ಕೊರಟಗೆರೆ: ಮನುಷ್ಯನ ಬದುಕಿಗೆ ಧರ್ಮ ಪರಿಪಾಲನೆ ಬಹುಮುಖ್ಯ ಎಂದು ಬಾಳೇಹೊನ್ನೂರು ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಅವರು ಚನ್ನರಾಯನದುರ್ಗ ಹೋಬಳಿ ಸಿದ್ದರಬೆಟ್ಟದ ಶ್ರೀಬಾಳೇಹೊನ್ನೂರು ಖಾಸಾ ಶಾಖಾ ಮಠದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ 20ನೆ ವಾರ್ಷಿಕೋತ್ಸವ ಮತ್ತು ಜನಜಾಗೃತಿ ಧರ್ಮ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಧರ್ಮ, ಸಂಸ್ಕೃತಿ ಮತ್ತು ಸಂಸ್ಕಾರ ಜನರ ನಿಜವಾದ ಆಸ್ತಿ. ಬದುಕಿನ ವಿಕಾಸಕ್ಕೆ ಧರ್ಮವೇ ಅಡಿಪಾಯ ಎಂದು ಕರೆ ಕೊಟ್ಟರು.
ಸಿದ್ದರಬೆಟ್ಟ ಶ್ರೀಬಾಳೇಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಸಮಾಜದಲ್ಲಿ ಸಾಮೂಹಿಕ ವಿವಾಹವು ವಿಶೇಷ ಪಾತ್ರ ವಹಿಸಿದೆ. ಸಿದ್ದರಬೆಟ್ಟ ಶ್ರೀಮಠಕ್ಕೆ ಭಕ್ತ ಸಮೂಹವೇ ಶ್ರೀರಕ್ಷೆ ಎಂದು ಹೇಳಿದರು.
ತುಮಕೂರು ನಗರ ಶಾಸಕ ಜ್ಯೋತಿಗಣೇಶ್ ಮಾತನಾಡಿ, ಸಿದ್ದರಬೆಟ್ಟ ಶ್ರೀಮಠದ 20ನೆ ವಾರ್ಷಿಕೋತ್ಸವ ಕಾರ್ಯಕ್ರಮ ಇತಿಹಾಸದ ಪುಟ ಸೇರಿದೆ. ಶ್ರೀ ಕ್ಷೇತ್ರದ ಪ್ರತಿಯೊಬ್ಬ ಸಹ ಷೇಧಧಿ ಗುಣ ಹೊಂದಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಪೀಠಾಧ್ಯಕ್ಷರು, ಮಾಲಿಮಠ, ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯ, ತಂಗನಹಳ್ಳಿಯ ಬಸವಮಾಲಿಂಗ, ಚಿಕ್ಕತೊಟ್ಲುಕೆರೆಯ ಮಲ್ಲಿಕಾರ್ಜುನ ಸ್ವಾಮೀಜಿ, ತೆಗ್ಗಿಹಾಳ್ಳಿಯ ರಮಾನಂದ ಸ್ವಾಮಿ, ತಮ್ಮ ಡಿಹಳ್ಳಿಯ ಸಿದ್ಧಲಿಂಗ ದೇಶಿಕೇಂದ್ರ ಸ್ವಾಮಿ, ಚಿಮ್ಮಲಗಿಯ ಸಿದ್ಧರೇಣುಕ ಶಿವಾಚಾರ್ಯ, ತಾವರೆಹಳ್ಳಿಯ ಗೋಸಲ ಚನ್ನಬಸವೇಶ್ವರ ಶಿವಾಚಾರ್ಯ, ಸೂಪದ ಸೋಮೇಶ್ವರ ಶಿವಾಚಾರ್ಯ, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯ, ಹೊಸವನಹಳ್ಳಿಯ ನಂಜುಂಡೇಶ್ವರ ಒಡೆಯರ್, ನಾಗವಂದದ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.
ಸಮಾರಂಭದಲ್ಲಿ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ, ಪಿ.ಎನ್.ಕೃಷ್ಣಮೂರ್ತಿ, ಮಹಾಲಿಂಗಪ್ಪ ಹೆಚ್.ಕೆ., ಅಖಿಲ ಭಾರತ ವೀರಶೈವ ಲಿಂಗಾಯತ ಜಿಲ್ಲಾ ಯುವಾಧ್ಯಕ್ಷ ಡಾ.ಕೆ.ಎಲ್.ದರ್ಶನ್, ಕೊರಟಗೆರೆ ಅಧ್ಯಕ್ಷ ವೀರಭದ್ರಯ್ಯ, ಉಪಾಧ್ಯಕ್ಷ ಶಿವಕುಮಾರ್, ನಿವೃತ್ತ ಐಎಎಸ್ ಅಧಿಕಾರಿ ದಯಾಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೇರೆಶಂಕರ್, ಜೆಡಿಎಸ್ ಅಧ್ಯಕ್ಷ ಕಾಮರಾಜು, ಮುಖಂಡರಾದ ಕೃಷ್ಣಪ್ಪ, ಬಲರಾಮಯ್ಯ, ರಾಮಮೂರ್ತಿ, ರುದ್ರಮುನಿ, ವಿನಯ್, ಗಿರೀಶ್ ಇತರರು ಇದ್ದರು.
ಗಮನ ಸೆಳೆದ ಪುಸ್ತಕ ದಾಸೋಹ ಸಿದ್ದರಬೆಟ್ಟ ಶ್ರೀಮಠದಿಂದ ಭಕ್ತರಿಗಾಗಿಯೇ ವಿಶೇಷವಾಗಿ 10 ಸಾವಿರ ಪುಸ್ತಕ ದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಒಬ್ಬ ಭಕ್ತ 1 ಪುಸ್ತಕ ತಂದರೆ 2 ಪುಸ್ತಕ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಲಾಗಿತ್ತು. ಇದೇ ವೇಳೆ ಪರಿಸರ ರಕ್ಷಣೆಗಾಗಿ ಶ್ರೀಮಠದಿಂದ ಭಕ್ತರಿಗೆ 5 ಸಾವಿರ ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು.
20 ಉಚಿತ ಸಾಮೂಹಿಕ ವಿವಾಹ
ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ 20 ಯುವ ಜೋಡಿಗಳಿಗೆ ಶ್ರೀಗಳ ನೇತೃತ್ವದಲ್ಲಿ ಸಾಮೂಹಿಕ ವಿವಾಹ ನಡೆಯಿತು. ಶ್ರೀಮಠದ 20 ಭಕ್ತರಿಗೆ ವಿಶೇಷ ಗುರುರಕ್ಷೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು. ಶ್ರೀ ವೀರೇಂದ್ರ ಹೆಗ್ಗಡೆ ಅವರು ಅನಾರೋಗ್ಯದ ಪ್ರಯುಕ್ತ ಸಮಾರಂಭಕ್ಕೆ ಗೈರಾದ ಹಿನ್ನೆಲೆ ಧರ್ಮಸ್ಥಳಕ್ಕೆ ತೆರಳಿ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡುವುದಾಗಿ ಶ್ರೀಗಳು ತಿಳಿಸಿದರು.
ಸಿದ್ದರಬೆಟ್ಟ ಶ್ರೀಗಳು ಶ್ರೀಮಠ ಕಟ್ಟುವ ಬದಲಾಗಿ ಭಕ್ತರ ಮನಸ್ಸು ಕಟ್ಟಿದ್ದಾರೆ. ಸಿದ್ದರಬೆಟ್ಟ ಶ್ರೀಮಠವು 20 ವರ್ಷದ ಅವಧಿಯಲ್ಲಿ ಜಾತಿಭೇದ ಮತ್ತು ವರ್ಣಭೇದ ಇಲ್ಲದೇ ರಾಷ್ಟ್ರ ಮಟ್ಟಕ್ಕೆ ಬೆಳೆದಿದೆ. ಶ್ರೀಕ್ಷೇತ್ರದಲ್ಲಿ 108 ಅಡಿ ಎತ್ತರದ ಶಿವಲಿಂಗ ಸ್ಥಾಪನೆಗೆ ಭಕ್ತರ ಸಹಕಾರ ಅತ್ಯಗತ್ಯ.
-ಡಾ.ಹನುಮಂತನಾಥ ಸ್ವಾಮೀಜಿ, ಪೀಠಾಧ್ಯಕ್ಷರು, ಎಲೆರಾಂಪುರ ಶ್ರೀಕ್ಷೇತ್ರ.
ಬಾಳೇಹೊನ್ನೂರು ಜಗದ್ಗುರುಗಳ ಆಶೀರ್ವಾದ ಮತ್ತು ಶ್ರೀರಕ್ಷೆಯೇ ಸಿದ್ದರಬೆಟ್ಟ ಕ್ಷೇತ್ರವು ಬೆಳೆಯಲು ಕಾರಣ. ಸ್ವಾಮೀಜಿಗಳ ಹತ್ತಾರು ಸಮಾಜಸೇವೆ ಕಾರ್ಯಕ್ರಮಗಳೇ ಇವತ್ತಿನ ಭಕ್ತಸಾಗರಕ್ಕೆ ಸಾಕ್ಷಿ. ಮೊಬೈಲ್ ಕಡಿತ ಮಾಡಲು ಪುಸ್ತಕ ಮೆರವಣಿಗೆ ಕಾರ್ಯಕ್ರಮವೇ ಹೆಮ್ಮೆ.
-ಶ್ರೀಕಾರದ ವೀರಬಸವ ಸ್ವಾಮೀಜಿ, ಪೀಠಾಧ್ಯಕ್ಷರು, ಬೆಳ್ಳಾವಿ.
ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕೃತಿ ಮರೆಯಾಗಿದೆ. ಶ್ರೀ ವೀರಭದ್ರ ಶಿವಾಚಾರ್ಯರು 50 ವರ್ಷದ ಸಾಧನೆಯನ್ನು ಕೇವಲ 20 ವರ್ಷದಲ್ಲಿ ಮಾಡಿ ಭಕ್ತರ ಮನಸ್ಸಿನಲ್ಲಿ ನೆಲೆಸಿ ಕ್ರಿಯಾಶೀಲ ಬದುಕಿಗೆ ಸಾಕ್ಷಿಯಾಗಿದ್ದಾರೆ.
-ಶ್ರೀರಂಭಾಪುರಿದಾ.ವೀರಸೋಮೇಶ್ವರ ಜಗದ್ಗುರುಗಳು, ಬಾಳೇಹೊನ್ನೂರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




