ತುಮಕೂರು: ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಹಾವಳಿಗೆ ಕಡಿವಾಣ ಹಾಕಲು ಸರ್ಕಾರ ಮಟ್ಟದಲ್ಲಿ ಅನೇಕ ಚರ್ಚೆ, ಬೆಳವಣಿಗೆಗಳು ನಡೆಯುತ್ತಿದ್ದು ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 25,000 ಸೈಬರ್ ಪ್ರಕರಣಗಳು ದಾಖಲಾಗುತ್ತಿವೆ. ಇದರಲ್ಲಿ ಶೇ.20 ರಷ್ಟು ಪ್ರಕರಣ ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ. ಇನ್ನುಳಿದ ಪ್ರಕರಣ ಪತ್ತೆ ಹಾಕಲು ಸಂಶೋಧನಾತ್ಮಕವಾಗಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ. ಅದರ ಜೊತೆಗೆ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಡಿಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯೂರಿಟಿ ಸೆಂಟರ್ನ್ನು ತುಮಕೂರಿನಲ್ಲಿ ತೆರೆಯಲು ತಯಾರಿ ನಡೆಸಲಾಗಿದೆ ಎಂದು ಗೃಹ ಸಚಿವರು ಹಾಗೂ ಸಾಹೇ ವಿವಿ ಕುಲಾಧಿಪತಿಗಳಾದ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ಅವರು ಹೇಳಿದರು.
ನಗರದ ಕುಣಿಗಲ್ ರಸ್ತೆಯ ಎಸ್ ಎಸ್ ಐಟಿ ಕ್ಯಾಂಪಸ್ ಆವರಣದಲ್ಲಿ ನೂತನವಾಗಿ ಆರಂಭಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಇಂದು (ಭಾನುವಾರ) ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಈ ಹಿಂದೆ ಗೃಹ ಸಚಿವನಾಗಿದ್ದ ಕಾಲಘಟ್ಟದಲ್ಲಿ ಇದರ ಸ್ಥಾಪನೆಗೆ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಲಾಗಿತ್ತು. ಈಗ ಪೊಲೀಸ್ ಇಲಾಖೆ ಸೇರಿದಂತೆ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಸೈಬರ್ ಸೆಕ್ಯೂರಿಟಿ ವಿಭಾಗದ ಜೊತೆಗೆ ಸೇರಿ ಸೆಂಟರ್ ಆಫ್ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯೂರಿಟಿ ಸೆಂಟರ್ ಸದ್ಯವೇ ಆರಂಭಿಸಲಾಗುವುದು ಎಂದರು.
ಸೈಬರ್ ಸೆಕ್ಯೂರಿಟಿ ಕೋರ್ಸ್ ನ ವಿದ್ಯಾರ್ಥಿಗಳಿಗೂ ಪೂರಕವಾಗುವಂತೆ ಚೆನ್ನೈನ ಕಂಪನಿಯೊಂದರ ಸಹಯೋಗದೊಂದಿಗೆ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸೈಬರ್ ಸೆಕ್ಯೂರಿಟಿ ಕೇಂದ್ರ ಶೀಘ್ರವಾಗಿ ಉದ್ಘಾಟನೆ ಗೊಳ್ಳಲಿದ್ದು, ಶೈಕ್ಷಣಿಕ ಚಟುವಟಿಕೆ ಜೊತೆಗೆ ಸಾರ್ವಜನಿಕರಿಗೆ ಆಗುವ ಡಿಜಿಟಲ್ ವ್ಯವಹಾರದ ಮೋಸ, ವಂಚೆನೆ ಪ್ರಕರಣಗಳನ್ನು ಬೇಗ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಲ್ಯಾಬ್ ಸ್ಥಾಪನೆಗೆ ಒತ್ತು:
ಪ್ರಪಂಚದ ಮೂಲೆ ಮೂಲೆಯ ನಾನಾ ದೇಶಗಳಲ್ಲಿ ಅಂಗ ಸಂಸ್ಥೆಗಳನ್ನು ಹೊಂದಿರುವ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂಬ ಮಾತು ಪ್ರಚಲಿತದಲ್ಲಿದ್ದು, ಇದಕ್ಕೆ ಪೂರಕವೆಂಬಂತೆ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಡೇಟಾ ಸೈನ್ಸ್ ಮತ್ತು ಸೈಬರ್ ಸೆಕ್ಯೂರಿಟಿಯಂತಹ ವಿನೂತನ ತಂತ್ರಜ್ಞಾನದ ನೂತನ ಕೋರ್ಸ್ಗಳನ್ನು ಈಗಾಗಲೇ ಆರಂಭಿಸಿದ್ದು ಶೈಕ್ಷಣಿಕ ಚಟುವಟಿಕೆಗಳಿಗೆ ಅನುಗುಣವಾಗಿ ಅಗತ್ಯ ಮೂಲ ಸೌಕರ್ಯಗಳನ್ನು ನೀಡಲಾಗುವುದು. ಸಮಾಜದ ಮುಖ್ಯ ವಾಹಿನಿಯಾಗಿರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕೊರ್ಸ್ನ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕವಾಗಿ ಟಾಪ್ಎಂಡ್ ಸೌಲಭ್ಯಗಳನ್ನು ನೀಡಿ ಅವರು ವಿಶ್ವಮಟ್ಟದ ಸ್ವರ್ಧಾತ್ಮಕವಾಗಿ ಸಜ್ಜುಗೊಳಿಸುವ ಗರುತರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಪರಮೇಶ್ವರ ನುಡಿದರು.
ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ:
ಸ್ಥಳೀಯವಾಗಿ ಶುದ್ಧವಾದ ನೀರನ್ನು ಒದಗಿಸುವ ಸಲುವಾಗಿ ಹಾಗೂ ಸಿವಿಲ್ ವಿಭಾಗದ ವಿದ್ಯಾರ್ಥಿಗಳ ಪ್ರಾಯೋಗಿಕ ಹಾಗೂ ಸಂಶೋಧನಾನ್ಮಕ ಕೆಲಸಗಳಿಗೆ ಪೂರಕವಾಗದ ಪರಂ ಕುಡಿವ ನೀರಿನ ಘಟಕ ಲೋಕಾರ್ಪಣೆಗೊಂಡಿದ್ದು, ಅತ್ಯಾಧುನಿಕ ತಂತ್ರಜ್ಞಾನದಿಂದ ಮಿನಿರಲ್ ಒಳಗೊಂಡಂತಹ ಪರಂ ಶುದ್ಧ ಕುಡಿಯುವ ನೀರಿನ ಕೇಂದ್ರವನ್ನು ವ್ಯಾಪಾರದ ಉದ್ದೇಶದಿಂದ ಸ್ಥಾಪಿಸಲಾಗಿಲ್ಲ. ಸ್ಥಳೀಯವಾಗಿ ಉತ್ತಮವಾದ ಶುದ್ಧಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಸ್ಥಾಪನೆ ಮಾಡಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಬಳಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಸಿದ್ದಾರ್ಥ ಶಿಕ್ಷಣ ಸಂಸ್ಥೆಯು ಮುಂದೆ ಇಂತಹ ಇನ್ನೂ ಅನೇಕ ಜನಪಯೋಗಿ ಕಾರ್ಯಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡಸಿದೆ ಎಂದು ಡಾ.ಜಿ ಪರಮೇಶ್ವರ್ ಅವರು ತಿಳಿಸಿದರು.
ಇದೇ ವೇಳೆ ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವಿಭಾಗಗಳ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್, ಹವಾ ನಿಯಂತ್ರಿತ ನೂತನ ಅತ್ಯಾಧುನಿಕ ಸುಸಜ್ಜಿತ ಸಭಾಂಗಣಕ್ಕೆ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಸದಸ್ಯರಾದ ಕನ್ನಿಕಾ ಪರಮೇಶ್ವರಿ, ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ.ಕೆ.ಬಿ.ಲಿಂಗೇಗೌಡ, ರಿಜಿಸ್ಟಾರ್ಅಶೋಕ್ ಮೆಹ್ತಾ, ಸಾಹೇ ವಿವಿ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ ವೀರಯ್ಯ, ಎಸ್ ಎಸ್ ಐಟಿ ಪ್ರಾಂಶುಪಾಲರಾದ ಡಾ.ಎಂ.ಎಸ್.ರವಿಪ್ರಕಾಶ್, ಎಸ್ಟೇಟ್ ಮ್ಯಾನೇಜರ್ ಡಾ.ಜಿ.ಡಿ.ಶಿವರಾಜು, ಮೆಡಿಕಲ್ ಕಾಲೇಜಿನ ಸಾನಿಕೊಪ್ಪ, ಉಪಪ್ರಾಂಶುಪಾಲರಾದ ಡಾ.ಪ್ರಭಾಕರ್, ಎಸ್ ಎಸ್ ಎಸ್ ಇ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಲ್.ಸಂಜೀವ್ ಕುಮಾರ್, ತುಮಕೂರು ಜಿಲ್ಲಾ ಪಂಚಾಯಿತಿ ಸಿಇಓ ಜಿ ಪ್ರಭು ಸೇರಿದಂತೆ ವಿವಿಧ ವಿಭಾಗಗಳು ಮುಖ್ಯಸ್ಥರು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4