ತಿಪಟೂರು: ತಾಲೂಕನ್ನು ಎರಡನೇ ಹಂತದ ಪಟ್ಟಿಯಲ್ಲಿ ಬರಪೀಡಿತ ಪ್ರದೇಶವೆಂದು ಘೋಷಿಸಲಾಗುವುದು ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು. ಅವರು ನಗರಸಭೆಯ ಶಾಸಕರ ಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆಯ ಹಳೆಯ ಕಲುಷಿತ ನೀರನ್ನು ಈ ವರ್ಷ ಸಂಪೂರ್ಣವಾಗಿ ಖಾಲಿ ಮಾಡಿದ್ದು, ಈ ವರ್ಷ ಕೆರೆಗೆ ಹೊಸದಾಗಿ ಹೇಮಾವತಿ ನೀರನ್ನು ಪಂಪ್ ಮಾಡಿ ನಗರಕ್ಕೆ ಸರಬರಾಜು ಮಾಡುತ್ತಿದ್ದೇವೆ. ಈ ವಿಚಾರವಾಗಿ ನಗರಸಭೆ ಪೌರಾಯುಕ್ತರು ಸಂಬಂಧಪಟ್ಟ ಇಲಾಖೆಯಲ್ಲಿ ನೀರಿನ ಪರೀಕ್ಷೆ ಮಾಡಿ, ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿ, ನೀರಿನ ಪರೀಕ್ಷಾ ಪ್ರಮಾಣ ಪತ್ರ ನೀಡಿದ ಮೇಲೆ ನೀರನ್ನು ಸರಬರಾಜು ಮಾಡುತ್ತಿದ್ದೇವೆ ಎಂದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪ್ರಜಾ ಸೇವಾ ಅಭಿಯಾನವು ಇದೇ ತಿಂಗಳ 05 ರಂದು ಹೊನ್ನವಳ್ಳಿಯಲ್ಲಿ ಹೋಬಳಿ ಮಟ್ಟದಲ್ಲಿ ಚಾಲನೆ ನೀಡಲಾಗುವುದು. ಈ ಸೇವೆಯ ಪ್ರಮುಖ ಉದ್ದೇಶವಾದ ನಾಗರಿಕರಿಂದ ಸಮಸ್ಯೆಗಳ ಆಹವಾಲುಗಳನ್ನು ದೂರಿನ ಫಾರಂನಲ್ಲಿ ನಮೂದಿಸಿ, ಅರ್ಜಿಯನ್ನು ಸ್ವೀಕರಿಸಿ, ಪರಿಹಾರ ಒದಗಿಸಲು ತಾಲೂಕಿನ ಮೊದಲು ಹೋಬಳಿ ಮಟ್ಟ, ನಂತರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಹಸೀಲ್ದಾರ್ ಮೋಹನ್ ಕುಮಾರ್, ತಾಪಂ ಇಒ ಸುದರ್ಶನ್, ಪೌರಾಯುಕ್ತ ವೀೇಶ್ವರ ಬಡರಗಡೆ, ಕೃಷಿ ಇಲಾಖೆಯ ಡಾ.ಪವನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಾಗೇಂದ್ರ, ಲೋಕೋಪಯೋಗಿ ಇಲಾಖೆಯ ನಟರಾಜು, ಬೆಸ್ಕಾಂ ಇಲಾಖೆ ಮನೋಹರ್, ಪಶು ಇಲಾಖೆಯ ನಂದೀಶ್, ತಾರಾಮಣಿ, ಜಲಪಾಕ್ಷಮ್ಮ ಮತ್ತು ರವಿಕುಮಾರ್ ಇದ್ದರು.
ಕೇಂದ್ರ ಸರ್ಕಾರದ ಡ್ರಾಫ್ಟ್ ಮ್ಯಾನುಯಲ್ — 2026 ಪ್ರಕಾರ ಬರಪೀಡಿತ ತಾಲೂಕು ಎಂದು ಘೋಷಿಸಲು ಹಲವು ಟ್ರಿಗ್ಗರ್ ಪಾಯಿಂಟ್ಗಳು ಅವಶ್ಯಕತೆ ಇವೆ. ಮೂರು ಅಥವಾ ಅದಕ್ಕಿಂತ ಹೆಚ್ಚಿನ ವಾರಗಳಲ್ಲಿ ಮಳೆ ಅಗದಿರುವುದು ಮತ್ತು ಬಿತ್ತನೆಯ ಪ್ರಮಾಣ, ಬಿತ್ತಿದ ಬೆಳೆಗಳ ಸ್ಥಿತಿ, ಉಪಗ್ರಹ ಆಧಾರಿತ ಮಣ್ಣಿನ ತೇವಾಂಶದ ಮಾಹಿತಿ, ಅಂತರ್ಜಲದ ಪ್ರಮಾಣ, ಕೆರೆಕಟ್ಟೆಗಳಲ್ಲಿನ ನೀರಿನ ಪ್ರಮಾಣವನ್ನು ಪರಿಗಣಿಸಲಾಗುತ್ತದೆ. ಆ ನಿಟ್ಟಿನಲ್ಲಿ ಮೊದಲ ಪಟ್ಟಿಯಲ್ಲಿ ಬರಪೀಡಿತ ಎಂದು ಪರಿಗಣಿಸಿರುವುದಿಲ್ಲ. ಟ್ರಿಗ್ಗರ್–1 ಮತ್ತು ಟ್ರಿಗ್ಗರ್–2 ಆಧರಿಸಿ, ಗ್ರೌಂಡ್ ಟ್ರೂಟಿಂಗ್ (ಸ್ಥಳ ಸತ್ಯಪಣೆ) ಮಾಡಿ ಸದ್ಯದಲ್ಲಿ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗುತ್ತದೆ.
— ಕೆ.ಷಡಕ್ಷರಿ, ಶಾಸಕರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
