ತುಮಕೂರು: ಲೋಕಸಭೆ ಚುನಾವಣೆ ಹೊಸ್ತಿನಲ್ಲಿ ತುಮಕೂರಿನಲ್ಲಿ ಪಕ್ಷಾಂತರ ಪರ್ವ ಭರ್ಜರಿಯಾಗಿ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಮುಖಂಡರು ಪಕ್ಷ ಬದಲಿಸುತ್ತಿದ್ದಾರೆ.
ಲೋಕಸಭೆ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ರಣತಂತ್ರ ರಚಿಸಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ಬಿಜೆಪಿಯ ವಿ. ಸೋಮಣ್ಣ ಅವರ ಗೆಲುವಿಗೆ ಮಾಜಿ ಪ್ರಧಾನಿ ದೇವೇಗೌಡ ತುಮಕೂರು ಪ್ರವಾಸ ಆರಂಭಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಎಚ್. ನಿಂಗಪ್ಪ ಮನೆಗೆ ಭೇಟಿ ನೀಡಿ ಪಕ್ಷಕ್ಕೆ ಆಹ್ವಾನ ನೀಡಿದ್ದ ಎಚ್ ಡಿಡಿ ಅವರ ನಡೆ ಕಾಂಗ್ರೆಸ್ ಮುಖಂಡರ ಕಣ್ಣು ಕೆಂಪಾಗಿಸಿದೆ.
ಇದೇ ವೇಳೆ ದಳಪತಿಗಳಿಗೆ ಶಾಕ್ ಕೊಡಲು ಮುಂದಾದ ಕೈ ಪಡೆಯು ಎಚ್ ಡಿಡಿ ಭೇಟಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ರಿವರ್ಸ್ ಆಪರೇಷನ್ ಮಾಡುತ್ತಿದೆ. ಜೆಡಿಎಸ್ ಮುಖಂಡನಿಗೆ ಗಾಳ ಹಾಕಿದ ಕೈ ನಾಯಕರು, ತುಮಕೂರು ನಗರದ ಜೆಡಿಎಸ್ ಮುಖಂಡ ಗೋವಿಂದರಾಜುಗೆ ಪಕ್ಷ ಸೇರ್ಪಡೆಗೆ ಆಹ್ವಾನ ನೀಡಿದ್ದಾರೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾಗಿರೋ ಗೋವಿಂದರಾಜು. ತೆನೆ ಇಳಿಸಿ ಕೈ ಹಿಡಿತಾರಾ ಜೆಡಿಎಸ್ ಮುಖಂಡ ಎಂಬ ಚರ್ಚೆ ಜೋರಾಗಿದೆ. ಸಹಕಾರ ಸಚಿವ ಕೆ.ಎನ್. ರಾಜಣ್ಣ ಮನೆಯಲ್ಲಿ ಗೌಪ್ಯ ಸಭೆ ನಡೆದಿದ್ದು ಸಚಿವ ಕೆ.ಎನ್. ರಾಜಣ್ಣ ಮನೆಯಲ್ಲಿ ಗೃಹ ಸಚಿವ ಪರಮೇಶ್ವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಸಭೆಯಲ್ಲಿ ಸಚಿವರ ಜೊತೆ ಶಾಸಕ ಎಸ್.ಆರ್. ಶ್ರೀನಿವಾಸ್, ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಭಾಗಿಯಾಗಿದ್ದಾರೆ.
ಈ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರ ಜಿದ್ದಾಜಿದ್ದಿಯ ಹೋರಾಟಕ್ಕೆ ವೇದಿಕೆ ಸಾಕ್ಷಿಯಾದಂತಾಗಿದೆ. ಇನ್ನು ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಅವರಿಗೆ ಜೆಡಿಎಸ್ ಮುಖಂಡರು ಸಂಪೂರ್ಣ ಬೆಂಬಲವನ್ನು ಬಹಿರಂಗವಾಗಿ ಘೋಷಣೆ ಮಾಡುತ್ತಿರುವುದು, ಕೈ ಪಾಳಯದಲ್ಲಿ ಒಂದು ರೀತಿ ನಡುಕ ಹುಟ್ಟಿಸುವಂತೆ ಆಗಿದೆ. ಜೆಡಿಎಸ್ ಮುಖಂಡರ ಹಾಗೂ ಬಿಜೆಪಿ ಮುಖಂಡರ ಈ ವೇಗಕ್ಕೆ ತಡೆವಟ್ಟಲು ಕಾಂಗ್ರೆಸ್ ಮುಖಂಡರು ಸಹ ಜೆಡಿಎಸ್ ನ, ಅತೃಪ್ತ ಸ್ಥಳೀಯ ಮುಖಂಡರನ್ನು ಕಲೆ ಹಾಕುತ್ತಿದ್ದಾರೆ. ಅಲ್ಲದೆ ಅವರನ್ನು ಪಕ್ಷಕ್ಕೆ ಬಹಿರಂಗವಾಗಿಯೇ ಸೇರ್ಪಡೆಗೊಳಿಸಿಕೊಳ್ಳುವ ಸದ್ದಿಲ್ಲದ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296