ತುರುವೇಕೆರೆ: ತಾಲ್ಲೂಕಿನ ದಬ್ಬಘಟ್ಟ ಹೋಬಳಿಯ 29 ಕೆರೆಗಳಿಗೆ ನೀರು ಹರಿಸುವ ಏತ ನೀರಾವರಿ ಯೋಜನೆಗೆ ಸರ್ಕಾರ ಹೆಚ್ಚುವರಿ ಅನುದಾನ ಮಂಜೂರು ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಒತ್ತಾಯಿಸಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಬ್ಬೇಘಟ್ಟ ಹೋಬಳಿಯ ಜನರಿಗೆ ಈ ಕಾಮಗಾರಿಯಿಂದ ಬಹುಪಾಲು ನೀರಿನ ಸಮಸ್ಯೆ ಬಗೆಹರಿದಂತಾಗುತ್ತದೆ. ಈಗಾಗಲೇ ಮಲ್ಲಾಘಟ್ಟ ಕೆರೆಯಿಂದ ಕಾಮಗಾರಿ ಆರಂಭವಾಗಿದೆ. ಮಲ್ಲಾಘಟ್ಟದ ಬಳಿ ಜಾಕ್ ವೆಲ್ ನಿರ್ಮಿಸಲಾಗಿದೆ. ಅಲ್ಲಿಂದ ನೀರು ಹರಿಸುವ ಸಲುವಾಗಿ ಪೈಪ್ ಲೈನ್ ಕಾಮಗಾರಿ ಪ್ರಾರಂಭ ಮಾಡಲಾಗಿದೆ. ಈಗಾಗಲೇ ವೈಟಿ ರಸ್ತೆವರೆಗೆ ಪೈಪ್ ಲೈನ್ ಕಾಮಗಾರಿ ಮುಗಿದಿದೆ. 48 ಕೋಟಿ ಯೋಜನೆಗೆ ಸರ್ಕಾರ ಕೇವಲ 9 ಕೋಟಿಯಷ್ಟು ಹಣ ಮಾತ್ರ ಬಿಡುಗಡೆಗೊಳಿಸಿದೆ. ಉಳಿದ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದರು.
ಜಿಲ್ಲೆಯಲ್ಲಿ ಎತ್ತಿನಹೊಳೆ ಯೋಜನೆ ಚಾಲನೆಯಲ್ಲಿದೆ. ತಿಪಟೂರು, ಗುಬ್ಬಿ ತಾಲ್ಲೂಕಿನಲ್ಲಿ ಕಾಮಗಾರಿ ಮಾಡಲು ತಲಾ 50 ಕೋಟಿ ನೀಡಲಾಗಿದೆ. ಆದರೆ ತುರುವೇಕೆರೆಗೆ ಕೇವಲ 30 ಕೋಟಿ ನೀಡಲಾಗಿದೆ. ಇದು ತಾರತಮ್ಯ. ಈ ಬಗ್ಗೆ ಉಪ ಮುಖ್ಯಮಂತ್ರಿಯನ್ನು ಕೇಳಿದರೆ, ಲಿಂಕ್ ಕೆನಾಲ್ಗೆ ತಡೆ ಒಡ್ಡದಿದ್ದರೆ 50 ಕೋಟಿ ಕೊಡುತ್ತೇನೆ ಎಂದು ಆಮಿಷ ಒಡ್ಡುತ್ತಾರೆ. ಇದು ಸರಿಯಲ್ಲ. ನಮಗೆ ಜಿಲ್ಲೆಯ ರೈತ ಹಿತ ಮುಖ್ಯವೇ ಹೊರೆತು ಅವರು ನೀಡುವ ಆಮಿಷವಲ್ಲ. ಅವರ ದುಡೇ ಬೇಡ. ಗಣಿಭಾದಿತ ಪ್ರದೇಶವೆಂದು ಗಣಿ ಮಾಲೀಕರು 300 ಕೋಟಿ ನೀಡಿದ್ದಾರೆ. ಅದರಲ್ಲಿ ವಿತರಣೆ ಮಾಡಲು ಅವರಿಗೇನು ಕಷ್ಟ? ಎಂದು ಕಿಡಿಕಾರಿದರು.
ತಾಲ್ಲೂಕಿನ ಮಾಯಸಂದ್ರದಿಂದ ಕೆ.ಬಿ.ಕ್ರಾಸ್ವರೆಗಿನ 150 ಎ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗಬೇಕು. ಕೂಡಲೇ ಗ್ರಾಮಾಂತರ ಪ್ರದೇಶಗಳಲ್ಲಿ ಸರ್ವೀಸ್ ರಸ್ತೆ ಮಾಡುವ ಮೂಲಕ ಜನರಿಗೆ ಸರಾಗವಾಗಿ ಓಡಾಡಲು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು. ಜೆಡಿಎಸ್ ವಕ್ತಾರ ವೆಂಕಟಾಪುರ ಯೋಗೀಶ್, ವಿಜಯೇಂದ್ರ, ಮಂಗೀಕುಪ್ಪೆ ಬಸವರಾಜು, ಅರಿಶಿನದ ಹಳ್ಳಿ ನರಸಿಂಹಮೂರ್ತಿ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


