ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ವರನಟ ಡಾ. ರಾಜ್ಕುಮಾರ್ ಅವರ ಸಮಾಧಿ ಸ್ಥಳದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಹಂಚಿಕೊಂಡಿದ್ದ ನಟ ಚೇತನ್ ಅಹಿಂಸಾ ಅವರ ವಿರುದ್ಧ ಈಗ ಕಾನೂನು ಸಂಕಷ್ಟ ಎದುರಾಗಿದೆ. ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ಇತ್ತೀಚೆಗೆ ಡಾ. ರಾಜ್ಕುಮಾರ್ ಅವರ ಜನ್ಮದಿನದ ಸಂದರ್ಭದಲ್ಲಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಚೇತನ್, ರಾಜ್ಕುಮಾರ್ ಅವರ ಸಮಾಧಿಗಾಗಿ ಸರ್ಕಾರ 2.5 ಎಕರೆ ಜಾಗ ನೀಡಿರುವುದನ್ನು ಪ್ರಶ್ನಿಸಿದ್ದರು. 21ನೇ ಶತಮಾನದಲ್ಲಿ ಭೂಮಿಯೇ ಅತ್ಯಂತ ಪ್ರಮುಖ ಹೋರಾಟದ ವಸ್ತುವಾಗಿದೆ. ಸರ್ಕಾರವು ಸಾರ್ವಜನಿಕ ಭೂಮಿಯನ್ನು ಜನರ ಉಪಯೋಗಕ್ಕೆ ಬಳಸಬೇಕೇ ಹೊರತು, ಕೇವಲ ಮತಗಳ ಲಾಭಕ್ಕಾಗಿ ವ್ಯಕ್ತಿಗಳ ಸ್ಮರಣಾರ್ಥ ಹಂಚಬಾರದು ಎಂದಿದ್ದರು.
ನಟ ಚೇತನ್ ಅವರ ಈ ನಡೆಗೆ ರಾಜ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಾ. ರಾಜ್ಕುಮಾರ್ ಸೇನೆಯ ವತಿಯಿಂದ ಪೊಲೀಸರಿಗೆ ದೂರು ನೀಡಲಾಗಿದ್ದು, ಕೋಟಿಗಟ್ಟಲೆ ಅಭಿಮಾನಿಗಳ ಆರಾಧ್ಯ ದೈವವಾಗಿರುವ ಅಣ್ಣಾವ್ರಿಗೆ ಅಪಮಾನ ಮಾಡಲಾಗಿದೆ ಅಂತಾ ಆರೋಪಿಸಲಾಗಿದೆ.
ಕನ್ನಡಿಗರ ಭಾವನೆಗಳಿಗೆ ನೋವುಂಟು ಮಾಡಿರುವ ಚೇತನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಟ ಚೇತನ್ ಅವರು ಈ ಕೂಡಲೇ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ನಮಗೆ ಚೇತನ್ ಅವರ ಹೇಳಿಕೆಯಿಂದ ಬಹಳ ನೋವಾಗಿದೆ. ಚಿತ್ರರಂಗಕ್ಕೆ ಮತ್ತು ಸಮಾಜಕ್ಕೆ ಡಾ. ರಾಜ್ ನೀಡಿದ ಕೊಡುಗೆ ಅಪಾರ. ಅವರ ಸ್ಮಾರಕದ ಬಗ್ಗೆ ಈ ರೀತಿ ಚಕಾರ ಎತ್ತುವುದು ಸರಿಯಲ್ಲ,” ಎಂದು ಅಭಿಮಾನಿಗಳು ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


