ಕೇಂದ್ರ ವಿಭಾಗದ ಶೇಷಾದ್ರಿಪುರಂ, ಕಬ್ಬನ್ಪಾರ್ಕ್, ಹಲಸೂರು ಗೇಟ್, ವಿಲ್ಸನ್ ಗಾರ್ಡನ್, ಎಸ್ಜೆ ಪಾರ್ಕ್ ಮತ್ತು ವೈಯ್ಯಾಲಿಕಾವಲ್ ಠಾಣೆ ಪೊಲೀಸರು ವಿವಿಧ ಪ್ರಕರಣಗಳಲ್ಲಿ 24 ಮಂದಿ ಆರೋಪಿಗಳನ್ನು ಬಂಧಿಸಿ 30 ಪ್ರಕರಣಗಳನ್ನು ಪತ್ತೆಹಚ್ಚಿ ನಗದು ಸೇರಿದಂತೆ 1.32 ಕೋಟಿ ಬೆಲೆಬಾಳುವ ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಕಬ್ಬನ್ಪಾರ್ಕ್ ಠಾಣೆ ಪೊಲೀಸರು 74 ಹಾಗೂ ಶೇಷಾದ್ರಿಪುರಂ ಠಾಣೆ ಪೊಲೀಸರು 13 ಮೊಬೈಲ್ಗಳು ಸೇರಿದಂತೆ ಒಟ್ಟು 87 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಮೌಲ್ಯ 7.80 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ದ್ವಿಚಕ್ರ ವಾಹನ ಕಳವು ಪ್ರಕರಣದಲ್ಲಿ ಶೇಷಾದ್ರಿಪುರಂ ಠಾಣೆ ಪೆÇಲೀಸರು 14, ಕಬ್ಬನ್ಪಾರ್ಕ್ 4, ಎಸ್ಜೆ ಪಾರ್ಕ್ 4 ಹಾಗೂ ವಯ್ಯಾಲಿಕಾವಲ್ ಠಾಣೆ ಪೊಲೀಸರು 5 ದ್ವಿಚಕ್ರ ವಾಹನ ಸೇರಿ 27 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಮೌಲ್ಯ 13.50 ಲಕ್ಷ ರೂ.ಗಳಾಗಿದೆ.
ಚಿನ್ನಾಭರಣ ಕಳ್ಳತನ ಪ್ರಕರಣದಲ್ಲಿ ಹಲಸೂರು ಗೇಟ್ ಠಾಣೆ ಪೊಲೀಸರು 296 ಗ್ರಾಂ ಹಾಗೂ ಕಬ್ಬನ್ಪಾರ್ಕ್ ಠಾಣೆ ಪೊಲೀಸರು 44 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದು, 17.30 ಲಕ್ಷ ರೂ. ಮೌಲ್ಯದ 340 ಗ್ರಾಂ ಚಿನ್ನಾಭರಣ ವಶಪಡಿಸಿ ಕೊಳ್ಳಲಾಗಿದೆ. ಶೇಷಾದ್ರಿಪುರಂ ಠಾಣೆ ಪೊಲೀಸರು 45 ಲಕ್ಷ ರೂ. ಮೌಲ್ಯದ 7 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಹಲಸೂರು ಗೇಟ್ ಠಾಣೆ ಪೊಲೀಸರು 58 ಕೆಜಿ ಬೆಳ್ಳಿ ಹಾಗೂ ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು 500 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಮೌಲ್ಯ 34.90ರೂ.ಗಳಾಗಿವೆ. ಹಲಸೂರು ಗೇಟ್ ಠಾಣೆ ಪೊಲೀಸರು 4.39 ಲಕ್ಷ ನಗದು ಹಾಗೂ ಕಬ್ಬನ್ಪಾರ್ಕ್ ಠಾಣೆ ಪೊಲೀಸರು 2 ಲಕ್ಷ ನಗದು ಸೇರಿ ಆರೋಪಿಗಳಿಂದ ಒಟ್ಟು 6.39 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.ಬ್ಯಾಂಕ್ನಲ್ಲಿ 7.50 ಲಕ್ಷ ಹಣವನ್ನು ಫ್ರೀಜ್ಮಾಡಲಾಗಿದೆ.
ಮೊಬೈಲ್ ದರೋಡೆ ಪ್ರಕರಣಗಳು: ಕಬ್ಬನ್ಪಾರ್ಕ್ ಹಾಗೂ ಅಶೋಕನಗರ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಐದು ಮಂದಿಯನ್ನು ಬಂಧಿಸಿ ಸುದ್ದಗುಂಟೆಪಾಳ್ಯ, ಅಶೋಕನಗರ, ಹೈಗ್ರೌಂಡ್ಸ್, ಮಾಗಡಿ ರಸ್ತೆ ಮತ್ತು ಶ್ರೀರಾಂಪುರ ಠಾಣಾ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದ 74 ಮೊಬೈಲ್ಗಳು, 4 ದ್ವಿಚಕ್ರ ವಾಹನ, 2 ಲಕ್ಷ ಹಣ ವಶಪಡಿಸಿಕೊಂಡಿದ್ದು, ಇವುಗಳ ಒಟ್ಟು ಮೌಲ್ಯ 13 ಲಕ್ಷ ರೂ.ಗಳಾಗಿದೆ.
ಬಂಧಿತರ ಪೈಕಿ ಇಬ್ಬರು ಹಳೆ ಆರೋಪಿಗಳಾಗಿದ್ದು, ಸಾರ್ವಜನಿಕರು ನಡೆದು ಹೋಗುವಾಗ ಅವರ ಕೈಯಿಂದ ಮೊಬೈಲ್ ಕಿತ್ತುಕೊಂಡು ಬೇರೆ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಮಾರಾಟ ಮಾಡುತ್ತಿದ್ದರು.
ದರೋಡೆ ಪ್ರಕರಣಗಳು: ಶೇಷಾದ್ರಿಪುರಂ ಠಾಣೆ ಪೊಲೀಸರು ಆರು ಮಂದಿಯನ್ನು ಬಂಧಿಸಿ 80 ಸಾವಿರ ಬೆಲೆಬಾಳುವ 13 ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಬೆಳಗಿನ ಜಾವ ವಾಯುವಿಹಾರ ಮಾಡುವವರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದರು.
ಮನೆ ಕನ್ನಗಳವು ಪ್ರಕರಣಗಳು: ಹಲಸೂರು ಗೇಟ್ ಠಾಣೆ ಪೊಲೀಸರು ಬಾಡಿ ವಾರೆಂಟ್ ಪಡೆದು ಹಳೆ ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿ 6.50 ಲಕ್ಷ ಬೆಲೆಬಾಳುವ 100 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ, 39 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿ ವಿರುದ್ಧ 65 ಪ್ರಕರಣಗಳು ದಾಖಲಾಗಿವೆ.
ಬೆಳ್ಳಿ ವಶ: ಹಲಸೂರು ಗೇಟ್ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ 14 ಕೆಜಿ, 380 ಗ್ರಾಂ ತೂಕದ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿ 30 ಸಾವಿರ ಬೆಲೆಬಾಳುವ 500 ಗ್ರಾಂ ಬೆಳ್ಳಿ ಚೈನ್, ಬ್ರೇಸ್ಲೆಟ್, ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಮಾಗಡಿ ಮೂಲದ ಮೂವರು ಆರೋಪಿಗಳನ್ನು ಮತ್ತೊಂದು ಪ್ರಕರಣದಲ್ಲಿ ಬಂಧಿಸಿ 40 ಕೆಜಿ ಬೆಳ್ಳಿ ಗಟ್ಟಿ, 196 ಗ್ರಾಂ ಚಿನ್ನದ ಆಭರಣ, 4 ಲಕ್ಷ ನಗದು ವಶಪಡಿಸಿಕೊಂಡಿದ್ದು, ಇವರು ಜ್ಯುವೆಲರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆರೋಪಿ ಗಳು ಆಗಿಂದಾಗ್ಗೆ ಬೆಳ್ಳಿಯನ್ನು ಅಂಗಡಿ ಯಿಂದಲೇ ಕಳವು ಮಾಡುತ್ತಿದ್ದುದು ವಿಚಾರಣೆಯಿಂದ ಗೊತ್ತಾಗಿದೆ.
ಕಳವು ಪ್ರಕರಣ: ಕಬ್ಬನ್ಪಾರ್ಕ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ 2 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ಮೌಲ್ಯ 2.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಿವಾಸಗೌಡ, ಕಬ್ಬನ್ಪಾರ್ಕ್ ಉಪವಿಭಾಗದ ಎಸಿಪಿ ರಾಜೇಂದ್ರ, ಹಲಸೂರು ಗೇಟ್ ಉಪವಿಭಾಗದ ಎಸಿಪಿ ನಾರಾಯಣಸ್ವಾಮಿ, ಶೇಷಾದ್ರಿಪುರಂ ಉಪವಿಭಾಗದ ಎಸಿಪಿ ಚಂದ್ರನ್ಕುಮಾರ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ಗಳಾದ ಚೈತನ್ಯ, ರವಿ, ಜಗದೀಶ್, ರಾಜು, ಶ್ರೀನಿವಾಸ್ ಹಾಗೂ ಸತೀಶ್ಕುಮಾರ್ ಈ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದು, ಈ ಪತ್ತೆ ಕಾರ್ಯವನ್ನು ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy