ತುಮಕೂರು: ಹೆಣ್ಣು ಮಕ್ಕಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುವವರ ಪ್ರಮಾಣ ಹೆಚ್ಚುತ್ತಿದ್ದು, ಈ ಬಗ್ಗೆ ಹೆಣ್ಣು ಮಕ್ಕಳು ಹೆಚ್ಚು ಜಾಗರೂಕರಾಗಿರಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ಎಚ್ಚರಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ, ದಕ್ಷಿಣ ಮತ್ತು ಉತ್ತರ ಶೈಕ್ಷಣಿಕ ಜಿಲ್ಲೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಬಾಲ ಭವನ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಅಂಗವಾಗಿ ಹದಿಹರೆಯದ ಹೆಣ್ಣು ಮಕ್ಕಳ ಸಾಮಾಜಿಕ ಸಮಸ್ಯೆಗಳು–ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಹಳಷ್ಟು ಪ್ರಕರಣಗಳಲ್ಲಿ ಹೆಣ್ಣು ಮಕ್ಕಳ ಮುಗ್ಧತೆ ಮತ್ತು ಅಸಹಾಯಕತೆಯನ್ನು ಕೆಲವರು ದುರುಪಯೋಗಪಡಿಸಿಕೊಂಡಿರುವುದು ಕಂಡು ಬರುತ್ತಿದೆ. ಇದಕ್ಕೆ ಆಸ್ಪದ ಕೊಡಬಾರದು ಎಂದರು.
ಹದಿಹರೆಯದ ಅವಧಿಯಲ್ಲಿ ಗೊಂದಲಗಳು ಉಂಟಾಗುವುದು ಸಹಜ. ಸಮಸ್ಯೆಗಳು ಹೆಚ್ಚಿದಂತೆ ಸವಾಲುಗಳೂ ಹೆಚ್ಚುತ್ತವೆ. ಇವೆಲ್ಲವನ್ನೂ ನಿಭಾಯಿಸಲು ಆತ್ಮಸ್ಥೈರ್ಯ ಮುಖ್ಯ. ಮಕ್ಕಳು ತಂದೆ–ತಾಯಿಯರ ಮಾತುಗಳನ್ನು ಸಕಾರಾತ್ಮಕವಾಗಿ ಆಲಿಸಬೇಕು. ಶಿಕ್ಷಕರಿಗೆ ಗೌರವ ಕೊಡಬೇಕು. ಈ ಅವಧಿಯಲ್ಲಿ ನಕಾರಾತ್ಮಕ ಪ್ರತಿಕ್ರಿಯೆಗಳಿಂದ ಭವಿಷ್ಯ ಹಾಳಾಗುವ ಸಾಧ್ಯತೆ ಇರುತ್ತದೆ ಎಂದರು.
ಮೊಬೈಲ್ ಬಳಕೆಯಿಂದ ಯುವ ಜನತೆ ಹೆಚ್ಚು ಹಾಳಾಗುತ್ತಿದ್ದು, ಒಮ್ಮೆ ಮೊಬೈಲ್ ಗಳಿಗೆ ಅಡಿಕ್ಟ್ ಆದರೆ ಅದರಿಂದ ಹೊರಬರುವುದು ಕಷ್ಟ. ಅಪರಿಚಿತರು ಹತ್ತಿರವಾಗುತ್ತಾರೆ. ಶಿಕ್ಷಣ ಮೊಟಕಾಗುತ್ತದೆ. ಪ್ರೇಮದ ಬಲೆಗೆ ಸಿಲುಕಿ ಬಾಲ್ಯ ವಿವಾಹ, ಪೋಕ್ಸೋ ಪ್ರಕರಣಗಳಿಗೆ ಇಡೀ ಕುಟುಂಬ ಬಲಿಯಾಗಬೇಕಾಗುತ್ತದೆ. ಸೈಬರ್ ಕ್ರೈಂಗಳಿಗೂ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ ಆರ್.ಜಿ. ಮಾತನಾಡಿ, ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ಮಕ್ಕಳು ಮಾಡುವ ತಪ್ಪಿನಿಂದಾಗಿ ಪೋಷಕರು ಪರಿತಪಿಸುತ್ತಿದ್ದಾರೆ. ಯಾವ ಪೋಷಕರೂ ಮಕ್ಕಳ ಬಗ್ಗೆ ಕೆಟ್ಟದ್ದು ಬಯಸುವುದಿಲ್ಲ. ಆದರೆ ಪೋಷಕರನ್ನೇ ಮಕ್ಕಳು ವಿಲನ್ ರೀತಿಯಲ್ಲಿ ಕಾಣುತ್ತಿದ್ದಾರೆ. ಹದಿಹರೆಯದ ಈ ಅವಧಿಯಲ್ಲಿ ಶಿಕ್ಷಣವೇ ಮುಖ್ಯವಾಗಬೇಕು. ಅದಕ್ಕಾಗಿ ಓದಬೇಕು. ಪುಸ್ತಕಗಳೇ ನಮ್ಮ ಗೆಳೆಯರಾಗಬೇಕು. ಈಗ ಕತ್ತು ಬಗ್ಗಿಸಿ ಓದಿದರೆ ಮುಂದೆ ತಲೆ ಎತ್ತಿ ಓಡಾಡಬಹುದು ಎಂದು ಸಲಹೆ ನೀಡಿದರು.
ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞ ಡಾ.ಶ್ರೀನಿವಾಸ ಪ್ರಸಾದ್ ಮಾತನಾಡಿ, 9 ರಿಂದ 14 ವರ್ಷದೊಳಗಿನ ಅವಧಿ ಅತ್ಯಂತ ಪ್ರಮುಖ ಘಟ್ಟ. ಹಾರ್ಮೋನ್ ಗಳು ಬದಲಾವಣೆ ಹೊಂದುತ್ತವೆ. ಈ ಅವಧಿಯಲ್ಲಿ ನಕಾರಾತ್ಮಕ ಚಿಂತನೆಗಳು ಹೆಚ್ಚುತ್ತವೆ. ವಿರುದ್ಧ ದಿಕ್ಕಿನ ಲಿಂಗತ್ವದ ಕಡೆಗೆ ಆಕರ್ಷಣೆ ಹೆಚ್ಚುತ್ತದೆ. ಈ ಅವಧಿಯಲ್ಲಿ ಮೂಡುವುದು ಕ್ಷಣಿಕ ಆಕರ್ಷಣೆಯೇ ಹೊರತು ನಿಜವಾದ ಪ್ರೀತಿಯಲ್ಲ ಎಂದು ತಿಳುವಳಿಕೆ ಹೇಳಿದರು.
ಮಕ್ಕಳ ಕಲ್ಯಾಣ ಸಮಿತಿ ಮಾಜಿ ಸದಸ್ಯ ಹಾಗೂ ವಕೀಲ ಸಾ.ಚಿ.ರಾಜಕುಮಾರ ಮಾತನಾಡಿ, ಕಳೆದ 100 ವರ್ಷಗಳ ಹಿಂದಿನ ಸಮಾಜವನ್ನು ಅವಲೋಕಿಸಿದರೆ ಹೆಣ್ಣು ಮಕ್ಕಳಿಗೆ ಸ್ವಾತಂತ್ರ್ಯವೇ ಇರಲಿಲ್ಲ. ಸತಿ ಸಹಗಮನ, ಬಾಲ್ಯ ವಿವಾಹದಂತಹ ಹಲವು ಅನಿಷ್ಠಗಳು ಮನೆ ಮಾಡಿದ್ದವು. ಈಗ ಕಾಲ ಸಂಪೂರ್ಣ ಬದಲಾಗಿದೆ. ಹಲವು ಹಕ್ಕುಗಳು ಪ್ರಾಪ್ತವಾಗಿವೆ. ಅದರ ಜೊತೆಯಲ್ಲೇ ಅಸುರಕ್ಷಿತ ವಾತಾವರಣವೂ ಹೆಚ್ಚುತ್ತಿದೆ. ಈ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಎಂದರು.
ಅಪರಿಚಿತರೊಂದಿಗೆ ಸಲುಗೆ ಬೆಳೆಸುವುದು, ಮನೆಯವರೊಂದಿಗೆ ಜಗಳ ಆಡಿ ಮನೆಬಿಟ್ಟು ಹೋಗುವುದು, ಸ್ನೇಹಿತರೊಂದಿಗೆ ಗೊತ್ತಿಲ್ಲದಂತೆ ಪ್ರಯಾಣ ಬೆಳೆಸುವುದು ಅತ್ಯಂತ ಅಪಾಯಕಾರಿ. ಮುಂದೆ ಎದುರಾಗಬಹುದಾದ ಕೆಟ್ಟ ಸನ್ನಿವೇಶಗಳಿಗೆ ಪೋಷಕರು ತಲೆಕೊಡಬೇಕಾಗುತ್ತದೆ. ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳು ತುಂಬಾ ಕಠಿಣವಾಗಿದ್ದು, ಎಚ್ಚರದಿಂದ ಇರುವಂತೆ ಸಲಹೆ ನೀಡಿದರು.
ಜಿಲ್ಲಾ ಬಾಲಭವನದ ವ್ಯವಸ್ಥಾಪಕ ರಾಘವೇಂದ್ರ ಬಿ.ಪಿ. ಹಾಗೂ ಜಿಲ್ಲಾ ಬಾಲಭವನದ ಕಾರ್ಯಕ್ರಮ ಸಂಯೋಜಕಿ ಮಮತ ಪಿ. ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಾಗಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ದಿನೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲೋಕೇಶ್, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹಿರಿಯ ಪತ್ರಕರ್ತ ಮಲ್ಲೇಶ್, ವಿವಿಧ ತಾಲ್ಲೂಕುಗಳ ಶಿಕ್ಷಕರು/ಮಕ್ಕಳು ಎಂಪ್ರೆಸ್ ಹಾಗೂ ಸೇಂಟ್ ಮೇರಿಸ್ ಶಾಲೆಯ ಹೆಣ್ಣು ಮಕ್ಕಳು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4