ಕೊರಟಗೆರೆ: ಲಂಬಾಣಿ ಸಮುದಾಯಕ್ಕೆ ಶ್ರೀ ಸಂತ ಸೇವಾಲಾಲ್ ಮಹಾರಾಜ್ ರವರು ನೀಡಿದ ಕೊಡುಗೆ ಅಪಾರವಾಗಿದೆ ಅವರು ಪ್ರತಿಯೊಬ್ಬರಿಗೂ ಆರಾಧ್ಯ ದೈವರಾಗಿದ್ದಾರೆ ಅವರ ಆದರ್ಶ ತತ್ವ ನಾವೆಲ್ಲರೂ ಪಾಲಿಸಬೇಕು ಎಂದು ತಹಶೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.
ಅವರು ತಾಲ್ಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಸೇವಾಲಾಲ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಲಂಬಾಣಿ ಸಮುದಾಯದ ಜನರು ಕಾಡು, ಬೆಟ್ಟ ಗುಡ್ಡಗಳಲ್ಲಿ ಸಿಗುವ ಸೌದೆಗಳನ್ನು ಕಡಿದು ಅದನ್ನ ಮಾರಿ ಜೀವನ ಸಾಗಿಸುತ್ತಿದ್ದವರು. ಆದರೆ ಈಗ ಕಾಲ ಬದಲಾದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುತ್ತಿರುವ ಎಲ್ ಪಿ ಜಿ ಸಿಲಿಂಡರ್ ಉಜ್ವಲ ಯೋಜನೆಯಿಂದ ಶೇಕಡಾ 99 ರಷ್ಟು ಕುಟುಂಬಗಳು ಇದರ ಉಪಯೋಗ ಪಡೆದುಕೊಳ್ಳುತ್ತಿವೆ.
ಬೆಟ್ಟ ಗುಡ್ಡಗಳ ಮೇಲೆ ಮನೆಗಳನ್ನು ನಿರ್ಮಾಣ ಮಾಡಿಕೊಂಡು ಬದುಕುತ್ತಿದ್ದ ಬಂಜಾರ ಸಮುದಾಯಕ್ಕೆ ಸರ್ಕಾರ ಕಂದಾಯ ಗ್ರಾಮಗಳಾಗಿ ಮಾಡಿ ಎಲ್ಲಾ ರೀತಿಯ ದಾಖಲೆಗಳನ್ನು ನೀಡುತ್ತಿದೆ. ಕೊರಟಗೆರೆ ತಾಲ್ಲೂಕಿನಲ್ಲಿರುವ ಎಲ್ಲಾ ತಾಂಡ, ಹಟ್ಟಿ ಮಜರೆ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಮಾಡಿ ಹಾವೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು 1 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಇದರಿಂದ ಕೊರಟಗೆರೆ ತಾಲ್ಲೂಕಿನಲ್ಲಿ ಸುಮಾರು 2500 ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ಸಿಗಲಿದೆ ಎಂದರು.
ತಾಲ್ಲೂಕು ಬಂಜಾರ ಲಂಬಾಣಿ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ್ ಮಾತನಾಡಿ ಸಂತ ಸೇವಾಲಾಲ್ ರವರ ಆಶೀರ್ವಾದ ನಮ್ಮ ಲಂಬಾಣಿ ಸಮುದಾಯದ ಮೇಲೆ ಸದಾ ಇರುತ್ತದೆ. ಲಂಬಾಣಿ ಸಮುದಾಯದವರು ಅತ್ಯಂತ ಕಷ್ಟ ಜೀವಿಗಳು ನಮ್ಮ ಅಜ್ಜಿ ತಾತನ ಕಾಲದಲ್ಲಿ ಕಾಡಿನಲ್ಲಿರುವ ಸೌದೆಗಳನ್ನು ಕತ್ತರಿಸಿ ಅದನ್ನ ಮಾರಿ ಬರುವಂತಹ ಹಣದಲ್ಲಿ ಜೀವನ ಸಾಗಿಸುತ್ತಿದ್ದಂತಹವರು ಶ್ರೀ ಸಂತ ಸೇವಾಲಾಲ್ ರವರು ತಮ್ಮ ಇಡೀ ಜೀವನವನ್ನೇ ಲಂಬಾಣಿ ಸಮುದಾಯಕ್ಕೋಸ್ಕರ ಮುಡಿಪಾಗಿಟ್ಟಿದ್ದಾರೆ ಎಂದರು.
ತಾಲ್ಲೂಕು ಲಂಬಾಣಿ ಸಂಘದ ಪ್ರಧಾನ ಕಾರ್ಯದರ್ಶಿ ವಿ ಎನ್ ಮೂರ್ತಿ ಮಾತನಾಡಿ ಸಂತ ಸೇವಾಲಾಲ್ ಜನಿಸಿದ ಸ್ಥಳವಾದ ದಾವಣಗೆರೆ ಜಿಲ್ಲೆಯ ಸೂರಗೊಂಡನಕೊಪ್ಪದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಮತ್ತು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಗಳು ನಡೆಯುತ್ತಿವೆ. ಸೂರಗೊಂಡನಕೊಪ್ಪ ಅತ್ಯುತ್ತಮ ಪ್ರವಾಸಿ ತಾಣವಾಗಿ ಸರ್ಕಾರ ಮಾಡುತ್ತಿದೆ, ಸೇವಾಲಾಲ್ ರವರು ಲಂಬಾಣಿ ಸಮುದಾಯ ಮದ್ಯ ವ್ಯಸನಿಗಳಾಗಬಾರದು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ತಮ್ಮ ಕುಟುಂಬ ಗಳ ನಿರ್ವಹಣೆಯ ಜವಾಬ್ದಾರಿ ಹೊರಬೇಕು ಇದರ ಅರಿವನ್ನು ಲಂಬಾಣಿ ಸಮುದಾಯದ ಜನತೆಗೆ ಮೂಡಿಸಬೇಕೆಂದು ಸೇವಾಲಾಲ್ ರವರು ಚಿಂತನೆ ಪಟ್ಟವರು ಹಾಗಾಗಿ ಎಲ್ಲಾ ತಾಂಡಗಳಲ್ಲಿರುವ ಕುಟುಂಬಗಳಿಗೆ ಸೇವಾಲಾಲ್ ರವರ ಆದರ್ಶ ತತ್ವಗಳನ್ನು ಪಾಲಿಸುವ ಅರಿವನ್ನು ನಮ್ಮ ಯುವಕ ಮಿತ್ರರು ಮಾಡಬೇಕು ಎಂದು ಹೇಳಿದರು.
ತಾಲ್ಲೂಕು ಲಂಬಾಣಿ ಸಂಘದ ಖಜಾಂಚಿ ವಿಜಯ ಶಂಕರ್ ಮಾತನಾಡಿ ಶ್ರೀ ಸೇವಾಲಾಲ್ ರವರು ಸಮಾಜಕ್ಕೆ ಕೊಟ್ಟಂತಹ ಕೊಡುಗೆ ಅಪಾರವಾಗಿದೆ. ಇವರು ಲಂಬಾಣಿ ಸಮುದಾಯದ ಅಭಿವೃದ್ಧಿಗಾಗಿ ಮತ್ತು ಏಳಿಗೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿ, ನೂರಾರು ವರ್ಷಗಳ ಹಿಂದೆಯೇ ನಮ್ಮ ಸಮುದಾಯ ಜನ ಮದ್ಯ ಮತ್ತು ತಂಬಾಕು ದುಶ್ಚಟಗಳಿಂದ ದೂರವಿರಬೇಕು ಎಂದು ಸಂದೇಶ ನೀಡಿದವರು. ನಿಜಾಮರ ಕಾಲದಲ್ಲಿ ದೊಡಮಟ್ಟದ ಕಾಲರ ರೋಗ ಬಂದಂತಹ ಸಂದರ್ಭದಲ್ಲಿ ಸಾವಿರಾರು ಜನರಿಗೆ ಔಷದಿನೀಡಿ ಬದುಕಿಸಿದ ಪವಾಡ ಪುರುಷ ಸೇವಾಲಾಲ್ ರವರು. ಹೈದರಾಬಾದ್ ನಲ್ಲಿರುವ ಈಗಿನ ಬಂಜಾರ ಹಿಲ್ಸ್ ಎಂಬ ಸ್ಥಳಕ್ಕೆ ಹೆಸರು ಬರಲು ಮೂಲ ಕಾರಣವೇ ಸೇವಾಲಾಲ್ ರವರು. ಇಡೀ ತಮ್ಮ ಜೀವನವನ್ನೇ ಲಂಬಾಣಿ ಸಮುದಾಯಕ್ಕೋಸ್ಕರ ಮೂಡಿಪಾಗಿಟ್ಟ ಸೇವಾಲಾಲ್ ರವರ ದ್ಯೇಯೋದ್ದೇಶವನ್ನು ನಾವೆಲ್ಲರೂ ಅರಿತುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಸಿಲ್ದಾರ್ ರಾಮಪ್ರಸಾದ್, ಕೃಷಿ ಇಲಾಖೆ ಅಧಿಕಾರಿ ರುದ್ರಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯಮುನಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ್, ಸಿ ಡಿ ಪಿ ಒ ಗಂಗಾಧರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ತಾಲೂಕು ಬಂಜಾರ ಲಂಬಾಣಿ ಸೇವಾ ಸಂಘ ಗೌರವಾಧ್ಯಕ್ಷ ಮೀಸೆ ಲಕ್ಷ್ಮನಾಯ್ಕ, ಉಪಾಧ್ಯಕ್ಷ ಹರೀಶ್ ಬಾಬು, ಸಿದ್ದೇಶ್, ಪುಟ್ಟರಾಜು, ಯುವ ಸಂಚಾಲಕರುಗಳಾದ ಬಾಬುನಾಯ್ಕ್ ಎಂ, ರಂಜಿತ್ ಕುಮಾರ್, ಮುಖಂಡರುಗಳಾದ ಶ್ರೀನಿವಾಸ್ ನಾಯ್ಕ, ಮಾನ್ ಸಿಂಗ್ ನಾಯ್ಕ, ಲಚ್ಚಿರಾಮನಾಯ್ಕ, ರಾಮಸ್ವಾಮಿ ನಾಯ್ಕ ಬಾಲಾಜಿ ಸೇರಿದಂತೆ ಇತರರು ಹಾಜರಿದ್ದರು.
ಸೇವಾಲಾಲ್ ಜಯಂತಿ ಕಾರ್ಯಕ್ರಮದಲ್ಲಿ ಕೊರಟಗೆರೆ ತಾಲ್ಲೂಕಿನ ಶಕುನಿತಿಮ್ಮನಹಳ್ಳಿ ತಾಂಡದ ಲಂಬಾಣಿ ಸಮುದಾಯದ ಯುವಕ ಕಾಳಿಂಗನಾಯ್ಕ ರವರನ್ನು ಗುರುತಿಸಿ ಪಿ ಹೆಚ್ ಡಿ ಪದವಿ ಪಡೆದ ಕಾರಣ ಸನ್ಮಾನಿಸಿ ಗೌರವಿಸಲಾಯಿತು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


