ಪಾವಗಡ: ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೇ ಹೆಲ್ತ್ ಸೊಸೈಟಿ ನಿಸ್ವಾರ್ಥ ಸೇವೆ ಮಾಡುತ್ತಿದೆ ಎಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಈರಪ್ಪ ತಿಳಿಸಿದ್ದಾರೆ.
ತಾಲ್ಲೂಕಿನ ವೈ.ಎನ್.ಹೊಸಕೋಟೆ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಶಂಕರ್ ಕಣ್ಣಿನ ಆಸ್ಪತ್ರೆ ಬೆಂಗಳೂರು ಮತ್ತು ಹೆಲ್ಪ್ ಸೊಸೈಟಿ ಪಾವಗಡ ಇವರ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡುತ್ತಿದ್ದರು.
ಹೆಲ್ಪ್ ಸೊಸೈಟಿಯು ಸದಾ ಕ್ರಿಯಾಶೀಲವಾಗಿ ಸಮಾಜಮುಖಿ ಕೆಲಸ ಮಾಡುತ್ತಿರುತ್ತದೆ. ಈ ಬಾರಿ ಗಡಿ ಭಾಗವಾದ ವೈ ಎನ್ ಹೊಸಕೋಟೆಯಲ್ಲಿ ನೇತ್ರ ತಪಾಸಣೆ ಶಸ್ತ್ರಚಿಕಿತ್ಸೆ ಶಿಬಿರವನ್ನು ಹಮ್ಮಿಕೊಂಡು ಜನತೆಗೆ ತುಂಬಾ ಅನುಕೂಲ ಮಾಡಿದೆ. ಇಂಥ ಶಿಬಿರಗಳಲ್ಲಿ ಜನತೆ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಉಪತಹಶೀಲ್ದಾರ್ ಕಿರಣ್ ಕುಮಾರ್ ಮಾತನಾಡಿ, ಸಮಾಜ ಸೇವೆಯಲ್ಲಿ ಹೆಲ್ಪ್ ಸೊಸೈಟಿ ಸದಾ ಮುಂಚೂಣಿಯಲ್ಲಿರುತ್ತದೆ. ಇಂದು ನಡೆದ ಶಿಬಿರದಲ್ಲಿ ನಿರೀಕ್ಷೆಗೂ ಮೀರಿ ಜನತೆ ಭಾಗವಹಿಸಿದ್ದಾರೆ. ಆರೋಗ್ಯದ ಪರವಾಗಿರುವ ಇನ್ನಷ್ಟು ಶಿಬಿರಗಳನ್ನು ಹೆಲ್ಪ್ ಸೊಸೈಟಿ ಅಧ್ಯಕ್ಷರಾದ ಮಾನ್ಯಂ ಶಶಿಕಿರಣ್ ಹಮ್ಮಿಕೊಳ್ಳಬೇಕು ಎಂದರು.
ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚಿನ ಸಂಖ್ಯೆ ಜನತೆ ಭಾಗವಹಿಸಿದ್ದರು. ಅದರಲ್ಲಿ 43 ಜನರು ಶಸ್ತ್ರಚಿಕಿತ್ಸೆಗೆ ಬೆಂಗಳೂರಿಗೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನ್ಯಂ ಶಶಿಕಿರಣ್, ವೈದ್ಯಾಧಿಕಾರಿ ಡಾ. ಕಿರಣ್, ಶಂಕರ್ ಆಸ್ಪತ್ರೆ ಡಾಕ್ಟರ್ ಮಾಳವಿಕಾ, ನೇತ್ರಾಧಿಕಾರಿ ಪವಿತ್ರ, ಶಿಬಿರದ ಕ್ಷೇತ್ರಾಧಿಕಾರಿ ಹರೀಶ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.
ವರದಿ: ನಂದೀಶ್ ನಾಯ್ಕ, ಪಾವಗಡ