ಕೊರಟಗೆರೆ: ಸುಪ್ರೀಂ ಕೋರ್ಟ್ ಆದೇಶವಿದ್ದರೂ ಒಳ ಮೀಸಲಾತಿ ಜಾರಿಗೊಳಿಸದೆ, ಹಳೆಯ ಪದ್ಧತಿಯಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಮಾದರ ಮಹಾಸಭಾದ ಕೊರಟಗೆರೆ ತಾಲೂಕು ಘಟಕದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣ ಸ್ಥಗಿತಗೊಳಿಸಿ, ಒಳ ಮೀಸಲಾತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
56,432 ಹುದ್ದೆಗಳ ನೇಮಕಾತಿಗೆ ವಿರೋಧ: ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲಂಘಿಸಿ 56,432 ಹುದ್ದೆಗಳನ್ನು ಹಳೆಯ ಮೀಸಲಾತಿ ಪದ್ಧತಿಯಲ್ಲೇ ಭರ್ತಿ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
2022ರ ಹೊಸ ಮೀಸಲಾತಿಯನ್ನು ಸಂವಿಧಾನದ 9ನೇ ಷೆಡ್ಯೂಲ್ ಗೆ ಸೇರಿಸಲು ಸರ್ವಪಕ್ಷಗಳ ಸಭೆ ಕರೆದು, ಪರಿಶಿಷ್ಟ ಜಾತಿಗೆ ಶೇ. 17 ಮತ್ತು ಪ.ಪಂಗಡಕ್ಕೆ ಶೇ. 7 ರಷ್ಟು ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಒತ್ತಾಯ ಮಾಡಿದರು.
ಬೆಳಗಾವಿ ಅಧಿವೇಶನದ ತೀರ್ಮಾನದಂತೆ ಪ್ರವರ್ಗ–ಎ (ಶೇ. 6), ಬಿ (ಶೇ. 6) ಮತ್ತು ಸಿ (ಶೇ. 5) ರಂತೆ ವರ್ಗೀಕರಣವಾಗಬೇಕು. ಮಾದಿಗ ಸೇರಿದಂತೆ 16 ಉಪಜಾತಿಗಳಿರುವ ಪ್ರವರ್ಗ-ಎ ಗುಂಪಿನ ನಿರುದ್ಯೋಗಿಗಳಿಗೆ ಅನ್ಯಾಯವಾಗದಂತೆ ಸರ್ಕಾರ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಲಾಯಿತು.
“ಕಳೆದ 35 ವರ್ಷಗಳಿಂದ ಶೋಷಿತ ಸಮುದಾಯಗಳು ಒಳ ಮೀಸಲಾತಿಗಾಗಿ ಹೋರಾಡುತ್ತಿವೆ. ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಆಧಾರದ ಮೇಲೆ ಸಂವಿಧಾನಬದ್ಧವಾಗಿ ಒಳ ಮೀಸಲಾತಿ ಜಾರಿಯಾಗಲೇಬೇಕು.”
— ಸಿದ್ದೇಶ್ (ವಿಭೂತಿ), ತಾಲೂಕು ಅಧ್ಯಕ್ಷರು, ಕರ್ನಾಟಕ ಮಾದರ ಮಹಾಸಭಾ.
ನೇಮಕಾತಿ ರದ್ದುಪಡಿಸಲು ಒತ್ತಾಯ:
ಜಿಲ್ಲಾ ಪದಾಧಿಕಾರಿ ದಾಡಿ ವೆಂಕಟೇಶ್ ಮಾತನಾಡಿ, “ಮುಖ್ಯಮಂತ್ರಿಗಳು ಹಳೆಯ ಪದ್ಧತಿಯಲ್ಲೇ ನೇಮಕಾತಿ ನಡೆಸಲು ಮುಂದಾಗಿರುವುದು ಖಂಡನಾರ್ಹ. ಇದು ಪರಿಶಿಷ್ಟ ಜಾತಿಯ ಬಡ ವಿದ್ಯಾರ್ಥಿಗಳ ಬದುಕನ್ನು ಸರ್ವನಾಶ ಮಾಡುವ ಸಂಚಾಗಿದೆ. ಕೂಡಲೇ ಪ್ರಸ್ತುತ ನೇಮಕಾತಿಯನ್ನು ರದ್ದುಗೊಳಿಸಿ ಹೊಸ ಆದೇಶದಂತೆ ಜಾರಿಗೊಳಿಸಬೇಕು” ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಉಪಾಧ್ಯಕ್ಷ ಮಂಜುನಾಥ, ಕಾರ್ಯದರ್ಶಿ ಆರ್. ಲಕ್ಷ್ಮೀನರಸಯ್ಯ, ಖಜಾಂಚಿ ವೀರಾಕ್ಯಾತರಾಯ ಹಾಗೂ ಪದಾಧಿಕಾರಿಗಳಾದ ನಾಗರಾಜು, ಭೀಮರಾಜು, ಸುಬ್ಬರಾಯಪ್ಪ, ರವಿಕುಮಾರ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


