ವರದಿ: ಮಂಜುಸ್ವಾಮಿ ಎಂ.ಎನ್.
ಕೊರಟಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಮತ್ತು ಕಾರ್ಮಿಕರ ಹಿತ ಕಾಪಾಡದೇ ಕಾರ್ಪೋರೇಟರ್ ಗಳನ್ನು ಬೆಳೆಸುವ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರಲು ತಯಾರಿ ಮಾಡಿಕೊಂಡಿದೆ. ಕಾರ್ಮಿಕರ ಕಷ್ಟವನ್ನು ಅರಿತು ದುಡಿಯುವ ವರ್ಗದ ಬೇಡಿಕೆಯನ್ನು ಶೀಘ್ರದಲ್ಲೇ ಈಡೇರಿಸದಿದ್ದರೆ ಹೋರಾಟದ ಕಿಚ್ಚು ಇನ್ನಷ್ಟು ಹೆಚ್ಚಲಿದೆ ಎಂದು ರೈತ ಸಂಘ ಅಧ್ಯಕ್ಷ ರಂಗಹನುಮಯ್ಯ ಎಚ್ಚರಿಕೆ ನೀಡಿದರು.
ಕರ್ನಾಟಕ ರಾಜ್ಯ ರೈತ ಸಂಘ, ಸಿಐಟಿಯು ಕೊರಟಗೆರೆ ತಾಲ್ಲೂಕು ಸಮಿತಿ, ಬಿಸಿ ಊಟ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯರ್ತೆಯರು, ದಿನನಿತ್ಯ ಕೂಲಿ ಕಾರ್ಮಿಕರು, ಯುವಜನರು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ ಸೂಚಿಸಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯ ವೆರೆಗೆ ಪ್ರತಿಭಟನೆ ನಡೆಸಿ ಗ್ರೇಡ್–2 ತಹಶೀಲ್ದಾರ್ ರಾಮ್ ಪ್ರಸಾದ್ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.
ಸರ್ಕಾರದ ಭ್ರಷ್ಠಚಾರಗಳನ್ನು ಅರಿತು ಜನರು ಜಾಗೃತರಾಗಿ ಶ್ರಮಕ್ಕೆ ತಕ್ಕ ಕೂಲಿಯನ್ನು ನೀಡುವಂತೆ ಮುಷ್ಕರದಲ್ಲಿ ಕಾರ್ಮಿಕರು ಪ್ರತಿಭಟಿಸುತ್ತಿದ್ದು, ತುಮಕೂರಿನ ನಂದಿಹಳ್ಳಿ–ವಸಂತನರಸಾಪುರ ರಸ್ತೆಯನ್ನು ಅಭಿವೃದ್ಧಿ ಪಡಿಸಲು ರೈತರ ತೋಟ, ಮನೆಗಳು, ಬೋರ್ ವೆಲ್ ಗಳು ನಾಶ ಪಡಿಸಿ ಬಂಡವಾಳ ಶಾಹಿಗಳಿಗೆ ಜಮೀನುಗಳನ್ನು ಉಳಿಸುವ ಹುನ್ನಾರ ನಡೆಸಿದ್ದಾರೆ, ಹೋರಾಟ ಗಟ್ಟಿಗೊಳಿಸದಿದ್ದರೆ ರೈತರು, ಕಾರ್ಮಿಕರು ಸರ್ಕಾರಗಳ ತುಳಿತಕ್ಕೆ ಒಳಗಾಗಬೇಕಾಗುತ್ತದೆ ಎಂದು ಹೇಳಿದರು.
ಬಗರ್ ಹುಕ್ಕುಂ ನಲ್ಲಿ ಸಾಗುವಳಿ ಪತ್ರ ಪಡೆದ ರೈತರ ಜಮೀನನ್ನು ಸರ್ಕಾರ ಅರಣ್ಯ ಇಲಾಖೆಗೆ ಸೇರಿದ ಜಮೀನು ಎಂದು ಪಹಣಿಯಲ್ಲಿ ಉಲ್ಲೇಖಿಸುತ್ತಿದೆ, ಸರ್ಕಾರಿ ಶಾಲೆಗಳನ್ನು ಮುಚ್ಚಿ ಬಂಡವಾಳ ಶಾಹಿಗಳ ಶಾಲಾ-ಕಾಲೇಜುಗಳನ್ನು ಪ್ರೋತ್ಸಾಹಿಸುತ್ತಿದೆ, ಹೋರಾಟಕ್ಕೆ ಪ್ರತಿಫಲ ಪಡೆಯಲು ಮುಷ್ಕರಕ್ಕೆ ದೇಶದಲ್ಲಿ ರೈತ, ಕಾರ್ಮಿಕನು ಮುಷ್ಕರದ ಮೂಲಕ ತಮ್ಮ ಹಕ್ಕನ್ನು ಕೇಳುತ್ತಾ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡುತ್ತಿದ್ದಾರೆ ಎಂದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಬಾಷ ಮಾತನಾಡಿ, ಸಣ್ಣ ಮತ್ತು ಅತಿಸಣ್ಣ ರೈತರ ಜಮೀನು ಕೈ ತಪ್ಪುವಂತೆ ನೀತಿಗಳನ್ನು ಜಾರಿಗೊಳಿಸಿ ಬಂಡವಾಳ ಶಾಹಿಗಳಿಗೆ ಬೆಂಬಲಿಸುತ್ತಿದೆ, ಕೇಂದ್ರ ಸರ್ಕಾರದ ತಾರತಮ್ಯಗಳಿಂದ ರೈತರು, ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಬಿಸಿ ಊಟದ ನೌಕರರು ಬೀದಿಗೆ ಬರುತ್ತಿದ್ದಾರೆ, ಕಾರ್ಮಿಕರಿಗೆ ಮುಖ್ಯವಾಗಿ ಬೇಕಿರುವಂತಹ ಕಾನೂನು ಜಾರಿಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

ಸಿಐಟಿಯು ಅಧ್ಯಕ್ಷೆ ವನಜಾಕ್ಷಿ ಮಾತನಾಡಿ, ಕೇಂದ್ರ ಕಾರ್ಮಿಕ ಸಂಘ ಮತ್ತು ಸಂಯುಕ್ತ ಫೆಡರೇಷನ್ ಜಂಟಿ ವೇದಿಕೆ ಕರೆಯ ಮೇರೆಗೆ ಇಂದು ದೇಶದಾದ್ಯಂತ 27 ಲಕ್ಷಕ್ಕೂ ಹೆಚ್ಚಿನ ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ, 2022ರಲ್ಲಿ ಗ್ರಾಚ್ಯುಟಿ ಪಾವತಿಸಲು ಸುಪ್ರಿಂ ಕೋರ್ಟ್ ಆದೇಶವನ್ನೇ ನಿರಾಕರಿಸಿದೆ, ಡಿಜಿಟಲೀಕರಣ ಹೆಸರಿನಲ್ಲಿ ಬಡ ಫಲಾನುಭವಿಗಳನ್ನು ಹೊರಗಿಟ್ಟಿದೆ, ನಾಲ್ಕು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸಿ ಟ್ರೇಡ್ ಯೂನಿಯನ್ ಹಕ್ಕು ಜೊತೆಗೆ ಸಿಐಟಿಯು ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ ಮಾಡಿದರು.
ಅಕ್ಷರ ದಾಸೋಹ ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ಅಕ್ಷರ ದಾಸೋಹ ನೌಕರರ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗುತ್ತಿಲ್ಲಾ, 24–25 ವರ್ಷಗಳಿಂದ ಕನಿಷ್ಠ ಕೂಲಿಯ ರೂಪದಲ್ಲಿಯೂ ಸಹ ವೇತನವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದೇವೆ, ಸರ್ಕಾರ ಕೂಡಲೇ ಕನಿಷ್ಟ ವೇತನವನ್ನಾದರೂ ಜಾರಿಗೊಳಿಸಿ ನೆರವಾಗಬೇಕಿದೆ ಎಂದು ಹೇಳಿದರು.
ಈ ವೇಳೆ ನಗರ ಘಟಕ ಅಧ್ಯಕ್ಷ ಮಾರುತಿ, ಯುವ ಘಟಕ ಅಧ್ಯಕ್ಷ ಶಬ್ಬೀರ್ ಬಾಷಾ, ಕೋಳಾಲ ಘಟಕ ಪ್ರಧಾನ ಕಾರ್ಯದರ್ಶಿ ಮುದ್ದಬಸವಯ್ಯ, ಪೈಲ್ವಾನ್ ಸಿದ್ದರಾಜು, ಪೆನ್ನಪ್ಪ, ದಿನೇಶ್, ಪಾಪಣ್ಣ, ಶ್ರೀನಿವಾಸ್, ಸಿಐಟಿಯು ಸಂಚಾಲಕಿ ಆದಿಲಕ್ಷ್ಮಿ, ಶಾಯಿಸ್ತಾ ಪರ್ವಿನ್, ರಾಜಲಕ್ಷ್ಮಿ,ಅಕ್ಷರ ದಾಸೋಹ ಅಧ್ಯಕ್ಷೆ ನಾಗರತ್ನಮ್ಮ, ನಂಜಮ್ಮ, ವೀಣಾ, ಸುಮಾ, ದೊಡ್ಡಕ್ಕ, ಉಮಾದೇವಿ ಸೇರಿದಂತೆ ಇತರರು ಇದ್ದರು.
ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯ ತಡೆಗಟ್ಟಲು ದೇಶದಾದ್ಯಂತ ಹೋರಾಟದ ಅಲೆ ಎಬ್ಬಿದೆ, ಕಾರ್ಮಿಕ ವಿರೋಧಿ ಕಾನೂನು ಹಿಂಪಡೆದು, ರೈತರ, ಕಾರ್ಮಿಕರ, ನಿರ್ಗತಿಕರ ಬದುಕು ಅಸನಾಗಬೇಕು, ಬಿ.ವಿ.ರಾಮ್ ಜಿ. ಹೆಸರನ್ನು ಉದ್ಯೋಗ ಖಾತ್ರಿ ಯೋಜನೆಯಿಂದ ಹೆಸರು ಬದಲಾಯಿಸಿ ಕಾರ್ಮಿಕರ ಜೀವನಕ್ಕೆ ಅನಾನುಕೂಲ ಉಂಟು ಮಾಡಿದೆ. ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಕೈ ಬಿಟ್ಟು ವಿಶೇಷ ಸೌಲಭ್ಯಗಳನ್ನು ಒದಗಿಸಿ ನೆರವಾಗಬೇಕಿದೆ.
— ಮಂಜುನಾಥ್ ಎಂ.ಜಿ, ಡಿವೈಎಫ್ ಐ ಮುಖಂಡರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


