ಬೆಂಗಳೂರು: ರಾಜ್ಯದಲ್ಲಿ ತೀವ್ರಗೊಂಡಿರುವ ಮಳೆ ಕೊರತೆ, ಕುಡಿಯುವ ನೀರಿನ ಬಿಕ್ಕಟ್ಟು ಹಾಗೂ ಕೃಷಿ ವಲಯದ ಬಿಕ್ಕಟ್ಟನ್ನು ಪರಿಹರಿಸಲು ಕರ್ನಾಟಕದ ಬರ ಪರಿಸ್ಥಿತಿಯನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕು ಹಾಗೂ ಕೇಂದ್ರ ಸರ್ಕಾರದಿಂದ ವಿಶೇಷ ಆರ್ಥಿಕ ನೆರವು ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಕೇಂದ್ರ ಕೃಷಿ ಸಚಿವರಿಗೂ ಪತ್ರ ಬರೆದಿದ್ದು, ಕೇಂದ್ರದ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.
ಪರಮೇಶ್ವರ್ ಅವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ ಜೂನ್ ತಿಂಗಳಲ್ಲಿ ಶೇಕಡಾ 42 ರಷ್ಟು ಮತ್ತು ಜುಲೈನಲ್ಲಿ ಇದುವರೆಗೆ ಶೇಕಡಾ 34 ರಷ್ಟು ಮಳೆ ಕೊರತೆ ದಾಖಲಾಗಿದೆ. ಈ ಭೀಕರ ಮಳೆ ಕೊರತೆಯಿಂದಾಗಿ ರಾಜ್ಯದ ಹಲವು ಪ್ರದೇಶಗಳಲ್ಲಿ ಬಿತ್ತನೆಯಾಗಿದ್ದ ಬೆಳೆಗಳಲ್ಲಿ ಸುಮಾರು ಶೇಕಡಾ 80 ರಷ್ಟು ನಷ್ಟ ಸಂಭವಿಸಿದೆ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಜಲಾಶಯಗಳಿಗೆ ನೀರಿನ ಹರಿವು ಕಡಿಮೆಯಾಗಿದೆ. ಇದು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಭದ್ರತೆಗೆ ದೊಡ್ಡ ಧಕ್ಕೆ ತಂದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬರ ಪರಿಹಾರ ವ್ಯವಸ್ಥೆಯನ್ನು ಇಂದಿನ ಅಗತ್ಯಕ್ಕೆ ತಕ್ಕಂತೆ ಆಧುನೀಕರಿಸಬೇಕು ಎಂದು ಡಿಸಿಎಂ ಒತ್ತಾಯಿಸಿದ್ದಾರೆ. ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಗುರುತಿಸಲು ಹಳೆಯ 2015-16ರ ಕೃಷಿ ಜನಗಣತಿ ಮಾಹಿತಿಯ ಬದಲಾಗಿ, ಕರ್ನಾಟಕ ಸರ್ಕಾರದ ನವೀಕೃತ ‘FRUITS’ ಡೇಟಾಬೇಸ್ ಅನ್ನು ಪರಿಗಣಿಸಬೇಕು. ಎಸ್ ಡಿಆರ್ಎಫ್ (SDRF), ಎನ್ ಡಿಆರ್ ಎಫ್ (NDRF) ಮಾರ್ಗಸೂಚಿಗಳು ಹಾಗೂ 2020ರ ಬರ ಕೈಪಿಡಿಯಲ್ಲಿರುವ ಬೆಳೆ ನಷ್ಟ ಪರಿಹಾರದ ಮಾನದಂಡಗಳನ್ನು ಏಕರೂಪಗೊಳಿಸಿ, ರೈತರಿಗೆ ತ್ವರಿತವಾಗಿ ನ್ಯಾಯಸಮ್ಮತ ಪರಿಹಾರ ನೀಡಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.
ಕೇವಲ ಋತುಮಾನದ ಒಟ್ಟು ಮಳೆ ಪ್ರಮಾಣವನ್ನು ಮಾತ್ರ ಲೆಕ್ಕ ಹಾಕದೆ, ಬಿತ್ತನೆ ಅವಧಿಯಲ್ಲಿ ಶೇಕಡಾ 20 ರಿಂದ ಶೇಕಡಾ 59 ರವರೆಗೆ ಉಂಟಾಗುವ ಮಳೆ ಕೊರತೆಯನ್ನೂ ಬರ ಘೋಷಣೆಯ ಮಾನದಂಡವಾಗಿ ಪರಿಗಣಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಸ್ಥಳೀಯ ಹವಾಮಾನಕ್ಕೆ ತಕ್ಕಂತೆ ‘ಒಣ ಅವಧಿ’ (Dry Spell) ವ್ಯಾಖ್ಯಾನವನ್ನು ಪರಿಷ್ಕರಿಸಬೇಕು ಹಾಗೂ ಬೆಳೆ ಬಿತ್ತನೆ ಪೂರ್ಣಗೊಳ್ಳುವವರೆಗೆ ಕಾಯದೆ ಆರಂಭಿಕ ಹಂತದಲ್ಲೇ ರಾಜ್ಯಗಳಿಗೆ ಬರ ಘೋಷಿಸುವ ಅಧಿಕಾರ ನೀಡಬೇಕು ಎಂದು ಕೇಂದ್ರವನ್ನು ಕೋರಿದ್ದಾರೆ.
ಪರಿಸ್ಥಿತಿಯ ಗಂಭೀರತೆಯನ್ನು ಅರಿತು ರೈತರ ಹಿತಾಸಕ್ತಿ ಕಾಯಲು ಮತ್ತು ಕುಡಿಯುವ ನೀರಿನ ಬಿಕ್ಕಟ್ಟು ನೀಗಿಸಲು ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಡಾ. ಜಿ. ಪರಮೇಶ್ವರ್ ಪತ್ರದಲ್ಲಿ ಒತ್ತಿ ಹೇಳಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


