ಬೆಂಗಳೂರು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಆರೋಪದ ಮೇರೆಗೆ ಜೈಲು ಸೇರಿದ್ದ ಮೂವರಿಗೆ ನಗರದ ಎಸಿಎಂಎಂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಾದ ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ, ದಿಲ್ಲಿಯ ಕಿಶನ್ ಗಂಜ್ ನ ಮೊಹಮ್ಮದ್ ಇಲ್ವಾಜ್, ಬೆಂಗಳೂರಿನ ಜಯಮಹಲ್ ನಿವಾಸಿ ಡಿ.ಎಸ್. ಮುನಾವರ್ ಅಹ್ಮದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿರುವ 39ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವಿ. ವಿಜೇತ್, ಮೂವರಿಗೂ ಷರತ್ತು ಬದ್ಧ ಜಾಮೀನು ನೀಡಿದೆ.
ಮೂವರು ಆರೋಪಿಗಳು ಆರೋಪಿಗಳು ಭಾರತ ಬಿಟ್ಟು ಹೋಗಬಾರದು. ತಲಾ ಒಂದು ಲಕ್ಷ ರೂ. ಮೊತ್ತದ ಮುಚ್ಚಳಿಕೆ ನೀಡಬೇಕು, ಇಬ್ಬರು ವ್ಯಕ್ತಿಗಳು ಜಾಮೀನು ಒದಗಿಸಬೇಕು. ತನಿಖೆ ಹಾಗೂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗಳಿಗೆ ಹಾಜರಾಗಬೇಕು ಎಂದು ನ್ಯಾಯಾಲಯ ಷರತ್ತು ವಿಧಿಸಿದೆ.
ಪ್ರಕರಣ ಪೊಲೀಸರು ದಾಖಲಿಸುವ ಮುನ್ನ ಪೊಲೀಸರು ಪೂರ್ವಾನುಮತಿ ಪಡೆದಿರಲಿಲ್ಲ. ಜತೆಗೆ, ಆರೋಪಿಗಳಿಗೆ ಸಿಆರ್ ಪಿಸಿ ಕಲಂ 41ರ ಅನ್ವಯ ನೋಟಿಸ್ ನೀಡಿಲ್ಲ, ಆರೋಪಿಗಳು ಘೋಷಣೆ ಕೂಗಿದ್ದಾರೆ ಎಂಬುದು ಸಾಬೀತಾಗಲು ಅವರ ಧ್ವನಿ ಮಾದರಿ ವರದಿಯನ್ನು ಎಫ್ ಎಎಲ್ ಗೆ ಕಳುಹಿಸಲಾಗಿದೆ. ಈ ಅಂಶಗಳು ಈ ಪ್ರಕರಣಕ್ಕೆ ಸಾಕ್ಷ್ಯವೇ ಇಲ್ಲ ಎಂಬುದಕ್ಕೆ ಪೂರಕವಾಗಿವೆ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು.
ಫೆ.27ರಂದು ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ, ವಿಜೇತ ಕಾಂಗ್ರೆಸ್ ಅಭ್ಯರ್ಥಿ ಪರ ಘೋಷಣೆ ಕೂಗುವಾಗ ಆರೋಪಿಗಳು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಮೇರೆಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


