ಬೆಂಗಳೂರು: ತಮಿಳಿನಿಂದಲೇ ಕನ್ನಡ ಜನಿಸಿದೆ ಎಂದು ಕಮಲ್ ಹಾಸನ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ನಟ ಶಿವರಾಜ್ ಕುಮಾರ್ ಅವರ ವಿರುದ್ಧ ಕೆಲವರು ಟೀಕೆಗಳನ್ನು ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ನಟ ಶಿವರಾಜ್ ಕುಮಾರ್ ಮೌನಮುರಿದಿದ್ದಾರೆ.
ಕನ್ನಡವೇ ನನ್ನ ಮೊದಲ ಆದ್ಯತೆ, ಇದು ಮೊದಲ ಬಾರಿಯಲ್ಲ, ಪ್ರತಿಬಾರಿಯೂ ಕನ್ನಡದ ವಿಷಯ ಬಂದಾಗೆಲ್ಲ ನಾನು ನಿಂತಿದ್ದೇನೆ. ಕನ್ನಡಕ್ಕಾಗಿ ನಾನು ಏನು ಮಾಡಿದ್ದೇನೆ ಎಂಬುದು ಕರ್ನಾಟಕದ ಜನರಿಗೆ ಗೊತ್ತಿದೆ, ಅದನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಶಿವರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಅಂದಿನ ಕಾರ್ಯಕ್ರಮಕ್ಕೆ ಹೋಗಿದ್ದೆ ಅಷ್ಟೆ ಎಂದು ಶಿವರಾಜ್ ಕುಮಾರ್ ಹೇಳಿದರು. ಇದೇ ವೇಳೆ ಈ ವಿವಾದಕ್ಕೆ ನಿಮ್ಮ ಹೆಸರು ಎಳೆದುತರಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಇರಲಿ ತೊಂದರೆ ಇಲ್ಲ, ನಾನು ಅದರ ಬಗ್ಗೆ ಎಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ, ನನ್ನ ಆತ್ಮಸಾಕ್ಷಿಗೆ ನಾನು ಸರಿಯಾಗಿದ್ದೇನೆ. ನಾನು ಕಲೆಗಾಗಿ ಬದುಕುತ್ತಿರುವವನು, ಕಲೆಯಿಂದಲೇ ನಾವು, ಎಲ್ಲ ಭಾಷೆಗಳ ಬಗ್ಗೆಯೂ ಗೌರವ ಇದೆ, ಆದರೆ ಕನ್ನಡ ಭಾಷೆಯ ವಿಷಯ ಬಂದಾಗೆಲ್ಲ ಚಿತ್ರರಂಗದ ಪರವಾಗಿ ಬರುವವರಲ್ಲಿ ಮೊದಲಿಗೆ ನಾನಾಗಿರುತ್ತೇನೆ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.
‘ಕಮಲ್ ಹಾಸನ್ ಅವರ ಅಭಿಮಾನಿ ನಾನು, ಆದರೆ ವೇದಿಕೆ ಮೇಲೆ ಏನು ಮಾತನಾಡಬೇಕು, ಬಿಡಬೇಕು ಎಂಬುದು ಅವರ ಆಯ್ಕೆ. ಆದರೆ ಅವರಿಂದ ಈಗ ಏನು ಬಯಸುತ್ತಿದ್ದಾರೋ ಅದು ಮಾಧ್ಯಮಗಳ ಬಯಕೆ. ಅಂದು ಕಮಲ್ ಮಾತಿಗೆ ನಾನು ಚಪ್ಪಾಳೆ ಹೊಡೆಯುತ್ತಿರುವಂತೆ ದೃಶ್ಯಗಳನ್ನು ಜೋಡಿಸಿ ಕೆಲವರು ತೋರಿಸುತ್ತಿದ್ದಾರೆ. ದಯವಿಟ್ಟು ಅದನ್ನು ಮಾಡಬೇಡಿ, ನಾನು ಕಲಾವಿದ, ಈ ಎಡಿಟಿಂಗ್ ಗಳು ಹೇಗೆ ಆಗುತ್ತವೆ ಎಂಬುದು ನನಗೆ ಗೊತ್ತಿದೆ’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW


