ತುರುವೇಕೆರೆ: ದಕ್ಷ ಅಧಿಕಾರಿಯಾಗಿದ್ದ ತುರುವೇಕೆರೆ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ರವರ ಅಮಾನತು ಆದೇಶ ಸರ್ಕಾರ ಮೂರು ದಿನದೊಳಗಾಗಿ ಹಿಂಪಡೆಯಬೇಕು, ಇಲ್ಲವಾದಲ್ಲಿ ಪಟ್ಟಣದ ಸಿಪಿಐ ಕಚೇರಿ ಮುಂಭಾಗ ತಾಲೂಕಿನ ವಿವಿಧ ಪರ ಸಂಘಟನೆಗಳು ಹಾಗೂ ನಾಗರಿಕರು ಜೊತೆಗೂಡಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳುವುದಾಗಿ ಮುಖಂಡ ಹೆಡಗಿಹಳ್ಳಿ ವಿಶ್ವನಾಥ್ ಎಚ್ಚರಿಸಿದ್ದಾರೆ.
ಪಟ್ಟಣದ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವನಾಥ್ ರವರು, ಸಿಪಿಐ ನವೀನ್ ರವರು ದಕ್ಷ ಅಧಿಕಾರಿಯಾಗಿದ್ದು, ಸಾಕಷ್ಟು ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ತಾಲೂಕಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿದ್ದವರಾಗಿದ್ದವರು. ದಂಡಿನಶಿವರ ವ್ಯಾಪ್ತಿಯ ಕೋಡಿಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ ನವೀನ್ ರವರನ್ನು ಅಮಾನತುಗೊಳಿಸುವುದು ವೈಜ್ಞಾನಿಕವಾಗಿಲ್ಲ. ಯಾರದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ ನೀಡಿದಂತಾಗಿದೆ ಎಂಬ ಚರ್ಚೆಯು ಸಾರ್ವಜನಿಕ ವಲಯದಲ್ಲಿ ಪ್ರತಿನಿತ್ಯ ನಡೆಯುತ್ತಿದೆ.ಉತ್ತಮವಾಗಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ನೈತಿಕ ಸ್ಥೈರ್ಯ ತುಂಬಾಬೇಕಾದದ್ದು ಪ್ರತಿ ನಾಗರಿಕನ ಕರ್ತವ್ಯವಾಗಿದೆ ಎಂದರು.
ಸಾರ್ವಜನಿಕ ವಲಯದಲ್ಲಿ ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಿಪಿಐ ನವೀನ್ ರವರ ಬೆಂಬಲಕ್ಕೆ ನಿಲ್ಲುವುದು ಸಮಂಜಸವಾಗಿದೆ. ಈ ಕೂಡಲೇ ಸಿಪಿಐ ನವೀನ್ ರವರ ಅಮಾನತು ಆದೇಶವನ್ನು ರದ್ದುಗೊಳಿಸಿ ಪುನ: ತುರುವೇಕೆರೆ ವೃತ್ತದಲ್ಲಿಯೇ ಕರ್ತವ್ಯ ನಿರ್ವಹಿಸಲು ಸರ್ಕಾರವು ಮುಂದಾಗಬೇಕೆಂದು ಒತ್ತಾಯಿಸಿದ್ದಾರೆ.
ಮುಖಂಡರಾದ ಯಜಮಾನ್ ಮಹೇಶ್ ಮತ್ತು ಟಿ.ಕೆ. ಚಿದಾನಂದ್ ಹಾಗೂ ಕುಮಾರಸ್ವಾಮಿ ಜೊತೆಗೂಡಿ ಮಾತನಾಡಿ, ಸಿಪಿಐ ನವೀನ್ ರವರನ್ನು ಅಮಾನತು ಮಾಡಿರುವ ಘಟನೆಯಿಂದ ಸಾರ್ವಜನಿಕ ವಲಯದಲ್ಲಿ ಬೇಸರ ಹಾಗೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸಮಾಜದ ಪ್ರತಿಯೊಬ್ಬರನ್ನು ಪ್ರೀತಿ-ವಿಶ್ವಾಸದಿಂದ, ನೊಂದು ಬಂದವರಿಗೆ ನ್ಯಾಯಸಮ್ಮತವಾಗಿ ಕರ್ತವ್ಯ ನಿರ್ವಹಿಸಿ ಉತ್ತಮ ಅಧಿಕಾರಿ ಎಂದೇ ಹೆಸರಾಗಿದ್ದವರು. ತುರ್ತಾಗಿ ಸಿಪಿಐ ರವರು ಅಮಾನತು ಆದೇಶ ರದ್ದಾಗಬೇಕು. ಇಲ್ಲವಾದಲ್ಲಿ ಪಟ್ಟಣದಲ್ಲಿ ಅಹೋರಾತ್ರಿ ಧರಣಿಗೆ ಪಕ್ಷತೀತವಾಗಿ ಮತ್ತು ಜಾತ್ಯತೀತವಾಗಿ ಬೆಂಬಲ ನೀಡುವುದಾಗಿ ತಿಳಿಸಿದರು.
ಈ ಸಂಬಂಧ ಸರ್ಕಾರವು ಅಮಾನತು ಆದೇಶ ವಾಪಸ್ ಪಡೆಯುವಂತೆ ಶಾಸಕರಾದ ಮಸಾಲೆ ಜಯರಾಮ್, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರಗಜ್ಞಾನೇಂದ್ರ ಅವರಿಗೆ ತಾಲೂಕಿನ ಸಮಸ್ತ ನಾಗರಿಕರ ಪರವಾಗಿ ಮನವಿ ಪತ್ರ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಹರಿಕಾರನಹಳ್ಳಿ ಪ್ರಸಾದ್, ಮಾವಿನಹಳ್ಳಿ ಕುಮಾರಣ್ಣ, ಬಡಗರಹಳ್ಳಿ ರಾಮೇಗೌಡ, ಶಂಕರಣ್ಣ, ರೇಣುಕಣ್ಣ, ಆಟೋ ಚಾಲಕ ಸಂಘದ ಗಂಗಾಧರ್, ಜಯ ಕರ್ನಾಟಕ ಜನಪರ ವೇದಿಕೆಯ ತಾಲೂಕು ಅಧ್ಯಕ್ಷ ವೆಂಕಟೇಶ್ ಸೇರಿದಂತೆ ಮುಂತಾದ ಮುಖಂಡರು ಉಪಸ್ಥಿತರಿದ್ದರು.
ವರದಿ: ಸಚಿನ್ ಮಾಯಸಂದ್ರ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB