ಕೊರಟಗೆರೆ: ಕೊರಟಗೆರೆಯಿಂದ ಮಲ್ಲೇಶ್ವರಕ್ಕೆ ಹೋಗುವ ರಸ್ತೆ ಮಧ್ಯದಲ್ಲಿ ಸೇತುವೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರು. ರಸ್ತೆಗಳಿಗೆ ಮಣ್ಣನ್ನು ಹಾಕುತ್ತೇವೆ ಎಂದು ಟಿಪ್ಪರ್ ಗಟ್ಟಲೆ ಮಣ್ಣನ್ನು ಅಗೆದು ಹೊರ ಸಾಗಿಸುತ್ತಿರುವ ಘಟನೆ ನಡೆದಿದ್ದು, ಇದು ಸ್ಥಳೀಯ ಅಧಿಕಾರಿಗಳಿಗೆ ಕಾಣುತ್ತಿಲ್ಲವೇ ಅಥವಾ ಕಂಡರೂ ಕಾಣದಂತೆ ಗಾಢನಿದ್ರೆಯಲ್ಲಿ ಮಲಗಿದ್ದಾರೆಯೇ ಎನ್ನುವ ಪ್ರಶ್ನೆಗಳು ಕೇಳಿಬಂದಿವೆ.
ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿಯ ಬಜನಹಳ್ಳಿ ಹಾಗೂ ಕ್ಯಾಮೇನಹಳ್ಳಿ ಹೋಗುವ ರಸ್ತೆ ಪಕ್ಕದಲ್ಲಿರುವ ದೊಡ್ಡ ದೊಡ್ಡ ಬೆಟ್ಟಗಳೇನ್ನೆ ಕರಗಿಸುತ್ತಿರುವ ಗುತ್ತಿಗೆದಾರರು, ದೊಡ್ಡ ದೊಡ್ಡ ಜೆಸಿಬಿ ಹಿಟಾಚಿಗಳನ್ನು ತಂದು ದೊಡ್ಡ ಬೆಟ್ಟಗಳನ್ನೇ ಕರಗಿಸಿ ಭೂತಾಯಿಯ ಒಡಲಿಗೆ ಕೊಡಲಿ ಹಾಕುತ್ತಿದ್ದಾರೆ. ಇಂತಹ ದೊಡ್ಡ ದೊಡ್ಡ ಗುತ್ತಿಗೆದಾರರ ಕಂಪನಿಗಳನ್ನು ಕೂಡಲೇ ರದ್ದು ಮಾಡಬೇಕು. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಣ್ಣು ಅಗೆದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.
ಇದರ ಬಗ್ಗೆ ಮಣ್ಣನ್ನು ಅಗೆಯುತ್ತಿದ್ದ ವ್ಯಕ್ತಿಯನ್ನು ಕೇಳಿದರೆ ನಮಗೇನು ಗೊತ್ತಿಲ್ಲ ಸರ್ ನಮ್ಮ ಗುತ್ತಿಗೆದಾರರ ಬಳಿ ಕೇಳಿ ಎಂದು ಹೇಳುತ್ತಾರೆ. ಅವರಿಗೆ ಕರೆ ಮಾಡಿ ಕೇಳಿದಾಗ ಇದಕ್ಕೆಲ್ಲಾ ನಾವು ಪರ್ಮಿಷನ್ ತೆಗೆದುಕೊಂಡಿದ್ದೇವೆ ಎಂದು ಉಡಾಫೆ ಉತ್ತರ ನೀಡುತ್ತಾರೆ. ಇಷ್ಟಕ್ಕೂ ನಿಮಗೆ ಪರ್ಮಿಷನ್ ಕೊಟ್ಟ ಅಧಿಕಾರಿ ಯಾರು ಎಂದು ಕೇಳಿದಾಗ ಅಲ್ಲಿಂದ ಜೆಸಿಸಿ ಹಾಗೂ ಹಿಟಾಚಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ.
ಇದಕ್ಕೆಲ್ಲಾ ಅಧಿಕಾರಿಗಳ ಕುಮ್ಮಕ್ಕು ಇರಲೇಬೇಕು ಇಲ್ಲದಿದ್ರೆ ಇಷ್ಟರಮಟ್ಟಿಗೆ ರಾಜಾರೋಷವಾಗಿ ಮಣ್ಣನ್ನು ತೆಗೆಯಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಸಣ್ಣ ನೀರಾವರಿ ಇಲಾಖೆಯ ಕೊರಟಗೆರೆಯಿಂದ ಮಲ್ಲೇಶ್ವರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ನಿರ್ಮಾಣವಾಗುತ್ತಿರುವ ಸೇತುವೆ 2. 5ಕೋಟಿಗೆ ಗುತ್ತಿಗೆ ಕರೆಯಲಾಗಿತ್ತು .ಇದರಲ್ಲಿ 6ಜನ ಗುತ್ತಿಗೆದಾರರು ಪಾಲ್ಗೊಂಡಿದ್ದರು .ಅತಿ ಕಡಿಮೆಗೆ ಯಾರೂ ಟೆಂಡರ್ ತೆಗೆದುಕೊಳ್ಳುತ್ತಾರೆ, ಅವರಿಗೆ ಗುತ್ತಿಗೆ ನೀಡಲಾಗುತ್ತದೆ ಅದರಂತೆಯೇ ಆರ್.ಹೆಚ್. ತಿಮ್ಮಪ್ಪ ತುಮಕೂರು ಮೂಲದ ಹೆಬ್ಬೂರು ಗ್ರಾಮದ ಗುತ್ತಿಗೆದಾರ 1.80 ಲಕ್ಷಕ್ಕೆ ಟೆಂಡರ್ ಪಡೆದಿರುವ ವ್ಯಕ್ತಿಯಾಗಿದ್ದಾರೆ.
ಈ ಘಟನೆಯ ಬಗ್ಗೆ ಸ್ಥಳೀಯರೊಬ್ಬರು ಮಾತನಾಡಿ, ಇಲ್ಲಿಂದ ಹೊರ ತೆಗೆದು ಕೊಂಡು ಹೋಗುವ ಮಣ್ಣಿನ ಟಿಪ್ಪರ್ ಗಳು ಲೇಔಟ್ ಗಳು ಮಡುವ ಸ್ಥಳಕ್ಕೆ ತೆಗೆದುಕೊಂಡು ಹೋಗುವ ಗುತ್ತಿಗೆದಾರರು ಕೊರಟಗೆರೆ , ಪಾವಗಡ, ಗೌರಿಬಿದನೂರು, ನೆಲಮಂಗಲ, ಬೆಂಗಳೂರು ಇನ್ನೂ ಅನೇಕ ಕಡೆಗೆ ಇಲ್ಲಿಂದ ಮಣ್ಣನ್ನು ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು .
ಒಂದು ಟಿಪ್ಪರ್ ಲೋಡಿನ ಮಣ್ಣಿಗೆ ಸುಮಾರು 6ರಿಂದ 8ಸಾವಿರ ರೂ ಗಳನ್ನು ತೆಗೆದುಕೊಳ್ಳುತ್ತಾರೆ. 1 ದಿನಕ್ಕೆ ಸುಮಾರು 30ರಿಂದ 35 ಟಿಪ್ಪರ್ ಲೋಡ್ ನಷ್ಟು ಮಣ್ಣನ್ನು ಹೊರ ತೆಗೆದು ಮಾರಾಟ ಮಾಡುತ್ತಾರೆ. ತಾಲ್ಲೂಕಿನಲ್ಲಿ ಕಣ್ಮುಚ್ಚಿ ಕುಳಿತಿರುವ ಕೆಲ ಅಧಿಕಾರಿ ವರ್ಗದವರು ಇವರಿಗೆಲ್ಲ ಪರ್ಮಿಷನ್ ಕೊಡುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಯಾರು ಎಲ್ಲಿದ್ದಾರೆ ಎಂಬುದು ನಿಗೂಢವಾಗಿದೆ.
ಮಣ್ಣನ್ನು ತುಂಬಿ ಕೊಂಡು ಓಡಾಡುತ್ತಿದ್ದ ಈ ಟಿಪ್ಪರ್ ಗಳ ಭಾರ ತಡೆಯಲು ಆಗದೆ ಟಾರ್ ರಸ್ತೆಹಾಳಾಗಿರುವುದು ನೋಡಬಹುದು ಬಹಳ ವರ್ಷಗಳ ನಂತರ ಇತ್ತೀಚೆಗೆ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿದ ಟಾರ್ ರಸ್ತೆ ಸಂಪೂರ್ಣ ಹಾಳಾಗಿ ಹೋಗಿದೆ. ಇನ್ನಾದರೂ ಸ್ಥಳೀಯ ಅಧಿಕಾರಿಗಳು ಎಚ್ಚೆತ್ತುಕೊಂಡು ಶುದ್ಧ ಪರಿಸರವನ್ನು ಹಾಳು ಮಾಡುತ್ತಿರುವಂತಹ ಇಂತಹ ಗುತ್ತಿಗೆದಾರನ್ನು ಕಡಿವಾಣ ಹಾಕುವ ಮೂಲಕ ಕಾನೂನು ಕ್ರಮ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾಗಿದೆ.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5