ತುಮಕೂರು: ಮುಂಗಾರು ಹಂಗಾಮು ಪ್ರಾರಂಭದ ಮುನ್ನ ಜಮೀನಿನಲ್ಲಿ ಮಾಗಿ ಉಳುಮೆ ಮಾಡುವುದರಿಂದ ಹೊಲದ ಮಣ್ಣಿನ ಸವಕಳಿ ತಡೆದು ಅದರ ಫಲವತ್ತತೆ ಹೆಚ್ಚಳವಾಗಲು ಸಹಕಾರಿಯಾಗಲಿದ್ದು, ರೈತರು ತಪ್ಪದೆ ಮಾಗಿ ಉಳುಮೆ ಮಾಡಬೇಕೆಂದು ಪಾವಗಡ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಅಜಯ್ ಕುಮಾರ್ ಆರ್. ಸಲಹೆ ನೀಡಿದ್ದಾರೆ.
ಕೃಷಿ ಭೂಮಿಯಲ್ಲಿ ಅತ್ಯಂತ ಸಹಜವಾಗಿ ನೀರು ಇಂಗಿಸುವ ವಿಧಾನವೇ ಮಾಗಿ ಉಳುಮೆ. ಇಳಿಜಾರಿಗೆ ಅಡ್ಡಲಾಗಿ ಮಾಡುವುದರಿಂದ ಮಣ್ಣಿನ ಸವಕಳಿ ತಡೆದು ಅದರ ಫಲವತ್ತತೆಯನ್ನು ಉಳಿಸಬಹುದು. ಹದವಾಗಿ ಉಳುಮೆ ಮಾಡುವುದರಿಂದ ಹೆಂಟೆಗಳು ಒಡೆಯತ್ತವೆ. ಮಣ್ಣಿನ ಕಣಗಳ ರಚನೆ ಸುಧಾರಿಸುತ್ತದೆ. ಈ ವಿಧಾನದಿಂದ ಮಣ್ಣು ಸಡಿಲವಾಗುವ ಕಾರಣ ಬಿದ್ದ ಮಳೆ ನೀರು ಭೂಮಿಯ ಹೊರ ಪದರದಲ್ಲಿ ಹರಿದು ಹೋಗದೆ ಒಳಗಡೆ ಇಳಿಯುತ್ತದೆ. ಇದರಿಂದ ಜಮೀನು ತೇವಾಂಶದಿAದ ಕೂಡಿರುತ್ತದೆ.
ಮಾಗಿ ಉಳುಮೆ ಮಾಡುವುದರಿಂದ ಮಣ್ಣಿನ ಕೆಳ ಪದರದಲ್ಲಿರುವ ರೋಗಾಣುಗಳ ಶೀಲೀಂದ್ರ ಕೀಟಗಳು ಮತ್ತು ಅವುಗಳ ಮೊಟ್ಟೆ, ಕೋಶಗಳು ಬಿಸಿಲಿಗೆ ನಾಶವಾಗುವುದರ ಜೊತೆಗೆ ಪಕ್ಷಿಗಳಿಗೆ ಆಹಾರವಾಗುತ್ತದೆ. ಬೆಳೆಗಳ ತ್ಯಾಜ್ಯ ವಸ್ತುಗಳಾದ ಬೇರು, ಕಾಂಡ, ಇತರೆ ಸಸ್ಯದ ಭಾಗಗಳು ಭೂಮಿಯ ಒಳಗಡೆ ಸೇರಿ ಕೊಳೆಯುವಿಕೆಗೆ ಸಹಕಾರಿಯಾಗುತ್ತದೆ.
ಮುಂಗಾರು ಹಂಗಾಮು ಪ್ರಾರಂಭದ ಮೊದಲು ಜಮೀನನ್ನು ಉಳುಮೆ ಮಾಡಿದರೆ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದಲ್ಲದೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದು ಎಂದು ಅವರು ಸಲಹೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW