ಕೊರಟಗೆರೆ: ತಾಲ್ಲೂಕಿನ ಸಿ.ಎನ್.ದುರ್ಗ ಹೋಬಳಿಯ ಜೋನಿಗರಹಳ್ಳಿ ಗ್ರಾಮದ ಮೃತ ರೈತ ರಮೇಶ್ ಮನೆಗೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಆದೇಶದ ಮೇರೆಗೆ ತಹಶೀಲ್ದಾರ್ ಮಂಜುನಾಥ್ ಕೆ. ಮತ್ತು ಕೃಷಿ ಅಧಿಕಾರಿ ರುದ್ರಪ್ಪ ಭೇಟಿ ನೀಡಿದ್ದಾರೆ.
ಹೈನುಗಾರಿಕೆಗೆಂದು ಮೈಕ್ರೋ ಫೈನಾನ್ಸ್ ಗಳಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿ ಸಾಲದ ಕಂತುಗಳನ್ನು ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದ ಜೋನಿಗರಹಳ್ಳಿ ಗ್ರಾಮದ ಬಡ ರೈತ ರಮೇಶ್ ನಿವಾಸಕ್ಕೆ ತಹಶೀಲ್ದಾರ್ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿ ಧೈರ್ಯ ತುಂಬಲಾಯಿತು.
ರೈತ ರಮೇಶ್ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ ತಹಶೀಲ್ದಾರ್ ಮಂಜುನಾಥ್ ಕೆ. ಮೃತರ ಮನೆಗೆ ಭೇಟಿ ನೀಡಿ, ಮೃತ ರೈತ ರಮೇಶ್ ರವರ ಮರಣ ಪ್ರಮಾಣ ಪತ್ರ, ರಮೇಶ್ ಪತ್ನಿಗೆ ವಿಧವಾ ವೇತನ ಮಂಜೂರಾತಿ ಆದೇಶ ಪತ್ರ ನೀಡಿ ಕೊರಟಗೆರೆ ತಾಲ್ಲೂಕು ಆಡಳಿತ ನೊಂದ ಕುಟುಂಬದ ಜೊತೆ ಸದಾ ಕಾಲ ನಿಲ್ಲಲಿದೆ ಎಂದು ಧೈರ್ಯ ತುಂಬಿದ್ದಾರೆ.
ಶುಕ್ರವಾರ ಬೆಳಗ್ಗೆ ಮೃತ ರೈತನ ಮನೆಗೆ ಭೇಟಿ ನೀಡಿ ಆತ್ಮಹತ್ಯೆ ಪರಿಹಾರ ನಿಧಿಗೆ ಅಗತ್ಯ ಇರುವ ದಾಖಲೆಗಳನ್ನು ಪಡೆದು ಮತ್ತು ವಿಧವಾ ವೇತನದ ಮಂಜೂರಾತಿ ಆದೇಶಕ್ಕೆ ಅರ್ಜಿ ಸಲ್ಲಿಸಿಕೊಂಡಿದ್ದರು.
ಸಂಜೆಯೊಳಗೆ ಮೃತರ ಮರಣ ಪ್ರಮಾಣ ಪತ್ರ ಮತ್ತು ವಿಧವಾ ವೇತನದ ಮಂಜುನಾಥ ಆದೇಶ ಪತ್ರ ನೀಡಿದ್ದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಂತರ ಮಾತನಾಡಿದ ತಹಶೀಲ್ದಾರ್ ಕೆ. ಮಂಜುನಾಥ್, ರೈತ ಆತ್ಮಹತ್ಯೆ ಮಾಡಿಕೊಂಡ ಮಾಹಿತಿ ತಿಳಿದ ಕೂಡಲೇ ತಾಲೂಕು ಆಡಳಿತ ಮೃತನ ಮನೆಗೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಪರಿಶೀಲನೆ ಮಾಡಿ, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾದ ನಂತರ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ರೈತ ಕುಟುಂಬಕ್ಕೆ ಒದಗಿಸಿ, ರೈತ ರಮೇಶ್ ಆತ್ಮಹತ್ಯೆ ಮಾಡಿಕೊಂಡಿರುವುದು ನೈಜ ಪ್ರಕರಣವೆಂದು ದೃಢವಾಗಿದೆ ಎಂದು ತಿಳಿಸಿದ್ದಾರೆ. ನಂತರ ರೈತರ ಆತ್ಮಹತ್ಯೆ ಪರಿಹಾರ ನಿಧಿಯನ್ನು ಅತಿ ಶೀಘ್ರದಲ್ಲೇ ನೀಡುವುದಾಗಿ ಭರವಸೆ ನೀಡಿ ಕುಟುಂಬ ಜೊತೆಗೆ ಸರ್ಕಾರ ನಿರಂತರವಾಗಿ ನಿಲ್ಲುವುದು ಎಂದು ಧೈರ್ಯ ತುಂಬಿದ್ದಾರೆ..
ನಂತರ ಮಾತನಾಡಿದ ನಿವೃತ್ತ ಶಿಕ್ಷಕ ಚನ್ನಪ್ಪ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಸೂಚನೆಯ ಮೇರೆಗೆ ಮತ್ತು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕು ಆಡಳಿತ ರೈತನ ಮನೆಗೆ ಕೆಲವೇ ಗಂಟೆಗಳಲ್ಲಿ ಧಾವಿಸಿ, ಸರ್ಕಾರದಿಂದ ಸಿಗುವ ಸೌಲತ್ತುಗಳನ್ನು ವಿತರಿಸಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಅವರಿಗೆ ಗ್ರಾಮಸ್ಥರ ಪರವಾಗಿ ಧನ್ಯವಾದಗಳು ಅರ್ಪಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ರುದ್ರಪ್ಪ, ಉಪ ತಹಶೀಲ್ದಾರ್ ಎ.ಜಿ.ರಾಜು, ಆರ್.ಐ.ಪ್ರತಾಪ್, ವಿ.ಎ.ಆನಂದ್, ಸಂಜಯ್, ಗ್ರಾಮಸ್ಥರಾದ ನಿವೃತ್ತ ಶಿಕ್ಷಕ ಚನ್ನಪ್ಪ, ಶ್ರೀಕಂಠಪ್ಪ, ಜೆ.ಪಿ.ಸಿದ್ದರಾಜು, ರವಿಕುಮಾರ್, ದಾಡಿ ಶಿವಣ್ಣ, ನಾಗರಾಜು, ಚಿಕ್ಕಣ್ಣ, ತಿಮ್ಮಹನುಮಂತರಾಯಪ್ಪ, ಸೇರಿದಂತೆ ಹಲವರು ಹಾಜರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


