ಕೊರಟಗೆರೆ: ಸರ್ಕಾರದಿಂದ ಶಾಲಾ ಕಾಲೇಜುಗಳ ಬಡ ಹೆಣ್ಣು ಮಕ್ಕಳಿಗೆ ಅನುಕೂಲವಾಗಲೆಂದು ಸ್ಯಾನಿಟರಿ ಪ್ಯಾಡ್ ಗಳ ಉಚಿತ ವಿತರಣೆ ಮಾಡಲಾಗಿದ್ದರೆ, ಇತ್ತ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಮೌಲ್ಯದ ಸ್ಯಾನಿಟರಿ ಪ್ಯಾಡ್ ಗಳನ್ನು ಹಂಚಿಕೆ ಮಾಡದೇ ಗೋಡಾನ್ ನಲ್ಲಿ ಕೊಳೆಯಲು ಹಾಕಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕೊರಟಗೆರೆ ತಾಲೂಕಿನ ವೈದ್ಯಾಧಿಕಾರಿ ವಿಜಯ್ ಕುಮಾರ್ ಅವರ ನಿರ್ಲಕ್ಷ್ಯದಿಂದಾಗಿ ಬಡ ಹೆಣ್ಣುಮಕ್ಕಳಿಗೆ ಸೇರಬೇಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸ್ಯಾನಿಟರಿ ಪ್ಯಾಡ್ ಗಳು ಆಸ್ಪತ್ರೆ ವಠಾರದಲ್ಲಿರುವ ಗೋಡಾನ್ ನಲ್ಲಿ ಕೊಳೆಯುತ್ತಿವೆ ಎನ್ನುವ ಆರೋಪ ಕೇಳಿ ಬಂದಿದೆ.
ಸರ್ಕಾರದ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ, ಬಡ ಹೆಣ್ಣು ಮಕ್ಕಳಿಗೆ ಈ ಕೊಡುಗೆ ನೀಡಿದೆ. ಆದರೆ, ಇದು ಫಲಾನುಭವಿಗಳಿಗೆ ದೊರಕದೇ ಈ ರೀತಿಯಾಗಿ ಗೋಡಾನ್ ನಲ್ಲಿ ಕೊಳೆಯುತ್ತಿರುವುದು ದುರದೃಷ್ಟಕರವಾಗಿದೆ. ಈ ಬಗ್ಗೆ ಸಂಬಂಧ ಪಟ್ಟವರು ತಕ್ಷಣವೇ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.
ಪಾಳು ಬಿದ್ದಿರುವ ಸ್ಥಿತಿಯಲ್ಲಿರುವ ಗೋಡಾನ್ ನಲ್ಲಿ ಸ್ಯಾನಿಟರಿ ಪ್ಯಾಡ್ ಗಳು ಕಂಡು ಬಂದಿದ್ದು, “ಶುಚಿ” ಎಂದು ಬರೆಯಲಾಗಿರುವ ರಟ್ಟಿನ ಬಾಕ್ಸ್ ಗಳಲ್ಲಿ ಸರ್ಕಾರ ಉಚಿತವಾಗಿ ನೀಡುತ್ತಿರುವ ಸ್ಯಾನಿಟರಿ ಪ್ಯಾಡ್ ಗಳು ಕಂಡು ಬಂದಿವೆ. ಹೆಣ್ಣು ಮಕ್ಕಳಿಗೆ ವಿತರಿಸಬೇಕಾದ ಸ್ಯಾನಿಟರಿ ಪ್ಯಾಡ್ ಗಳು ಇಲ್ಲೇಕೆ ಕೊಳೆಯುತ್ತಿವೆ ಎನ್ನುವುದು ತಿಳಿದು ಬಂದಿಲ್ಲ. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಸರ್ಕಾರಿ ಸವಲತ್ತುಗಳು ವ್ಯರ್ಥವಾಗುತ್ತಿವೆ. ಇದನ್ನು ಸಬ್ದಳಕೆ ಮಾಡಲು ಯಾಕೆ ಕ್ರಮಕೈಗೊಳ್ಳಲಾಗುತ್ತಿಲ್ಲ ಎನ್ನುವ ಪ್ರಶ್ನೆಗಳಿಗೆ ಕಾರಣವಾಗಿದೆ.
ಎಷ್ಟೋ ಬಡವರ ಮನೆಗಳಲ್ಲಿ ಹೆಣ್ಣು ಮಕ್ಕಳು ಸ್ಯಾನಿಟರಿ ಪ್ಯಾಡ್ ಇಲ್ಲದೇ ತಮ್ಮ ಮುಟ್ಟಿನ ಅವಧಿಯಲ್ಲಿ ಸಾಕಷ್ಟು ತೊಂದರೆಗೀಡಾಗುತ್ತಾರೆ. ಹಳ್ಳಿಗಳಲ್ಲಿ ಎಷ್ಟೋ ಮನೆಗಳಲ್ಲಿ ಇನ್ನು ಕೂಡ ಸ್ಯಾನಿಟರಿ ಪ್ಯಾಡ್ ಕೊಳ್ಳಲು ಸಾಧ್ಯವಾಗದ ಹೆಣ್ಣು ಮಕ್ಕಳು ಎಷ್ಟೋ ಸಂಖ್ಯೆಯಲ್ಲಿದ್ದಾರೆ. ಇಂತಹವರಿಗೆ ಸದ್ಬಳಕೆಯಾಗಬೇಕಿರುವ ಸರ್ಕಾರದ ಸೌಲಭ್ಯಗಳು ಆಸ್ಪತ್ರೆಗಳ ಗೋಡೌನ್ ಗಳಲ್ಲಿ ಕೊಳೆಯುತ್ತಿರುವುದು ದುರದೃಷ್ಟಕರವಾಗಿದೆ.
ಈ ಘಟನೆಯ ಬಗ್ಗೆ ತಕ್ಷಣವೇ ಸಂಬಂಧಪಟ್ಟವರು ಗಮನ ಹರಿಸಬೇಕು, ಮಾತ್ರವಲ್ಲದೇ ಇಡೀ ರಾಜ್ಯದಲ್ಲಿ ಈ ಸ್ಯಾನಿಟರಿ ಪ್ಯಾಡ್ ಗಳನ್ನು ವ್ಯರ್ಥ ಮಾಡುತ್ತಿರುವ ಘಟನೆಗಳ ಕುರಿತು ತನಿಖೆಗೆ ಸಂಬಂಧಪಟ್ಟವರು ಮುಂದಾಗಬೇಕು ಎನ್ನುವುದೇ ನಮ್ಮತುಮಕೂರು ಸದಾಶಯ.
ವರದಿ: ಮಂಜುಸ್ವಾಮಿ.ಎಂ.ಎನ್. ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5