂದೆ ಬೆಂಬಲ ಸೂಚಿಸಿದ್ದರು. ಪ್ರಕಾಶ್ ರಾಜ್ ಹಿಂದು ವಿರೋಧಿ ಎಂಬ ಆರೋಪದ ಬಗ್ಗೆ ಸ್ವತಃ ಪ್ರಕಾಶ್ ರಾಜ್ ಅವರೇ ಈ ಬಗ್ಗೆ ಮಾತನಾಡಿದ್ದರು.
ಸನಾತನ ಧರ್ಮ ಎಂದರೆ ಏನು? ನಾನು ಬದಲಾಗುವುದಿಲ್ಲ ಎನ್ನುವುದು ಪ್ರಕೃತಿಗೆ ವಿರುದ್ಧ, ಕೆಲವರು ನಾನೇ ಶ್ರೇಷ್ಠ ಎನ್ನುತ್ತಾರೆ. ಕಾಗೆಗಳು ಹೆಚ್ಚಾಗಿ ಸೇರಿಕೊಂಡು ಕೋಗಿಲೆ ನಮ್ಮ ಮಾತು ಕೇಳಬೇಕು ಎನ್ನುವ ಮಾತು ಆಡುತ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ಇವರು ದಾರಿ ತಪ್ಪಿಸುತ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ಮಾತನಾಡುವವರು ಯಾರೂ ಹಿಂದೂಗಳಲ್ಲಾ, ಇವರೆಲ್ಲಾ ರಾಜಕೀಯ ಲಾಭಕ್ಕಾಗಿ ದುರುದ್ದೇಶದಿಂದ ಮಾತನಾಡುತ್ತಿದ್ದಾರೆ. ಅಮಾವಾಸ್ಯೆ ಎಂದರೆ ಚೆನ್ನಾಗಿಲ್ವಂತೆ, ಆದರೆ ಚಂದ್ರಯಾನ ಮಾಡುತ್ತಾರಂತೆʼʼ ಎಂದು ವ್ಯಂಗ್ಯವಾಡಿದ್ದರು.


