ಭಾರತೀಯ ಜನತಾ ಪಕ್ಷದ ಸಂಸದ ಗೌತಮ್ ಗಂಭೀರ್ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುವ ನಿರ್ಧಾರವನ್ನು ಘೋಷಿಸಿದ್ದಾರೆ.
ಪೂರ್ವ ದೆಹಲಿಯನ್ನು ಪ್ರತಿನಿಧಿಸಿದ್ದ ಗಂಭೀರ್ ಅವರು, ಈ ಸುದ್ದಿಯನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ರಾಜಕೀಯಕ್ಕೆ ಪ್ರವೇಶಿಸುವ ಮೊದಲು ತಮ್ಮ ಆತ್ಮದಂತಿದ್ದ ಕ್ರಿಕೇಟ್ ನತ್ತ ಮತ್ತೆ ಮರಳಬೇಕು ಎಂಬುದಾಗಿ ಉಲ್ಲೇಖಿಸಿ, ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ನನ್ನ ಮುಂಬರುವ ಕ್ರಿಕೆಟ್ ಬದ್ಧತೆಗಳ ಮೇಲೆ ಗಮನ ಕೇಂದ್ರೀಕರಿಸಲು ನನ್ನ ರಾಜಕೀಯ ಕರ್ತವ್ಯಗಳಿಂದ ನನ್ನನ್ನು ಮುಕ್ತಗೊಳಿಸುವಂತೆ ನಾನು ಗೌರವಾನ್ವಿತ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾಜಿ ಅವರನ್ನು ವಿನಂತಿಸಿದ್ದೇನೆ. ಜನರ ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾನು ಪ್ರಾಮಾಣಿಕವಾಗಿ ಕೃತಜ್ಞನಾಗಿದ್ದೇನೆ. ಜೈ ಹಿಂದ್ “ಎಂದು ಗಂಭೀರ್ ಬರೆದಿದ್ದಾರೆ.
ಮುಂಬರುವ 2024ರ ಚುನಾವಣೆಯಲ್ಲಿ ಗಂಭೀರ್ ಅವರಿಗೆ ಟಿಕೆಟ್ ಸಿಗುವುದಿಲ್ಲ ಎಂಬ ವರದಿಗಳ ನಡುವೆಯೇ ಗಂಭೀರ್ ರಾಜಕೀಯ ತೊರೆಯುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
2024 ರ ಲೋಕಸಭಾ ಚುನಾವಣೆಗೆ ಬಿಜೆಪಿ ಶೀಘ್ರದಲ್ಲೇ 100 ಕ್ಕೂ ಹೆಚ್ಚು ಹೆಸರುಗಳನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರುಗಳು ಸೇರಿದ್ದಾರೆ. ಪಕ್ಷವು ದೆಹಲಿಯಲ್ಲಿ ರಾತ್ರಿಯಿಡೀ ಸಭೆಗಳನ್ನು ನಡೆಸಿದೆ.


