ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಹೊಸಳ್ಳಿ ಚಂದ್ರಪ್ಪನವರ ನೇತೃತ್ವದಲ್ಲಿ ನಡೆಯುತ್ತಿರುವ ಆಹೋರಾತ್ರಿ ಧರಣಿ 22 ನೇ ದಿನಕ್ಕೆ ತಲುಪಿದ್ದು, ಕರ್ನಾಟಕ ರಾಜ್ಯ ರೈತ ಸಂಘವು ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ಕಾರ್ಯಧ್ಯಕ್ಷರಾದ ಈಚಘಟ್ಟದ ಸಿದ್ಧವೀರಪ್ಪ ಅವರು, ಪಟ್ಟಣ ಪಂಚಾಯಿತಿ ಮತ್ತು ಸರ್ಕಾರಗಳ ಡಕಾಯತಿಯಂತಹ ತೆರಿಗೆ ನೀತಿಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುವವರಿಗೆ ಕುಡಿಯುವ ನೀರು, ನೆರಳಿಗಾಗಿ ಮೇಲ್ಛಾವಣಿ, ಶೌಚಾಲಯ ಮತ್ತು ವಿಶ್ರಾಂತಿ ಸೌಲಭ್ಯಗಳಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ತೆರಿಗೆ ವಸೂಲಿ ಮಾಡುವುದು ಸಾರ್ವಜನಿಕರನ್ನು ಡಕಾಯಿತಿ ಮಾಡುವ ಕೆಲಸ ಎಂದು ಸಿದ್ಧವೀರಪ್ಪ ತೀವ್ರವಾಗಿ ಟೀಕಿಸಿದರು.
ರೈತರು ತಂದ ಸರಕಿಗೆ ರೈತನಿಂದ ಒಂದು ತೆರಿಗೆ ಮತ್ತು ಅದನ್ನು ಮಾರಾಟ ಮಾಡುವ ವ್ಯಾಪಾರಿಯಿಂದ ಇನ್ನೊಂದು ತೆರಿಗೆ ಒಂದೇ ಸರಕಿನ ಮೇಲೆ ಎರಡು ಬಾರಿ ತೆರಿಗೆ ಸಂಗ್ರಹಿಸುವ ಈ ಡಬಲ್ ತೆರಿಗೆ ನೀತಿ ಅಥವಾ ದರೋಡೆಕೋರತನ ಕೂಡಲೇ ನಿಲ್ಲಬೇಕು ಎಂದು ಒತ್ತಾಯಿಸಿದರು.
ಈ ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ, ಹೊಳಲ್ಕೆರೆ ತಾಲೂಕು ಅಧ್ಯಕ್ಷ ಸಿ.ಎಸ್.ರಂಗಸ್ವಾಮಿ ಮತ್ತು ಚಿತ್ರದುರ್ಗ ಜಿಲ್ಲಾ ಹಸಿರು ಸೇನೆಯ ಸಂಚಾಲಕ ಪ್ರಸನ್ನ ಕುಮಾರ್, ಜಿಲ್ಲಾ ಕಾರ್ಯದರ್ಶಿ ಕಲ್ಲಹಳ್ಳಿ ಮಲ್ಲೇಶಯ್ಯ, ಕರಿಯಪ್ಪ, ನೀರಾ ಈರಣ್ಯ, ಜಯಲಕ್ಷ್ಮಮ್ಮ ಸೇರಿದಂತೆ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
 
		 
					
					 


