ಮುಂಬೈ: ಭಾರತದ ವಾಣಿಜ್ಯ ರಾಜಧಾನಿಯಲ್ಲಿ ಸೋಮವಾರ ಭಾರಿ ಗಾಳೀಗೆ ಜಾಹೀರಾತು ಫಲಕ ಕುಸಿದು ಬಿದ್ದು ಸಂಭವಿಸಿದ ದುರಂತದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟು, 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪೂರ್ವ ಮುಂಬೈನ ಪೆಟ್ರೋಲ್ ಬಂಕ್ ಬಳಿ ಅಳವಡಿಸಿದ್ದ ಫಲಕ ಕುಸಿದು ಬಿದ್ದಾಗ 12 ಮಂದಿ ಅದರ ಅಡಿಯಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟರು. ಅವಶೇಷಗಳಡಿ ಸಿಕ್ಕಿಹಾಕಿಕೊಂಡವರಿಗಾಗಿ ರಕ್ಷಣಾ ತಜ್ಞರು ಶೋಧಕಾರ್ಯ ಮುಂದುವರಿಸಿದ್ದಾರೆ. ಎಂಟು ಮೃತದೇಹಗಳನ್ನು ಅವಶೇಷಗಳ ಅಡಿಯಿಂದ ಹೊರತೆಗೆಯಲಾಗಿದೆ ಎಂದು ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆಯ ಇನ್ಸ್ಪೆಕ್ಟರ್ ಗೌರವ್ ಚೌಹಾಣ್ ಹೇಳಿದ್ದಾರೆ. ನಾಲ್ಕು ದೇಹಗಳು ಇನ್ನೂ ಅವಶೇಷಗಳಡಿ ಸಿಕ್ಕಿಹಾಕಿಕೊಂಡಿವೆ ಎಂದು ವಿವರಿಸಿದ್ದಾರೆ.
ಅವರ ಮೃತದೇಹಗಳು ಪತ್ತೆಯಾಗಿವೆ. ಆದರೆ ಪೆಟ್ರೋಲ್ ಪಂಪ್ ಹಾಗೂ ಅಪಾಯಕಾರಿ ಸನ್ನಿವೇಶ ಇರುವುದರಿಂದ ಹೊರತೆಗೆಯಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದ್ದಾರೆ.
ದುರಂತಕ್ಕೆ ಸಂಬಂಧಿಸಿದಂತೆ ಪೊಲೀಸರು ಇಗೋ ಮೀಡಿಯಾ ಮಾಲೀಕ ಭವೇಶ್ ಭಿಂಡೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಜಾಹೀರಾತು ಫಲಕವನ್ನು ಅನುಮತಿ ಇಲ್ಲದೇ ಅಕ್ರಮವಾಗಿ ಅಳವಡಿಸಲಾಗಿತ್ತು ಎಂದು ಹೇಳಲಾಗಿದೆ.
ಮುಂಬೈ ಹಾಗೂ ಮೆಟ್ರೋಪಾಲಿಟನ್ ನಗರದ ವಿವಿಧ ಕಡೆಗಳಲ್ಲಿ ಭಾರಿ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ಮಳೆಸಂಬಂಧಿ ಘಟನೆಗಳಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ದಾದರ್, ಕುರ್ಲಾ, ಮಹೀಂ, ಘಟ್ಕೋಪರ್, ಮುಳುಂದ್ ಮತ್ತು ವಿಖ್ರೋಲಿಯಲ್ಲಿ ಮಳೆ ಹಾಗೂ ಬಿರುಗಾಳಿಯಿಂದ ಜನ ಕಂಗಾಲಾಗಿದ್ದಾರೆ. ದಕ್ಷಿಣ ಮುಂಬೈನಲ್ಲಿ ತುಂತುರು ಮಳೆ ಬಿದ್ದಿದೆ. ಉಪನಗರಗಳಾದ ಥಾಣೆ, ಅಂಬೆರ್ನಾಥ್, ಬಲ್ಡಾಪುರ, ಕಲ್ಯಾಣ್ ಮತ್ತು ಉಲ್ಲಾಸನಗರಗಳಲ್ಲೂ ಸಾಮಾನ್ಯ ಮಳೆಯಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296